ಸಾಧಕ ಬೆಂಕೋಶ್ರೀ ಜೀವನಯಾನದ “ಕಾಫಿ ಟೇಬಲ್”ಪುಸ್ತಕ ಜೂನ್ 24 ರಂದು ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಮಿಂಚು ಹರಿಸಿ ವಿತರಕರಾಗಿಯೂ ಒಂದು ಕೈ ನೋಡಿದ್ದ ಬರಹಗಾರ, ಜೀವನದ ವಾಸ್ತವ ಜಗತ್ತಿನ ಪ್ರಸಾರಕ ಬಿಕೆ ಶ್ರೀನಿವಾಸ (ಬೆಂಕೋಶ್ರೀ ) ಅಸಾಮಾನ್ಯ ಜೀವನಯಾನ ಕುರಿತ ‘ಕಾಫಿ ಟೇಬಲ್” ಪುಸ್ತಕ ಬಿಡುಗಡೆಗೆ ಸಜ್ಜಾಗಿದೆ.

ಸಿನಿಮಾ, ವ್ಯಾಪಾರ, ಹೋರಾಟ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿರುವ ಸಾಧಕರಾದ ಅಜೇಯ ಮನೋಬಲದ ಯಶೋಗಾಥೆ ಒಳಗೊಂಡ ಕಾಫಿಟೇಬಲ್ ಪುಸ್ತಕ ಬಿಡುಗಡೆ ಸಮಾರಂಭ ಜೂನ್ 24 ರಂದು ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿಭವನದಲ್ಲಿ ನಡೆಯಲಿದೆ.
“ಬೇರೆಯವರಿಗಿಂತ ಉತ್ತಮವಾಗಿ ಸಾಧಿಸುವುದಲ್ಲ ಸಾಧನೆ,,
ನಿನ್ನ ನಿನ್ನೆಗಿಂತ ನಿನ್ನ ಇಂದು
ಉತ್ತಮವಾಗಿದ್ದರೆ,ಅದೇ ನಿಜವಾದ
ಸಾಧನೆಯ ಆರಂಭ…”
- ಬೆಂಕೋಶ್ರೀ…
ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಪುಸ್ತಕ ಬಿಡುಗಡೆ ಮಾಡಿ ಆಶೀರ್ವಚನ ನೀಡಲಿದ್ದಾರೆ.
ಬಿಜಿಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪ್ರಕಾಶನಾಥ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಲಿದ್ದು ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಹಾಗು ಬರಹರಾ ಜೋಗಿ ಪುಸ್ತಕದ ಕುರಿತು ಮಾತನಾಡಲಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಹಾಗು ಹಿರಿಯ ನಟಿ ಜಯಮಾಲ ರಾಮಚಂದ್ರ, ಹಿರಿಯ ಕನ್ನಡ ಪರ ಹೋರಾಟಗಾರ ಮತ್ತು ನಿರ್ಮಾಪಕ ಸಾ.ರಾ ಗೋವಿಂದು ಸಾಧಕ ಬೆಂಕೋಶ್ರೀ ಕುರಿತು ಮಾತನಾಡಲಿದ್ದಾರೆ.
ಸಮಾರಂಭದಲ್ಲಿ ಹಿರಿಯ ಅಧಿಕಾರಿಗಳಾದ ಬಿಕೆ ಸಂಗಮೇಶ್ ಉಪಾಸೆ, ಶ್ರೀ ಚರಣ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್ ಬ್ಯಾಂಕ್ ಅಧ್ಯಕ್ಷ ಬಿ.ವಿ ದ್ವಾರಕಾನಾಥ್, ನಟಿ, ನಿರೂಪಕಿ ಜಾಹ್ನವಿ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ನ ಹಿರಿಯ ಪ್ರಧಾನ ವ್ಯವಸ್ಥಾಪಕ ಸುರೇಶ್ ಕುಮಾರ್,ಹಿರಿಯ ವ್ಯವಸ್ಥಾಪಕ ಎಚ್. ಮಹೇಶ್ ಸೇರಿದಂತೆ ಹಲವರು ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಬಿಕೆ ಶ್ರೀನಿವಾಸ ಹಿನ್ನಲೆ;

ಹೋರಾಟಗಾರ, ಬರಹಗಾರ ಬಿಕೆ ಶ್ರೀನಿವಾಸ ಅವರು ಹೋರಾಟಗಾರರಾಗಿ ಹೆಸರು ಪಡೆದಿದ್ದ ಅವರು ವೃತ್ತಿಯಲ್ಲಿ ಬಿಲ್ಡರ್ ಕೂಡ. ಮಂದಾಕಿನಿ ಚಿತ್ರದ ಮೂಲಕ ನಿರ್ಮಾಪಕರಾಗಿ ಸಿನಿಮಾ ವೃತ್ತಿ ಜೀವನ ಆರಂಭಿಸಿದ ಬೆಂಕೋಶ್ರೀ ಬದುಕಿನ ಸಾರ ತಿಳಿಹೇಳುವ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.
ಜೋಗಯ್ಯ ಚಿತ್ರದ ಮೂಲಕ ವಿತರಕರಾಗಿಯೋ ಕೆಲಸ ಮಾಡಿದ ಅನುಭವ ಹೊಂದಿದವರು, ಹಲವು ಸದಭಿರುಚಿಯ ಚಿತ್ರ ನಿರ್ಮಾಣ ಮಾಡಿದ ಬೆಂಕೋಶ್ರೀ ಅವರಿಗೆ ರಾಜ್ಯ ಪ್ರಸಸ್ತಿಯೂ ಲಭಿಸಿದೆ, ಸಿನಿಮಾ ವ್ಯಾಪಾರ ಆದರೂ ವ್ಯಾಪಾರಕ್ಕಿಂತ ಹೆಚ್ಚಾಗಿ ಒಳ್ಳೆಯ ಚಿತ್ರ ನೀಡಬೇಕು ಎನ್ನುವ ಹಂಬಲ ತುಡಿತದೊಂದಿಗೆ ಸಿನಿಮಾ ನಿರ್ಮಾಣ ಮಾಡಿದ ಕನ್ನಡ ಚಿತ್ರರಂಗದ ಅಪರೂಪದ ನಿರ್ಮಾಪಕರಲ್ಲಿ ಬಿ,ಕೆ ಶ್ರೀನಿವಾಸ ಅಗ್ರಸ್ಥಾನದಲ್ಲಿ ನಿಲ್ಲಲಿದ್ದಾರೆ.

