ಅಕ್ಟೋಬರ್ 30 ರಿಂದ ಸಿರಿ ಕನ್ನಡದಲ್ಲಿ `ಅಮೃತ ಘಳಿಗೆ’ ಧಾರಾವಾಹಿ ಆರಂಭ

ಕಿರುತೆರೆ ಲೋಕದಲ್ಲಿ ಹಲವಾರು ಸೃಜನಾತ್ಮಕ ಕಾರ್ಯಕ್ರಮಗಳನ್ನು ನೀಡಿ ಕನ್ನಡಿಗರ ಮನದಲ್ಲಿ ಭದ್ರವಾದ ಸ್ಥಾನಗಳಿಸಿರುವ ಸಿರಿಕನ್ನಡ ವಾಹಿನಿ ಮತ್ತೊಂದು ಮೆಗಾ ಧಾರಾವಾಹಿಯೊಂದಿಗೆ ವೀಕ್ಷಕರಿಗೆ ಕನ್ನಡ ರಾಜ್ಯೋತ್ಸವದ ಉಡುಗೊರೆ ನೀಡಲು ಮುಂದಾಗಿದೆ.

ಇದೇ ಅಕ್ಟೋಬರ್ 30 ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9 ಗಂಟೆಗೆ ಅಮೃತಘಳಿಗೆ ಹೊಸ ಮೆಗಾ ಧಾರಾವಾಹಿ ಆರಂಭವಾಗಲಿದೆ. ಕಿರುತೆರೆಯ ಖ್ಯಾತ ನಿರ್ದೇಶಕ, ಬರಹಗಾರ ರವಿ ಆರ್ ಗರಣಿಯವರ ಸಾರಥ್ಯದಲ್ಲಿ ಈ ಧಾರಾವಾಹಿಯ ಕಥೆ ಮೂಡಿಬರುತಿದ್ದು, ಹೆಸರಾಂತ ನಿರ್ದೇಶಕರಾದ ಭಾರತೀಶ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ಹಿರಿಯ ಕಲಾವಿದೆ ಲಕ್ಷ್ಮಿ ಭಟ್ ಸೇರಿದಂತೆ ಕಿರುತೆರೆಯ ಖ್ಯಾತ ಕಲಾವಿದರೊಂದಿಗೆ ಹೊಸ ಕಲಾವಿದರ ಸಂಗಮವಿರುವ ಈ ಧಾರಾವಾಹಿ ವೀಕ್ಷಕರ ಮನ ಮುಟ್ಟುವಂತಿದೆ.

ಈ ಧಾರಾವಾಹಿಯಲ್ಲಿ ನಾಯಕಿ ಪಾತ್ರ ತುಂಬಾ ವಿಶಿಷ್ಟವಾಗಿದೆ. ಎರಡು ವಿಭಿನ್ನ ನೆಲೆಯ ಕೌಟುಂಬಿಕ ಸಂಘರ್ಷದ ಕಥೆಯಲ್ಲಿನ ತಿರುವುಗಳು ಈ ಮೆಗಾ ಧಾರಾವಾಹಿಗೆ ಹೊಸ ರೂಪ ನೀಡುತ್ತದೆ. ಕೇವಲ ರಿಮೇಕ್ ಮತ್ತು ಅದ್ದೂರಿತನದಲ್ಲೆ ಕಳೆದು ಹೋಗಿರುವ ಧಾರಾವಾಹಿ ಪ್ರಪಂಚಕ್ಕೆ ಕಥೆಯನ್ನೇ ಮೂಲವಾಗಿಟ್ಟುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿರೋ ಅಮೃತಘಳಿಗೆ ಧಾರಾವಾಹಿಗೆ ನೋಡುಗರ ಪ್ರೋತ್ಸಾಹ ಅತ್ಯಗತ್ಯ ಎಂಬುದು ಸಿರಿಕನ್ನಡ ವಾಹಿನಿಯ ಅಭಿಪ್ರಾಯ.