ಬೇರೆ ಪ್ರೊಡಕ್ಷನ್ ನಲ್ಲಿ ನಟಿಸಲು ಸಿದ್ದ , ಅವಕಾಶ ಕೊಡ್ತಾ ಇರೋದು ಡಾಲಿ ಧನಂಜಯ : ನಟ ನಾಗಭೂಷಣ

ಗ್ರಾಮೀಣ ಸೊಗಡಿನ “ಟಗರು ಪಲ್ಯ” ಚಿತ್ರದ ಯಶಸ್ಸಿನ ನಂತರ ನಿರ್ಮಾಪಕ ಡಾಲಿ ಧನಂಜಯ ಮತ್ತು ನಟ ನಾಗಭೂಷಣ್ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಅದುವೇ ” ವಿದ್ಯಾಪತಿ”. ನಟ ನಾಗಭೂಷಣ್ ಹೊಸ ಅವತಾರದಲ್ಲಿ ಬರುತ್ತಿದ್ದಾರೆ. ಅವರಿಗೆ ಜೊತೆಯಾಗಿ ಉಪಾಧ್ಯಕ್ಷ ಖ್ಯಾತಿಯ ನಟಿ ಮಲೈಕಾ ವಸುಪಾಲ್ ಸೂಪರ್ ಸ್ಟಾರ್ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಜನರನ್ನು ನಕ್ಕು ನಗಿಸಲು “ವಿದ್ಯಾಪತಿ” ಚಿತ್ರ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮಾಹಿತ ಹಂಚಿಕೊಳ್ಳಲು ನಟ ನಾಗಭೂಷಣ ಮತ್ತು ನಟಿ ಮಲೈಕಾ ವಸುಪಾಲ್ ಇಬ್ಬರೂ ಪತ್ರಕರ್ತರ ಜೊತ ಮುಖಾಮುಖಿಯಾಗಿದ್ದರು.
“ಟಗರು ಪಲ್ಯ” ಯಶಸ್ಸು ನಾಗಭೂಷಣ್ ಜೊತೆಗಿದ್ದರೆ ಉಪಾಧ್ಯಕ್ಷ ಚಿತ್ರದ ಗೆಲುವು ನಟಿ ಮಲೈಕಾ ವಸುಪಾಲ್ ಬೆನ್ನಿಗಿದೆ ಹಾಗೆ ನೋಡಿದರೆ ಇಬ್ಬರದ್ದು ಚಿತ್ರಮಂದಿರಕ್ಕೆ ಬರುತ್ತಿರುವ ಎರಡನೇ ಸಿನಿಮಾ.
ಡಾಲಿ ಧನಂಜಯ ನಿರ್ಮಾಣದ ಚಿತ್ರ ಅಂದರೆ ಮನೆ ಮಂದಿಯಲ್ಲಾ ಕುಳಿತು ನೋಡುವ ಸಿನಿಮಾ ಎನ್ನುವುದನ್ನು ಅವರ ಹಿಂದಿನ ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದಾರೆ.ಅದನ್ನು “ವಿದ್ಯಾಪತಿ” ಚಿತ್ರದಲ್ಲಿಯೂ ಮುಂದುವರಿಸಿಕೊಂಡು ಹೋಗಿದ್ದಾರೆ. ಚಿತ್ರವನ್ನು ಕೆಆರ್ಜಿ ಸಂಸ್ಥೆ ಮುಂದಿನವಾರ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.
ನಾಯಕನಾಗಿ ನಟಿಸುವ ಉದ್ದೇಶವಿದೆ. ಆದರೆ ಪ್ರತಿಭೆಯನ್ನು ಗುರಿತಿಸಿ ಪ್ರೋತ್ಸಾಹ ಮಾಡುವರು ಬೇಕಾಲ್ಲ. ಆ ಕೆಲಸವನ್ನು ಡಾಲಿ ಧನಂಜಯ ಮಾಡಿದ್ದಾರೆ. ನಾಯಕನಾದರೂ ಪೋಷಕ ಪಾತ್ರದಲ್ಲಿ ನಟಿಸುವೆ. ಎರಡೂ ಮುಖ್ಯ ಎಂದಿದ್ದಾರೆ ನಟ ನಾಗಭೂಷಣ್. ಇದರ ಜೊತೆಗೆ ಇನ್ನಷ್ಟು ವಿಷಯಗಳ ಕುರಿತು ನಟ ನಾಗಭೂಷಣ್ ಮಾಹಿತಿ ಹಂಚಿಕೊಂಡಿದ್ದಾರೆ

- ಚಿತ್ರದಲ್ಲಿ ಯಾರೆಲ್ಲಾ ಕಲಾವಿದರಿದ್ದಾರೆ, ಚಿತ್ರದ ಬಗ್ಗೆ ಹೇಳುವುದಾದರೆ
ಚಿತ್ರದಲ್ಲಿ ನಾನು, ಮಲೈಕಾ, ಗರುಡರಾಮ್ ಮತ್ತು ಡಾಲಿ ಧನಂಜಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇವೆ. ಉಳಿದಂತೆ ಶ್ರೀವತ್ಸ, ಧರ್ಮಣ್ಣ ಕಡೂರು, ಗಿರೀಶ್ ಜೆಟ್ಟಿ ಮತ್ತಿತರ ಕಲಾವಿದರಿದ್ದಾರೆ. ಎಲ್ಲಾ ಪಾತ್ರಗಳು ಚಿತ್ರಕ್ಕೆ ಪೂರಕವಾಗಿವೆ. ವಿದ್ಯಾಪತಿ ಎಮೋಷನ್, ಕಾಮಿಡಿ ಆಕ್ಷನ್ ಸಿನಿಮಾ, ಇತ್ತೀಚೆಗೆ ಕನ್ನಡದಲ್ಲಿ ಕಾಮಿಡಿ ಜಾನರ್ ಸಿನಿಮಾಗಳೇ ಬರ್ತಾ ಇಲ್ಲ, ವಿದ್ಯಾಪತಿ ಮನೆಮಂದಿಯಲ್ಲಾ ಕುಳಿತು ನೋಡಬಹುದಾದ ಸಿನಿಮಾ.

- ಟ್ರೈಲರ್ನಲ್ಲಿ ಒಂದಷ್ಟು ಕಥೆ ಹೇಳಿದ್ದೀರಾ, ಹೌದಾಲ್ವಾ
ಹೌದು ಇದರಲ್ಲಿ ಮುಚ್ಚುಮೊರೆ ಏನಿಲ್ಲ, ಟ್ರೈಲರ್ನಲ್ಲಿ ಈಗಾಗಲೇ ಕಥೆ ಬಿಟ್ಟುಕೊಟ್ಟಿದ್ದೇವೆ. ಕಥೆ ಇಷ್ಟ ಆದರೆ ಸಿನಿಮಾಗೆ ಬನ್ನಿ, ಸೂಪರ್ಸ್ಟಾರ್ ನಟಿ ಮತ್ತು ಆಕೆಯ ಗಂಡನ ಸುತ್ತ ಸಾಗುವ ಕಾಮಿಡಿ ಚಿತ್ರ, ಒಂದು ಹಂತದಲ್ಲಿ ನಾಯಕಿಗೆ ಅವಮಾನ ಆಗುತ್ತದೆ, ಆಕೆ ಖಳನಟನಿಗೆ ಹೊಡೆದು ಬಂದರೆ ಅಷ್ಟೇ ಮನೆಗೆ ಸೇರಿಸೋದು ಎಂದು ಷರತ್ತು ಹಾಕಿರುತ್ತಾಳೆ, ನಾನು ವಿಲನ್ಗೆ ಹೊಡೆದು ಬರ್ತೀನಾ ಇಲ್ಲ, ಈ ನಡುವೆ ನನ್ನ ಜೀವನದಲ್ಲಿ ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ಒನ್ ಲೈನ್ ಕಥೆ.
- ಚಿತ್ರದಲ್ಲಿ ನಿಮ್ಮ ಪಾತ್ರ ಏನಾಗಿರಲಿದೆ.
