A grand “Dhruva Dussehra” on Udaya TV on September 27th

ಸೆಪ್ಟಂಬರ್ 27ಕ್ಕೆ ಉದಯ ಟಿವಿಯಲ್ಲಿ ಅದ್ದೂರಿ “ಧ್ರುವ ದಸರಾ” - CineNewsKannada.com

ಸೆಪ್ಟಂಬರ್ 27ಕ್ಕೆ ಉದಯ ಟಿವಿಯಲ್ಲಿ ಅದ್ದೂರಿ “ಧ್ರುವ ದಸರಾ”

ಉದಯ ಟಿವಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 27 ಶನಿವಾರ ಸಂಜೆ 6 ಗಂಟೆಗೆ ಧ್ರುವ ಸರ್ಜಾ ಜೊತೆ ವಿಶೇಷ ಕಾರ್ಯಕ್ರಮ “ಧ್ರುವ ದಸರಾ”ಪ್ರಸಾರವಾಗಲಿದೆ.

“ಧ್ರುವ ದಸರಾ” ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಪಯಣ ಮತ್ತು ಬಾಲ್ಯದಿಂದ ಇಲ್ಲಿಯವರೆಗಿನ ಜೀವನದ ಝಲಕ್ ಕೂಡ ಹೌದು. ಧ್ರುವ ದಸಾರದ ಒಂದು ವಿಶೇಷ ಎಂದರೆ, ಧ್ರುವ ಅವರಿಗೆ ಗೊತ್ತಿರದೆ ಹಲವು ವಿಶೇಷ ವ್ಯಕ್ತಿಗಳು ಆಗಮಿಸಿ ಅವರಿಗೆ ಅಚ್ಚರಿ ಮೂಡಿಸಿದರು. ಧ್ರುವ ಸರ್ಜಾ ಇವರ ಜೊತೆ ಕಳೆದ ಬಹಳ ಅಪರೂಪದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಹಳಷ್ಟು ಕುತೂಹಲಕರ ಘಟನೆಗಳು, ಭಾವನಾತ್ಮಕ ವಿಷಯಗಳು ಇಲ್ಲಿವೆ.

“ಕೆಡಿ” ಚಿತ್ರದ ಹಾಡಿನೊಂದಿಗೆ ಧ್ರುವ ಎಂಟ್ರಿ ಕೊಟ್ಟಿದ್ದು ವಿಶೇಷ.ಸುಪರ್ ಸ್ಟಾರ್ ಎನ್ನಿಸಿಕೊಳ್ಳಲು ಇಷ್ಟಪಡುವುದಿಲ್ಲ. ತಾನೊಬ್ಬ ನಟ ಮಾತ್ರ ಎಂದು ವಿನಯದಿಂದ ಹೇಳಿದ ಧ್ರುವ ಸರ್ಜಾ ಅಭಿಮಾನಿಗಳಿಗಾಗಿ ಇನ್ನು ಮುಂದೆ ಪ್ರತಿವರ್ಷ ಕನಿಷ್ಟ ಎರಡು ಚಿತ್ರಗಳಲ್ಲಿ ನಟಿಸುವುದಾಗಿ ಘೋಷಿಸಿದರು .

ಪತ್ನಿ, ಮಕ್ಕಳ ಉಪಸ್ಥಿತಿ:

ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಆಕಸ್ಮಿಕವಾಗಿ ವೇದಿಕೆಗೆ ಆಗಮಿಸಿ ಧ್ರುವ ಅವರಿಗೆ ಅಚ್ಚರಿ ಮೂಡಿಸಿದರು. ಅತ್ತಿಗೆಯನ್ನು ತಾಯಿಯಂತೆ ಕಾಣುವ ಧ್ರುವ ಅಣ್ಣನನ್ನು ನೆನೆದು ಭಾವುಕರಾದರು. ಮನೆಗೆ ಬಂದಾಗ ತಮ್ಮ ಮಗ ರಾಯನ್ ಜೊತೆ ಧ್ರುವ ಮಗುವಾಗಿ ಇರುವ ರೀತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು ಮೇಘನಾ ರಾಜ್.

