ಆರ್. ಚಂದ್ರು ಸದಭಿರುಚಿ ಚಿತ್ರಗಳ ಸರದಾರ : ಪ್ರಾಮಾಣಿಕ ತೆರಿಗೆದಾರ: ಕೇಂದ್ರದಿಂದ ಪ್ರಶಂಸೆ

ಸದಭಿರುಚಿ ಚಿತ್ರಗಳ ಸರದಾರ ಎನ್ನುವ ಹಿರಿಮೆಗೆ ಪಾತ್ರವಾಗಿರುವ ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ಪ್ಯಾನ್ ಇಂಡಿಯಾ ಸ್ಟಾರ್ ಮೇಕರ್ ಆರ್. ಚಂದ್ರು ಅವರ ಮುಡಿಗೆ ಮತ್ತೊಂದು ಗರಿ ಮೂಡಿದೆ. ಕೇಂದ್ರ ಹಣಕಾಸು ಸಚಿವಾಲಯ ಪ್ರಾಮಾಣಿಕ ತೆರಿಗೆದಾರ ಎಂದು ಪ್ರಶಂಸೆ ನೀಡಿದೆ.

ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಶಂಸೆಗೆ ಪಾತ್ರರಾಗಿರುವ ಅಪರೂಪದ ಹೆಗ್ಗಳಿಕೆಗೆ ಆರ್. ಚಂದ್ರು ಪಾತ್ರವಾಗಿದ್ದಾರೆ. ಚಂದ್ರು ಅವರ “ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್” ಸಂಸ್ಥೆಗೆ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರಶಂಸಾ ಪತ್ರ ನೀಡಿದ್ದು ಇದು ಚಂದ್ರು ಅವರಲ್ಲಿನ ಪ್ರಾಮಾಣಿಕತೆ ಮತ್ತು ಕೇಂದ್ರ ಸರ್ಕಾರದ ನಿಯಮಗಳನ್ನು ಗೌರವಿಸಿದ್ದಕ್ಕೆ ಸಂದ ಪ್ರಶಸ್ತಿಯಾಗಿದೆ
ಆರ್ ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ ಚಿತ್ರ “ಕಬ್ಜ” ದೇಶಾದ್ಯಂತ ಜನಮನ್ನಣೆ ಪಡೆದಿತ್ತು. ಈಗ ಈ ಚಿತ್ರವನ್ನು ನಿರ್ಮಿಸಿದ್ದ ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆ ಅತೀ ಹೆಚ್ಚು ತೆರಿಗೆ ಪಾವತಿಸಿದ ಕೀರ್ತಿಗೆ ಭಾಜನವಾಗಿದೆ. ದಾಖಲೆ ಮೊತ್ತದ ಹಣವನ್ನು “ಕಬ್ಜ” ಚಿತ್ರದ ಸಲುವಾಗಿ ಆರ್ ಚಂದ್ರು ಕೇಂದ್ರ ತೆರಿಗೆ ಇಲಾಖೆಗೆ ಪಾವತಿಸಿದ್ದಾರೆ. ಯಾವುದೇ ತೆರಿಗೆ ಉಳಿಸಿಕೊಳ್ಳದೇ ಅಧಿಕ ಮೊತ್ತದ ತೆರಿಗೆಯನ್ನು ಪಾವತಿಸಿರುವುದಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರಶಂಸಾ ಪತ್ರ ಕೂಡ ದೊರಕಿದೆ. ಸರ್ಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ಪಾವತಿಸಿದ ಸಾಲಿಗೆ ಕನ್ನಡದ “ಕಬ್ಜ” ಚಿತ್ರ ಸೇರಿದೆ.
ಇತ್ತೀಚೆಗೆ ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಸಮಾರಂಭದಲ್ಲಿ ಅತ್ಯುತ್ತಮ ವಿಎಫ್ಎಕ್ಸ್ ಪೋಸ್ಟ್ ಪ್ರೊಡಕ್ಷನ್ಸ್ ಹಾಗೂ ಅನ್ನಿಮೇಷನ್ ಚಿತ್ರ ಪ್ರಶಸ್ತಿಗೆ “ಕಬ್ಜ” ಚಿತ್ರ ಭಾಜನವಾಗಿದೆ.

ಈ ಎಲ್ಲಾ ಖುಷಿಯ ವಿಚಾರಗಳ ನಡುವೆ ಆರ್ ಚಂದ್ರು ಅವರ ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಐದು ಚಿತ್ರಗಳಲ್ಲಿ ಒಂದಾದ ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರೈ ಮುಂತಾದವರು ನಟಿಸುತ್ತಿರುವ “ಫಾದರ್” ಚಿತ್ರಕ್ಕೆ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆ.
ಈ ನಡುವೆ ತಮಿಳಿನತ್ತ ಆರ್. ಚಂದ್ರ ಮುಖ ಮಾಡಿದ್ದಾರೆ. ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ನಿರ್ದೇಶನದಲ್ಲಿ ತಮಿಳಿನಲ್ಲಿ ಚಿತ್ರ ಮಾಡಲು ಮುಂದಾಗಿದ್ದು ಒಂದೊಂದೇ ಭಾಷೆಯಲ್ಲಿ ತಮ್ಮ ಗಡಿಯನ್ನು ಚಂದ್ರ ವಿಸ್ತರಣೆ ಮಾಡಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಚಿತ್ರಗಳನ್ನು ಮಾಡುವಂತಾಗಲಿ.