ಬಸ್ ನಿಲ್ದಾಣದಲ್ಲಿ ನಡೆಯುವ ಮನಮುಟ್ಟುವ ಕಥನ “ಸಂಜು” ಟ್ರೈಲರ್ ಬಿಡುಗಡೆ

ಕನ್ನಡದಲ್ಲಿ ಈ ಥರ ಸಿನಿಮಾ ಯಾಕೆ ಬರುತ್ತಿಲ್ಲ ಎಂದು ತೆಲುಗಿಗೋ, ತಮಿಳಿಗೋ ಇಲ್ಲ ಮಲೆಯಾಳಂ ಸೇರಿದಂತೆ ಇನ್ಯಾವುದೇ ಭಾಷೆಗೆ ಥಟ್ಟನೆ ಹೋಲಿಕೆ ಮಾಡಿಬಿಡುತ್ತೇವೆ. ಕನ್ನಡದಲ್ಲಿಯೂ ಗಮನ ಸೆಳೆಯುವ ಚಿತ್ರಗಳು ಬರುತ್ತವೆ ಎನ್ನುವುದನ್ನು ಆಗಾಗ ನಿರೂಪಿಸುತ್ತಿದೆ. ಅದರ ಸಾಲಿಗೆ ಮತ್ತೊಂದು ಸೇರ್ಪಡೆ” ಸಂಜು”.

ಬಸ್ ನಿಲ್ದಾಣದಲ್ಲಿ ನಡೆಯುವ ಮನಮುಟ್ಟುವ ಕಥನವನ್ನು ಮುಂದಿಟ್ಟುಕೊಂಡು ಪತ್ರಕರ್ತ, ನಟ, ನಿರ್ದೇಶಕ ಯತಿರಾಜ್ ಇದೀಗ ‘ಗೀತಾ” ಚಿತ್ರದ ಮೂಲಕ ಕನ್ನಡದಲ್ಲಿಯೂ ಇಂತಹ ಚಿತ್ರಗಳು ಬರುತ್ತವೆ. ಪರಭಾಷೆಗೆ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ನಿರೂಪಿಸಲು ಮುಂದಾಗಿದ್ಧಾರೆ.
“ಸಂಜು” ಚಿತ್ರದ ಟ್ರೈಲರ್ ಅನ್ನು ನಟ ಪ್ರಜ್ವಲ್ ದೇವರಾಜ್, ಹಿರಿಯ ನಿರ್ಮಾಪಕ ಸಾ ರಾ ಗೋವಿಂದು, ಕೆ.ಮಂಜು, ನಿರ್ದೇಶಕ ಎಂ.ಡಿ.ಕೌಶಿಕ್ ಸೇರಿದಂತೆ ಹಲವು ಬಿಡುಗಡೆ ಮಾಡಿ ನಿರ್ದೇಶಕ ಯತಿರಾಜ್ ಮತ್ತವರ ತಂಡದ ಪ್ರಯತ್ನವನ್ನು ಬೆನ್ನುತಟ್ಟಿ ಶುಭ ಹಾರೈಸಿದ್ಧಾರೆ

ಈ ವೇಳೆ ಮಾತಿಗಿಳಿದ ನಿರ್ದೇಶಕ ಯತಿರಾಜ್ “ಸಂಜು” ನನ್ನ ನಿರ್ದೇಶನದ ಆರನೇ ಚಿತ್ರ. ಈ ಚಿತ್ರಕ್ಕೆ “ಅಗಮ್ಯ ಪಯಣಿಗ” ಎಂಬ ಅಡಿಬರಹವಿದೆ. ಇದೊಂದು ಬಸ್ ನಿಲ್ದಾಣದಲ್ಲಿ ನಡೆಯುವ ಕಥೆ. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳಿರುತ್ತದೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ಮಡಿಕೇರಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಯಾವುದೇ ಕೊರತೆ ಬಾರದಂತೆ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕ ಸಂತೋಷ್ ಅವರಿಗೆ ಹಾಗೂ ನಮ್ಮ ಆಹ್ವಾನವನ್ನು ಮನ್ನಿಸಿ ಬಂದಿರುವ ಎಲ್ಲಾ ಅತಿಥಿಗಳಿಗೆ ಧನ್ಯವಾದ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದರು.
ನಾಯಕ ಮನ್ವೀತ್ ಮಾತನಾಡಿ, ದಯವಿಟ್ಟು ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ . ಹೊಸ ತಂಡಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ. ನಾನು ಸಾಮಾನ್ಯ ರೈತನ ಮಗ. ನನ್ನ ಮೊದಲ ಚಿತ್ರವನ್ನು ಇಷ್ಟು ಅದ್ದೂರಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಹಾಗೂ ಅವಕಾಶ ನೀಡಿದ ನಿರ್ದೇಶಕರಿಗೆ ಧನ್ಯವಾದ ಎಂದರು.

ನಾಯಕಿ ಸಾತ್ವಿಕ ಮಾತನಾಡಿ ನನ್ನ ಹೆಸರನ್ನು ಶ್ರಾವ್ಯ ಎನ್ನುವದರಿಂದ ಸಾತ್ವಿಕ ಎಂದು ಬದಲು ಮಾಡಿಕೊಂಡಿದ್ದೇನೆ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಸರಸ್ವತಿ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಳ್ಳೆಯ ಪಾತ್ರ ಸಿಕ್ಕಿದೆ. ಇನ್ನು ಮುಂದೆ ಶ್ರಾವ್ಯ ಬದಲಿಗೆ ಸಾತ್ವಿಕ ಎಂದೇ ಕರೆಯಿರಿ ಎಂದು ಮನವಿ ಮಾಡಿಕೊಂಡರು.

ಸಂಗೀತ ನಿರ್ದೇಶಕ ವಿಜಯ್ ಹರಿತ್ಸ, ಛಾಯಾಗ್ರಾಹಕ ವಿದ್ಯಾ ನಾಗೇಶ್ ಹಾಗೂ ಚಿತ್ರದಲ್ಲಿ ನಟಿಸಿರುವ ಸುಂದರಶ್ರೀ, ತೇಜಸ್ವಿನಿ, ಬಲ ರಾಜವಾಡಿ, ಮಹಾಂತೇಶ್, ಮುಂತಾದವರು ಚಿತ್ರದ ಕುರಿತು ಮಾತನಾಡಿದರು.