‘ ಭಗೀರಥ” ಚಿತ್ರದ ಮಾವ ಮಾವ ಪ್ರೋಮೋಷನಲ್ ಹಾಡಿನ ಮೂಲಕ ಪ್ರಚಾರ ಆರಂಭ

ವಿಭಿನ್ನ ಕಥೆಯನ್ನಿಟ್ಟಿಕೊಂಡು ಸಿದ್ದಪಡಿಸಿರುವ “ಭಗೀರಥ”. ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ” ಮಾವ ಮಾವ” ಎಂಬ ಪ್ರಮೋಷನಲ್ ಹಾಡು ಚಿತ್ರೀಕರಣ ಮಾಡಲಾಗಿದೆ. ಇದರೊಂದಿಗೆ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ.

ಅಸಾಧ್ಯವಾದ್ದುದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ ಅದನ್ನು ” ಭಗೀರಥ ” ಪ್ರಯತ್ನ ಎನ್ನುವುದುಂಟು, ಇದೀಗ ಚಿತ್ರತಂಡ ” ಭಗೀರಥ ” ಹೆಸರನ್ನಿಟ್ಟುಕೊಂಡು ಚಿತ್ರವನ್ನು ಜನರ ಮುಂದೆ ಇಡಲು ಸಿದ್ದವಾಗಿದೆ.
ಪ್ರಚಾರದ ಸಲುವಾಗಿ ಮಾಡಿರುವ “ಮಾವ ಮಾವ” ಹಾಡಿನಲ್ಲಿ
ನಾಯಕ ಜಯಪ್ರಕಾಶ್, ನಾಯಕಿಯರಾದ ನಿಸರ್ಗ ಅಣ್ಣಪ್ಪ ಹಾಗೂ ರೂಪಶ್ರೀ ಅಭಿನಯಿಸಿದ್ದಾರೆ. ನಾಗಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಾಡು ಹಾಗು ಚಿತ್ರದ ಬಗ್ಗೆ ತಂಡ ಮಾಹಿತಿ ಹಂಚಿಕೊಂಡಿತು

ಈ ವೇಳೆ ಮಾತಿಗಿಳಿದ ನಿರ್ದೇಶಕ ರಾಮ್ ಜನಾರ್ದನ್, ಹದಿನೈದು ವರ್ಷಗಳ ಹಿಂದೆ “ಬಾಯ್ ಫ್ರೆಂಡ್” ಚಿತ್ರದ ಮೂಲಕ ನಿರ್ದೇಶಕನಾದೆ. ಈಗ ವಿಭಿನ್ನ ಕಥೆಯುಳ್ಳ ಭಗೀರಥ ಚಿತ್ರವನ್ನು ನಿರ್ದೇಶಿಸಿದ್ದೇನೆ. “ಭಗೀರಥ” ಹೆಸರೆ ಹೇಳುವಂತೆ ಅಸಾಧ್ಯವಾದುದ್ದನ್ನು ಸಾಧಿಸುವವನು ಎಂದು. ಚಿತ್ರದ ಕಥೆಯೂ ಇದೇ ಅರ್ಥದಲ್ಲಿ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಮುಂದಿನವಾರ ಚಿತ್ರ ಸೆನ್ಸಾರ್ ಮುಂದೆ ಬರಲಿದೆ ಎಂದರು
ಇತ್ತೀಚೆಗೆ ಚಿತ್ರದ ಪ್ರಮೋಷನಲ್ ಸಾಂಗ್ ನ ಚಿತ್ರೀಕರಣ ಕೆ ಆರ್ ಪುರದಲ್ಲಿ ನಡೆದಿದ್ದು, ಜಯಪ್ರಕಾಶ್, ನಿಸರ್ಗ, ರೂಪಶ್ರೀ ಭಾಗಿಯಾಗಿದ್ದರು. ಈ ಹಾಡು ಪ್ರಮೋಷನ್ ಗೆ ಮಾತ್ರ ಬಳಸಿಕೊಳ್ಳುವುದಿಲ್ಲ. ಚಿತ್ರದಲ್ಲೂ ಇರುತ್ತದೆ. ಮಂಗ್ಲಿ ಹಾಗೂ ವಿಜಯ್ ಪ್ರಕಾಶ್ ಈ ಹಾಡನ್ನು ಸದ್ಯದಲ್ಲೇ ಹಾಡಲಿದ್ದಾರೆ ಎಂದು ತಿಳಿಸಿದರು.

ನಿರ್ಮಾಪಕ ಬಿ.ಭೈರಪ್ಪ ಮಾತನಾಡಿ ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ನಾನು ಹಾಗೂ ಕೆ.ರಮೇಶ್ ಚಿತ್ರ ನಿರ್ಮಿಸಿದ್ದೇವೆ. ಜೊತೆಗೆ ಚಿತ್ರದಲ್ಲಿ ಸಣ್ಣ ಪಾತ್ರ ಕೂಡ ಮಾಡಿದ್ದೇನೆ ಎಂದರು.
ನಾಯಕ ಜಯಪ್ರಕಾಶ್ ಮಾತನಾಡಿ ಪತ್ರಕರ್ತನಾಗಿದ್ದೆ. “ಜಮಾನ” ಚಿತ್ರದ ಮೂಲಕ ನಟನಾದೆ. “ಭಗೀರಥ” ಚಿತ್ರದಲ್ಲಿ ಯಾವುದಕ್ಕೂ ಹೆದರದ, ವಿಲ್ ಪವರ್ ಇರುವ ಮನುಷ್ಯನ ಪಾತ್ರ ನನ್ನದು. ಈ ಚಿತ್ರದಲ್ಲಿ ಸಾಹಸ ಸನ್ನಿವೇಶಗಳು ಹೈಲೆಟ್. ನಾನು ಕರಾಟೆ ಪಟು ಆಗಿರುವುದರಿಂದ ಸಾಹಸ ಸನ್ನಿವೇಶದಲ್ಲಿ ನಟಿಸುವುದು ಸುಲಭವಾಯಿತು. ಇದೊಂದು ಕೌಟುಂಬಿಕ ಚಿತ್ರ ಎಂದರು.
ನಿಸರ್ಗ ಅಣ್ಣಪ್ಪ ಮಾತನಾಡಿ ಚಿತ್ರದಲ್ಲಿ ನನ್ನದು ರಾಧಾ ಎಂಬ ಪಾತ್ರ ಎಂದು ಪಾತ್ರದ ಬಗ್ಗೆ ಮಾಹಿತಿಹಂಚಿಕೊಂಡರು

ಮತ್ತೊಬ್ಬ ನಾಯಕಿ ರೂಪಶ್ರೀ ಮಾತನಾಡಿ ರುಕ್ಮಿಣಿ ನನ್ನ ಪಾತ್ರದ ಹೆಸರು ಎಂದರು

ಖಳನಟ ಶಶಿಧರ್, ನೃತ್ಯ ನಿರ್ದೇಶಕ ನಾಗಿ, ಛಾಯಾಗ್ರಾಹಕ ಮಹೇಶ್ ತಲಕಾಡು ಮುಂತಾದವರು “ಭಗೀರಥ” ಚಿತ್ರದ ಕುರಿತು ಮಾತನಾಡಿದರು. ಕಾರ್ಯಕಾರಿ ನಿರ್ಮಾಪಕ ಚೇತನ್ ರಮೇಶ್, “ಭಗೀರಥ” ಸಾಗಿಬಂದ ಬಗ್ಗೆ ವಿವರಿಸಿದರು.

ಪ್ರದೀಪ್ ವರ್ಮ ಸಂಗೀತ ನಿರ್ದೇಶನ ಹಾಗೂ ಸೂರಿ ಚಿತ್ತೂರು ಛಾಯಾಗ್ರಹಣವಿರುವ ಚಿತ್ರದ ತಾರಾಬಳಗದಲ್ಲಿ ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಲ ರಾಜವಾಡಿ, ನಯನ, ಸುರಭಿ ರವಿ, ಶ್ರೀಯಾ ಪಾವನಿ, ನಿಸರ್ಗ ಅಣ್ಣಪ್ಪ, ರೂಪಶ್ರೀ, ಶಶಿಧರ್ ಮುಂತಾದವರಿದ್ದಾರೆ.