ಧ್ರುವ ಸರ್ಜಾ ತಮ್ಮ ಪತ್ನಿ ಪ್ರೇರಣಾ ಬಗೆಗೆ ಹೇಳಬೇಕಾದರೆ ಹಿಂದಿನಿಂದ ವೇದಿಕೆಗೆ ಅವರೇ ಸ್ವತ: ಬಂದಿದ್ದು ಇವರಿಗೆ ಆಶ್ಚರ್ಯವನ್ನುಂಟುಮಾಡಿತು. ಪ್ರೇರಣಾ ಟಿವಿ ಕಾರ್ಯಕ್ರಮವೊಂದರಲ್ಲಿ ಮೊಟ್ಟಮೊದಲ ಬಾರಿ ಕಾಣಿಸಿಕೊಂಡಿದ್ದು ಧ್ರುವ ದಸರಾ ವಿಶೇಷಗಳಲ್ಲೊಂದು. ಇದೇ ಸಂದರ್ಭದಲ್ಲಿ ತಮ್ಮ ಹಾಗೂ ಧ್ರುವ ನಡುವಿನ ಪ್ರೇಮಲೋಕದ ದಿನಗಳನ್ನು ಮೆಲುಕು ಹಾಕಿದರು. ಅವರು ಧ್ರುವರಿಗೆ ಪ್ರೇಮ ಪ್ರಸ್ತಾಪ ಮಾಡಿದ್ದನ್ನು ಮರುಸೃಷ್ಟಿಸಲಾಯಿತು. ಕೇಕ್ ಕತ್ತರಿಸುವ ಮೂಲಕ ಮುಂಗಡವಾಗಿ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಿಸಲಾಯಿತು. ಮಕ್ಕಳಾದ ರುದ್ರಾಕ್ಷಿ ಹಾಗೂ ಹಯವದನ ಕೂಡ ಉಪಸ್ಥಿತರಿದ್ದುದು ವಿಶೇಷವಾಗಿತ್ತು.

ಕಲಾವಿದ, ಚಿಕ್ಕಪ್ಪ ಅರ್ಜುನ್ ಸರ್ಜಾ ಅವರು ವಿಡಿಯೋ ಮುಖಾಂತರ ಶುಭ ಕೋರಿದರು. ಧ್ರುವ ಅವರ ನಿಷ್ಠೆ, ಕಠಿಣ ಪರಿಶ್ರಮ, ನಟನಾ ಚಾತುರ್ಯದ ಬಗ್ಗೆ ವಿವರಿಸಿದರು.

ನಾಟಕದ ಸಂಭಾಷಣೆ:

ಧ್ರುವ ಸರ್ಜಾ ಅವರಿಗೆ ನಟನೆ ಕಲಿಸಿದ ಗೌರಿ ದತ್ತು ಹಾಗೂ ಮಹಾಂತೇಶ್, ನಟನೆಯಲ್ಲಿ ಅವರಿಗಿರುವ ಶ್ರದ್ಧೆ ವಿವರಿಸಿ ನಾಟಕ ಶಾಲೆಗೆ ದೊಡ್ಡ ಪ್ರಮಾಣದ ದೇಣಿಗೆ ನೀಡಿದ್ದನ್ನು ಸ್ಮರಿಸಿದರು. ಎಂದೋ ನಟಿಸಿದ ನಾಟಕದ ಸಂಭಾಷಣೆ ಯಥಾವತ್ ಒಪ್ಪಿಸಿ ಚಪ್ಪಾಳೆ ಗಿಟ್ಟಿಸಿದರು ಧ್ರುವ.

ಗಾಯಕ, ನಟ ಚಂದನ್ ಶೆಟ್ಟಿ ಕಷ್ಟದ ಸಮಯದಲ್ಲಿ ಧ್ರುವ ಸಹಾಯ ಮಾಡಿದ್ದನ್ನು ನೆನೆದರು. ತಾನು ಬರೆದ ಒಂದು ಹಾಡನ್ನು ಎಂಟು ವರ್ಷ ಕಾಪಾಡಿಕೊಂಡು ಪೊಗರು ಚಿತ್ರದಲ್ಲಿ ಬಳಸಿಕೊಂಡಿದ್ದನ್ನು ಸ್ಮರಿಸಿದರು. ಚಂದನ್ ಶೆಟ್ಟಿ ಜೊತೆ ನಟಿಸಿದ ಆಲ್ಬಂ ಹಾಡೊಂದಕ್ಕೆ ಸಿಕ್ಕ 501 ರುಪಾಯಿ ಮೊದಲ ಸಂಭಾವನೆ ಎಂದು ಅಚ್ಚರಿಸಿಪಡಿಸಿದರು ಧ್ರುವ ಸರ್ಜಾ.