ಚಿತ್ರದಲ್ಲಿ ಸೂಪರ್ ಸ್ಟಾರ್ ನಟಿಯ ಪತಿ, ಜೊತೆಗೆ ಮ್ಯಾನೇಜರ್. ಹೆಂಡತಿಯ ದುಡ್ಡಿನಲ್ಲಿ ಶೋಕಿ ಮಾಡುವ ಶೋಕಿವಾಲ. ಪತ್ನಿ ಮಾತ್ರ ನನ್ನನ್ನು ಮುಗ್ದ ಅಂತ ಭಾವಿಸಿರುತ್ತಾಳೆ, ಅದು ನಾಯಕಿಗೆ ಅರ್ಥ ಆಗುತ್ತಾ ಇಲ್ಲ ಎನ್ನುವುದುನ್ನು ಚಿತ್ರದಲ್ಲಿ ನೋಡಬೇಕು, ಚಿತ್ರದಲ್ಲಿ ಎಲ್ಲರ ಪಾತ್ರವೂ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ನಿರ್ದೇಶಕ ವಿಜಯ ಪ್ರಸಾದ್ ಸೂಪರ್ ಸ್ಟಾರ್ ನಟಿಯ ಕಾಲ್ ಶೀಟ್ ಪಡೆಯಲು ಒದ್ದಾಡುತ್ತಾರೆ, ಅವರಿಗೆ ಕಾಲ್ ಶೀಟ್ ಸಿಗುತ್ತಾ ಎನ್ನುವುದನ್ನು ಚಿತ್ರಮಂದಿರದಲ್ಲಿ ನೋಡಿದರೆ ಇನ್ನೂ ಚೆನ್ನ.
- ವಿದ್ಯಾಪತಿ ನಾಗಭೂಷಣ್ಗೂ ಪೂಜಾಪತಿಗೂ ಏನು ವ್ಯತ್ಯಾಸ, ಪತ್ನಿಯ ಪ್ರತಿಕ್ರಿಯೆ ಹೇಗಿತ್ತು.
ಆಕ್ಷನ್ ಹೇಳಿದರೆ ವಿದ್ಯಾಪತಿ, ಕಟ್ ಹೇಳಿದರೆ ಪೂಜಾ ಪತಿ ಎಂದು ಚುಟುಕಾಗಿ ಉತ್ತರಿಸಿದರು ನಾಗಭೂಷಣ್,
ಕೂದಲಿಗೆ ಬಣ್ಣ ಹಾಕಿಕೊಳ್ಳುವ ದೃಶ್ಯವಿದೆ. ಬಣ್ಣ ಹಾಕಿಸಿಕೊಂಡು ಮನೆಗೆ ಹೋದೆ ಅಷ್ಟರ ವೇಳೆಗೆ ಪತ್ನಿ ಪೂಜಾ ಮಲಗಿದ್ದರು, ಬೆಳಗ್ಗೆ ಎದ್ದು ನೋಡಿ ಒಂದು ಕ್ಷಣ ಹೌರಾರಿದರು , ಗಂಡನೋ ಇವ ಯಾರಪ್ಪ ಎಂದು.
ಥೂ ಚಪ್ರಿ ಥರ ಕಾಣ್ತಾ ಇದ್ದೀಯ ಅಂತ ಬೈದಳು. ಹೋಗ್ತಾ ಹೋಗ್ತಾ ಪಾತ್ರ ಚೆನ್ನಾಗಿದೆ ಅಂದು ಮೆಚ್ಚಿಕೊಂಡಳು.

- ವಿದ್ಯಾಪತಿ ಚಿತ್ರವನ್ನು ಎಲ್ಲೆಲ್ಲಿ ಚಿತ್ರೀಕರಣ ಮಾಡಲಾಗಿದೆ?
ಚಿತ್ರವನ್ನು ಹೆಚ್ಚಾಗಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕಾಗಿ ಕರಾಟೆ ಕಲಿತಿದ್ದೇನೆ ಅದು ವೈಟ್ ಬೆಲ್ಟ್ ದಾಟಿಲ್ಲ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ, ಚಿತ್ರದಲ್ಲಿ ಈಗ ಬಿಟ್ಟಿರುವ ಹಾಡಿನ ಜೊತೆಗೆ ಇನ್ನೂ ಹಾಡುಗಳಿಲ್ಲ, ಅವುಗಳನ್ನು ಚಿತ್ರದಲ್ಲಿ ನೋಡಿ, ಈಗ ಬಿಟ್ಟಿರುವ ಹಾಡುಗಳು ಎಲ್ಲವೂ ಚಿತ್ರದಲ್ಲಿದ್ದು ಸನ್ನಿವೇಶಕ್ಕೆ ತಕ್ಕಂತೆ ಮೂಡಿ ಬಂದಿವೆ.
- ವಿದ್ಯಾಪತಿ ಚಿತ್ರದ ಬಗ್ಗೆ ನಿಮಗೆಷ್ಟು ವಿಶ್ವಾಸ ನಂಬಿಕೆ ಇದೆ.
“ಟಗರು ಪಲ್ಯ” ಜನ ಬರ್ತಾರೆ ಅಂತ ಗೊತ್ತಿರಿಲ್ಲ. ಒಳ್ಳೆಯ ಸಿನಿಮಾ ಕೊಟ್ಟಾಗ ಅದಕ್ಕಿಂತ ಈ ಸಿನಿಮಾ ಚೆನ್ನಾಗಿದ್ದರೆ ಜನ ಬರ್ತಾರೆ ಎನ್ನುವ ನಂಬಿಕೆ ಇದೆ.ಟಗರು ಪಲ್ಲದಲ್ಲಿ ಹಳ್ಳಿಯ ಕಥೆ ಇತ್ತು, ಇಲ್ಲಿ ನಗರ ಪ್ರದೇಶದ ಜೀವನ ಇದೆ, ಟಗರು ಪಲ್ಯ ನನ್ನೂರು, ನಾನು ಬೆಳೆದು ಬಂದ ಕಥೆ. ಅದು ಕಷ್ಟ ಆಗಲೇ ಇಲ್ಲ. ಹಳ್ಳಿ, ಹಳ್ಳಿಗಾಡು, ಜನ,
ಇದು ಕಷ್ಟ ಆಯಿತು. ವಿದ್ಯಾಪತಿಯೂ ಜನರಿಗೆ ಇಷ್ಟ ಆಗಲಿದೆ. ನಾನು ಉಂಗುರ ಚೈನ್ ಹಾಕಿಕೊಳ್ಳುವ ಖಯಾಲಿ ಇಲ್ಲ ಆದರೆ ಸಿನಿಮಾದಲ್ಲಿ ಉಂಗುರ, ಚೈನ್ ಹಾಕಿಕೊಳ್ಳಬೇಕಾಗಿತ್ತು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ.
- ಗರುಡ ರಾಮ್ ಖಳನಟನ ಪಾತ್ರಕ್ಕೆ ಅವರೇ ಬೇಕು ಅಂತ ಹೇಗನಿಸಿತು
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವ ಖಳ ನಟ ಗರುಡ ರಾಮ್ ಮುಂದೆ ನಿಂತಾಗ ಇವನು ಅವರನ್ನು ಹೊಡಿತಾರಾ ಎನ್ನುವುದೇ ನಗು ಬರುತ್ತದೆ. ಹೀಗಾಗಿ ನಿರ್ಮಾಪಕ ಡಾಲಿ ಧನಂಜಯ ಅವರು ಗರುಡ ರಾಮ್ ಇದ್ದರೆ ಚೆನ್ನ ಎಂದು ಸೂಚಿಸಿದರು. ಬಳಿಕ ಗರುಡ ರಾಮ್ಗೆ ಕಥೆ ಹೇಳಿದ ಬಳಿಕ ಅವರ ಸ್ನೇಹಿತರು ನಾಯಕ ಯಾರು ಅಂತ ಕೇಳಿದರಂತೆ ಆಗ ಅವರು ನಾಗಭೂಷಣ ಅಂದ್ರಂತೆ. ಅದಕ್ಕೆ ಅವರೂ ನಕ್ಕಿದ್ದಾರೆ. ಮನೆಯಲ್ಲಿ ಅವರ ಪತ್ನಿಗೆ ಹೇಳಿದಾಗ ಓ ನಾಗಭೂಷಣ ಅವರಾ. ಒಳ್ಳೆಯ ನಟ ಸಿನಿಮಾ ಮಾಡಿ ಎಂದು ಹೇಳಿದರಂತೆ.. ಆಗ ಸಮಾಧಾನ ಆಯ್ತು. ಮನೆ ಮಂದಿಗೆಲ್ಲಾ ತಲುಪಿದ್ದೇನೆ ಎನ್ನುವ ಸಮಾಧಾನ ಆಯಿತು.
- “ವಿದ್ಯಾಪತಿ” ಚಿತ್ರದ ಬಿಸಿನೆಸ್ ಆಗಿದೆಯಾ

ಚಿತ್ರ ಇನ್ನೂ ಬಿಸಿನೆಸ್ ಆಗಿಲ್ಲ. ಆತಂಕ ಕೂಡ ಇದೆ. ನನ್ನ ಹಿಂದಿನ ಸಿನಿಮಾ ಟಗರು ಪಲ್ಯ, ಹಾಗು ನಟಿ ಮಲೈಕಾ ಅವರ ಉಪಾಧ್ಯಕ್ಷ ಸಿನಿಮಾ ಚಿತ್ರಮಂದಿರದಲ್ಲಿ ಉತ್ತಮವಾಗಿ ಪ್ರದರ್ಶನ ಕಂಡಿದೆ. ಸಿನಿಮಾ ಯಶಸ್ವಿ ಆಗಿದೆ, ಡಾಲಿ ಧನಂಜಯ, ಗರುಡ ರಾಮ್ ಇದ್ದಾರೆ. ಆದರೂ ಬಿಸಿನೆಸ್ ಆಗಿಲ್ಲ, ಯಾವುದೇ ಒಟಿಟಿ ಅಥವಾ ಸೆಟಲೈಟ್ ಹಕ್ಕು ಮಾರಾಟವಾಗಿಲ್ಲ. ಅದರಲ್ಲಿಯೂ ನೆಟ್ಫ್ಲಿಕ್ಸ್ ನಲ್ಲಿ ಕನ್ನಡ ಸಿನಿಮಾ ತೆಗೆದುಕೊಳ್ಳುವುದೇ ಇಲ್ಲ. ಹಾಗಾದರೆ ಕನ್ನಡದ ಮಂದಿ ಒಳ್ಳೆಯ ಸಿನಿಮಾ ಮಾಡಲ್ವಾ..ಸಿನಿಮಾ ಬಿಸಿನೆಸ್ ಆಗದಿರುವ ವಿಷಯ ತಿಳಿದು ಗಲಿ ಬಿಲಿಗೊಂಡಿದ್ದೆ, “ಗೆಲುವಿನ ಖಚಿತತೆಯಲ್ಲಿಯಲ್ಲಿಯೂ ಸೋಲಿನ ಎಚ್ಚರವಿರಲಿ” ಎನ್ನುವ ಪಿ ಲಂಕೇಶ್ ಅವರ ಮಾತು ನೆನಪಾಗುತ್ತದೆ. ಚಿತ್ರದ ಬಗ್ಗೆ ಅಳುಕು ಇದ್ದೇ ಇದೆ. ನಾನು ಒದ್ದಾಡುತ್ತಿದ್ದುದನ್ನು ನೋಡಿ ಬಿಪಿ ಜಾಸ್ತಿ ಆಗಿ ತಲೆ ಕಡೆಸಿಕೊಳ್ಳಬೇಡ ಸುಮ್ನಿರೋ , ಸಿನಿಮಾ ಚೆನ್ನಾಗಿದ್ದರೆ ಜನ ನೋಡ್ತಾರೆ ಆರಾಮಗಿರಿ ಎಂದು ಡಾಲಿನೇ ಸಮಾಧಾನ ಮಾಡಿದರು.
- ಚಿತ್ರದಲ್ಲಿ ಇನ್ನು ಎಷ್ಟು ಹಾಡು ಬಾಕಿ ಇದೆ. ಸೂಪರ್ ಸ್ಟಾರ್ ನಟಿಯನ್ನು ಹೇಗೆ ಮದುವೆ ಆದ್ರಿ
ನನ್ನ ಇಂಟ್ರಡಕ್ಷನ್ ಹಾಡು ಬಾಕಿ ಇದೆ, ನಾನು ಸಿನಿಮಾದಲ್ಲಿ ಮಾಡುವ ಶೋಕಿಗಳನ್ನೆಲ್ಲಾ ಅದರಲ್ಲಿ ತೋರಿಸಲಾಗಿದೆ, ಸಿನಿಮಾದ ಆರಂಭದಲ್ಲಿ ಸೂಪರ್ ಸ್ಟಾರ್ ಜೊತೆ ಮದುವೆ ಆಗಿರಲ್ಲ, ಹೇಗೆ ಆಕೆಯನ್ನು ಮದುವೆ ಆಗಿರುವೆ ಎನ್ನುವುದನ್ನು ಸಿನಿಮಾದಲ್ಲಿ ನೋಡಿದರೆ ಒಳ್ಳೆಯದು ಎನ್ನುವ ಕುತೂಹಲ ಕಾಯ್ದುಕೊಂಡರು.
- ನಾಯಕನಾಗಿ ನಟಿಸುತ್ತಿದ್ದೀರಿ ಮತ್ತೆ. ಮುಂದೆ ಯಾವ ರೀತಿ ಸಿನಿಮಾ ಒಪ್ಪಿಕೊಳ್ಳುವಿರಿ
ನಾಯಕನಾಗಿಯೂ ಪಾತ್ರದಲ್ಲಿ ನಟಿಸುವೆ . ಪೋಷಕ ಪಾತ್ರದಲ್ಲಿಯೂ ನಟಿಸಿವೆ. ಎರಡೂ ಪಾತ್ರಗಳು ನನಗೆ ಇಷ್ಟ, ನಾನು ನಾಯಕನಾಗಿ ನಟಿಸುವ ಸಿನಿಮಾಗಳು ಹೀಗೆ ಇರಬೇಕು. ಜನರಿಗೆ ಮನರಂಜನೆ ನೀಡಬೇಕು.ಮನೆ ಮಂದಿಯೆಲ್ಲಾ ನೋಡಬೇಕು ಎನ್ನುವ ತುಡಿತ ಇರುತ್ತದೆ. ಪೋಷಕ ಪಾತ್ರಗಳಲ್ಲಿ ಸಿಕ್ಕ ಅವಕಾಶದಲ್ಲಿ ಜನರನ್ನು ನಗಿಸುವೆ ಪಾತ್ರ ನಿಬಾಯಿಸುವೆ. ಎರಡನ್ನು ಜೊತೆಯಾಗಿ ಮಾಡಿಕೊಂಡು ಹೋಗುವೆ.
- ನಿಮಗೆ ವಯಕ್ತಿಯಾಗಿ ಯಾವ ರೀತಿಯ ಸಿನಿಮಾ ಮಾಡುವಾಸೆ.
ವಯಕ್ತಿಕವಾಗಿ ಗೌರಿ ಗಣೇಶ, ಗಣೇಶ ಸುಬ್ರಮಣ್ಯ, ರಾಮ ಶಾಮ ಭಾಮ , ಯಾರಿಗೂ ಹೇಳ್ಬೇಡಿ ಈ ರೀತಿಯ ಸಿನಿಮಾ ಇಷ್ಟ,ಈ ರೀತಿಯ ಸಿನಿಮಾಗಳಿಗೆ ಎಕ್ಸ್ಪೆರಿ ಡೇಟ್ ಇಲ್ಲ. ನಾನು ಲೀಡ್ ಆದರೆ ಆ ತರ ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ.ಕಮರ್ಷಿಯಲ್ ಸಿನಿಮಾ ಮಾಡೋಕೆ ಸಾಕಷ್ಟು ನಟರಿದ್ದಾರೆ. ಮನೆ ಮಂದಿಯೆಲ್ಲಾ ಕುಳಿತು ನೋಡುವ ಮನರಂಜನಾತ್ಮಕ ಸಿನಿಮಾ ಮಾಡುವ ಉದ್ದೇಶ ನನ್ನದು.
- ವಿದ್ಯಾಪತಿ ಪಾರ್ಟ್ ಮಾಡುವ ಆಸೆ ಇದೆಯಾ
ಮೊದಲು ವಿದ್ಯಾಪತಿ ಚಿತ್ರ ಯಶಸ್ಸು ಕಾಣಲಿ, ಆ ನಂತರ ಅನಕೊಂಡ ಸೇರಿದಂತೆ ಬೇರೆ ಬೇರೆ ಪಾತ್ರಗಳ ಹೆಸರಿನ ಪಾತ್ರಗಳಲ್ಲಿಯೂ ಸಿನಿಮಾ ಮಾಡಬಹುದು, ಚಿತ್ರ ಯಶಸ್ವು ಆದ ನಂತರ ಮುಂದಿನ ಮಾತುಕಥೆ

- ಚಿತ್ರದಲ್ಲಿ ಡಾಲಿ ಧನಂಜಯ ಪಾತ್ರ ಯಾಕೆ ಬರುತ್ತದೆ.
ಅನಕೊಂಡ ಅವರ ಪಾತ್ರ. ಅದು ಯಾಕೆ ಚಿತ್ರದಲ್ಲಿ ಎಂಟ್ರಿ ಆಗುತ್ತದೆ. ನಾಯಕನಿಗೆ ಸಹಾಯ ಮಾಡುವ ಪಾತ್ರ ಅಥವಾ ಖಳನಟನಿಗೆ ನೆರವಾಗುವುದಾ ಅಥವಾ ಬೇರೆ ಏನು ಎನ್ನುವುದನ್ನ ಚಿತ್ರದಲ್ಲಿ ನೋಡಬೇಕು, ಆಗ ಅದರ ಮಜಾನೇ ಬೇರೆ
- ಡಾಲಿ ಪಿಕ್ಚರ್ಸ್ ಗೆ ನೀವು ಪಾರ್ಟರ್ರಾ ಅಥವಾ ನಾಯಕನಾಗಿ ಸಂಭಾವನೆ ಪಡೆದಿದ್ದೀರಾ
ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಗೆ ನಾನು ಪಾರ್ಟರ್, ಅದು ನಮ್ಮ ಮನೆಯ ಬ್ಯಾನರ್. ನಾಯಕನಾಗಿ ಬೇರೆ ಪ್ರೊಡಕ್ಷನ್ಗಳಲ್ಲಿ ನಟಿಸಲು ಸಿದ್ದ ಇದ್ದೇನೆ. ಆದರೆ ನನ್ನ ಮೇಲೆ ಯಾರು ಬಂಡವಾಳ ಹೂಡ್ತಾರೆ ಹೇಳಿ. ಕೇವಲ ಪ್ರತಿಭೆ ಇದ್ದರೆ ಸಾಕಾಗಲ್ಲ. ಅದನ್ನು ಪ್ರೋತ್ಸಾಹಿಸುವುದು ಬೇಕು. ಆ ಕೆಲಸವನ್ನು ಡಾಲಿ ಧನಂಜಯ ಮಾಡ್ತಾ ಇದ್ದಾರೆ.
“ಇಕ್ಕಟ್ಟು” ಸಿನಿಮಾ ಗೆದ್ದಾಗ ನಿರ್ದೇಶಕರಾದ ಇಶಾನ್ ಮತ್ತು ಹಸೀನ್ಗೆ ಈ ಹುಡುಗರಲ್ಲಿ ಪ್ರತಿಭೆಯಿಂದ ಎಂದು ಯಾರು ಕರೆದು ಅವಕಾಶ ನೀಡದರು. ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರ್ತಾ ಇಲ್ಲ ಎಂತ ಯಾಕೆ ಮಾತನಡಬೇಕು. ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದಾಗ ಅಲ್ವ ಒಳ್ಳೆಯ ಸಿನಿಮಾ ಬರೋದು. ಆ ಕೆಲಸವನ್ನು ಡಾಲಿ ಧನಂಜಯ ಮಾಡಿದ್ದಾರೆ
- ಈಗಿನ ಸಿನಿಮಾ ಮತ್ತು ನಟ ನಟಿಯರ ಬಗ್ಗೆ ಹೇಳುವುದಾದರೆ
ನಟ,ನಟಿಯರನ್ನು ನೋಡಬೇಕು ಎನ್ನುವ ಜನರ ಕಾತುರ ಉಳಿದಿಲ್ಲ, ಅವರಿಗೆ ನಟ ನಟಿಯರ ಜೀವನ ಶೈಲಿ ಸೇರಿದಂತೆ ಅವರ ಎಲ್ಲಾ ಮಾಹಿತಿಗಳು ಆಧುನಿಕ ಯುಗದಲ್ಲಿ ಲಭ್ಯವಾಗುತ್ತಿವೆ. ಈ ಮೊದಲು ನಾವು ಚಿಕ್ಕಂದಿನಲ್ಲಿ ಇದ್ದಾಗ ಜನರ ಮಧ್ಯೆ ಶೂಟಿಂಗ್ ನೋಡ್ತಾ ಇದ್ವಿ.ಈಗ ಜನರಲ್ಲಿ ಆ ಕುತೂಹಲ ಉಳಿದಿಲ್ಲ ಬದಲಾಗಿ ನಾವು ನಮ್ಮ ಚಿತ್ರದ ಮೂಲಕ ಪ್ರೂವ್ ಮಾಡಿಕೊಳ್ಳಬೇಕು. ಸಿನಿಮಾ ಮ್ಯಾಜಿಕ್ ಬೇರೆ ಇದೆ.ಅದನ್ನು ಚಿತ್ರಮಂದಿರದಲ್ಲಿ ನೋಡಿದರೆ ಚೆನ್ನ.
- ಐಪಿಎಲ್ ನಡೆಯುತ್ತಿದೆ. ಈ ಸಮಯದಲ್ಲಿ ಚಿತ್ರ ತೆರಗೆ ಬರುತ್ತಿದೆ. ಈ ಬಗ್ಗೆ ಹೇಳುವುದಾದರೆ

ಐಪಿಎಲ್ ಟೈಮ್ ನಲ್ಲಿ ಈ ಹಿಂದೆ ಬಂದ ಸಿನಿಮಾ ಗೆದ್ದಿವೆ, ಸಬೂಬು ನೀಡುವುದರ ಬದಲು ಒಳ್ಳೆಯ ಸಿನಿಮಾ ಯಾವ ಸಮಯದಲ್ಲಿಯೂ ಬಂದರೂ ಗೆಲ್ಲುತ್ತೆ. ಚಿತ್ರ ನೋಡಿ ಕೆ ಆರ್ ಜಿ ಸಂಸ್ಥೆಯ ಯೋಗಿ ಜಿ ರಾಜ್ ಮತ್ತು ಕಾರ್ತಿಕ್ ಸಿನಿಮಾ ನೋಡಿ ಇಷ್ಟ ಪಟ್ಟು ಬಿಡುಗಡೆ ಮಾಡ್ತಾ ಇದ್ದಾರೆ. ಚಿತ್ರ ಗೆಲ್ಲುವ ವಿಶ್ವಾಸವಿದೆ,ಜನರೂ ಕೂಡ ಒಳ್ಳೆಯ ಸಿನಿಮಾ ಕೈ ಬಿಡುವುದಿಲ್ಲ ಎನ್ನುವ ನಂಬಿಕೆಯೂ ಇದೆ.