ಗೆಳೆಯ, ನಟ ರಾಕೇಶ್ ಅಡಿಗ ಮಾತನಾಡಿ ಧ್ರುವ ಸರ್ಜಾರ ಬಾಲ್ಯದ ತುಂಟಾಟದ ಘಟನೆ ಹಂಚಿಕೊಂಡರು. ಧ್ರುವ ದೈವಭಕ್ತರೂ ಆಗಿದ್ದು ಆಧ್ಯಾತ್ಮ ಆಸಕ್ತರೂ ಹೌದು ಎಂಬ ವಿಷಯ ಬಹಿರಂಗಪಡಿಸಿದರು. ಇದಕ್ಕೆ ತಕ್ಕಂತೆ, ಗರುಡ ಪುರಾಣದ ಕೆಲವು ವಿಷಯಗಳ ಬಗ್ಗೆ ಧ್ರುವ ಸರ್ಜಾ ನಿರರ್ಗಳವಾಗಿ ಮಾತನಾಡಿ ಅಚ್ಚರಿ ಮೂಡಿಸಿದರು.
ಧ್ರುವ ಮೌನದಾನಿ ಎಂಬುದನ್ನು ಅವರಿಂದ ಉಪಕೃತರಾದ ಹಲವರು ಬಹಿರಂಗ ಪಡಿಸಿದರು. ಆಟೋ ಖರೀದಿಗೆ, ಆಪರೇಷನ್ಗೆ, ಕಾಲೇಜು ಅಡ್ಮಿಷನ್ಗೆ ಹೀಗೆ ಅನೇಕ ಸಂದರ್ಭಗಳಲ್ಲಿ ಧ್ರುವ ಸಹಾಯ ಮಾಡಿದ್ದನ್ನು ಸ್ಮರಿಸಿದರು. ಮೂರು ವರ್ಷದ ದೃಷ್ಟಿಹೀನ ಬಾಲಕನಿಗೆ ಚಿಕಿತ್ಸೆಗೆ ನೆರವಾಗಿ ದೃಷ್ಟಿ ಮರಳಿದ್ದು ಗಮನ ಸೆಳೆಯಿತು. ತಾವು ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವರೋ ಅಂಥ ಗುಣಮಟ್ಟದ ಆಸ್ಪತ್ರೆಗೇ ಸಹಾಯ ಕೇಳಿ ಬಂದವರನ್ನು ಕಳಿಸುವುದು ವಿಶೇಷ..

ಕಲಾವಿದರಾದ ಬುಲೆಟ್ ರಕ್ಷಕ್, ಐಶ್ವರ್ಯ ಸಿಂಧೋಗಿ, ಯಶಸ್ವಿನಿ, ರಮೋಲಾ, ಆಸಿಯಾ ಬೇಗಂ, ಧನುಷ್ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದರು.ಚಿಲ್ಲರ್ ಮಂಜು, ಮನೋಹರ್ ಕಾಮಿಡಿ ಎಲ್ಲರನ್ನು ನಗೆಗಡಲಿಗೆ ಕರೆದುಕೊಂಡು ಹೋಯಿತು. ನಿರ್ದೇಶಕ ಚೇತನ್ ಕುಮಾರ, ನೃತ್ಯ ಸಂಯೋಜಕ ಮುರಳಿ ಮಾಸ್ಟರ್, ಛಾಯಾಗ್ರಾಹಕ ಡೇವಿಡ್ ಮತ್ತಿತರರು ಧ್ರುವ ಜೊತೆ ತಮ್ಮ ಸಿನಿ ಪಯಣ ಅನುಭವ ಹಂಚಿಕೊಂಡರು.

ಉದಯ ಟಿವಿಯ ಸಿಂಧು ಭೈರವಿ, ಶಾಂತಿನಿವಾಸ, ಶೀಘ್ರದಲ್ಲಿ ಪ್ರಸಾರವಾಗಲಿರುವ ರಥಸಪ್ತಮಿ ಧಾರಾವಾಹಿ ಕಲಾವಿದರ ನೃತ್ಯ ವರ್ಣರಂಜಿತವಾಗಿತ್ತು. ಉದಯ ಟಿವಿಯ ಕಾದಂಬರಿ ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣ ಮಾಡಿದ ಶ್ವೇತಾ ಚಂಗಪ್ಪ ಮತ್ತೆ ಹಲವು ವರ್ಷಗಳ ನಂತರ ಉದಯ ಟಿವಿಯ “ಧ್ರುವ ದಸರಾ” ಕಾರ್ಯಕ್ರಮ ನಿರೂಪಕರಾಗಿ ಬಂದ್ದದ್ದು ವಿಶೇಷ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin