ಕಿರುತೆರೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸರ್ಕಾರದ ಸೌಲಭ್ಯಕ್ಕೆ ರವಿ ಗರಣಿ ಮನವಿ

ಕಿರುತೆರೆ ಕ್ಷೇತ್ರದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನ ಕೆಲಸ ಮಾಡುತ್ತಾರೆ. ಸುಮಾರು ಇಪ್ತತ್ತು ಸಾವಿರಕ್ಕೂ ಹೆಚ್ಚು ಜನ ಈ ಉದ್ಯಮವನ್ನೇ ನಂಬಿಕೊಂಡಿದ್ದಾರೆ. ಯಶಸ್ವಿನಿ ಸೇರಿದಂತೆ ಯವುದೇ ಸರ್ಕಾರದ ಯೋಜನೆಗಳು ಸಿಗುತ್ತಿಲ್ಲ ತಲುಪಿಸುವ ವ್ಯವಸ್ಥೆ ಮಾಡಿ ಎಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ರವಿ ಆರ್ ಗರಣಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಪ್ರಕಟವಾಗುತ್ತಿರುವ “ಟಿವಿ ಠೀವಿ” ಮಾಸ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರಿಗೆ ಮನವಿ ಮಾಡಿದ್ದಾರೆ.
ಕಿರುತೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂದಿ ಮತ್ತು ಅವರ ಅವಲಂಬಿತರಿಗೆ ಸರ್ಕಾರದ ಸೌಲಭ್ಯ ಒದಗಿಸಿಕೊಟ್ಟರೆ ಬಹುತೇಕರಿಗೆ ಅನುಕೂಲವಾಗಲಿದೆ ಎಂದರು.
ಕೆಲವು ವರ್ಷಗಳು ಪ್ರಸಾರವಾಗಿ ಸ್ಥಗಿತಗೊಂಡಿದ್ದ “ಟಿವಿ ಠೀವಿ” ಮಾಸಪತ್ರಿಕೆಯನ್ನು ಪುನರಾರಂಭ ಮಾಡುತ್ತಿದ್ದೇವೆ. ವಿಶೇಷ ಸಂಚಿಕೆ ಬಿಡುಗಡೆಯಾಗಿದೆ. ಈ ಮಾಸ ಪತ್ರಿಕೆ ಎಲ್ಲೂ ಮಾರಾಟಕ್ಕಿರುವುದಿಲ್ಲ. ನಮ್ಮ ಸದಸ್ಯರಿಗೆ ಹಾಗೂ ಆಸಕ್ತರಿಗೆ ನಾವೇ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸೃಜನ್ ಲೋಕೇಶ್ ಮಾತನಾಡಿ ಮುಂದಿನ ವರ್ಷ ನಮ್ಮ ಸಂಸ್ಥೆ 25 ನೇ ವರ್ಷಕ್ಕೆ ಅಡಿಯಿಡುತ್ತಿದೆ ಈಗಿರುವ ನಮ್ಮ ಸಂಸ್ಥೆಯ ಸದಸ್ಯರು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಬೇಕು ಹಾಗೂ ಇನ್ನೂ ಸದಸ್ಯರಾಗದವರೂ ಬೇಗ ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿದರು

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ರವಿ ಆರ್ ಗರಣಿ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದ ಸಹಕಾರ ಸಚಿವ ಕೆ.ಎನ್ ರಾಜಣ್ಣ, “ಟಿವಿ ಠೀವಿ”ಮಾಸಪತ್ರಿಕೆಯಲ್ಲಿ ಬಂದಿರುವ ಲೇಖನಗಳು ಚೆನ್ನಾಗಿದೆ. ಅಧ್ಯಕ್ಷ ರವಿ ಆರ್ ಗರಣಿ, ಅವರು ಹೇಳಿರುವ ವಿಷಯಗಳನ್ನು ಆದಷ್ಟು ಬೇಗ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಮುಖ್ಯಮಂತ್ರಿಗಳನ್ನು ನಿಮ್ಮ ಸಂಘದ ಪದಾಧಿಕಾರಿಗಳು ಭೇಟಿ ಮಾಡಲು ವ್ಯವಸ್ಥೆ ಮಾಡುತ್ತೇನೆ. ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ, ನಟಿ ಉಮಾಶ್ರೀ, ನಟ ಪ್ರಕಾಶ್ ರೈ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಮಿಲನ ಪ್ರಕಾಶ್ ಮುಂತಾದವರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ “ಟಿವಿ ಠೀವಿ” ಮಾಸ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.

ಹಿರಿಯ ನಿರ್ದೇಶಕರಾದ ಟಿ.ಎನ್ ಸೀತಾರಾಮ್, ಬಿ.ಸುರೇಶ್, ಬಿ.ಎಸ್ ಲಿಂಗದೇವರು, ಸಿಹಿ ಕಹಿ ಗೀತಾ, ಸಿಹಿಕಹಿ ಚಂದ್ರು, ಹಿರಿಯ ಕಲಾವಿದರಾದ ಗಿರಿಜಾ ಲೋಕೇಶ್, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಉಪಾಧ್ಯಕ್ಷ ಗಣೇಶ್ ರಾವ್ ಕೇಸರ್ ಕರ್ ,ವೀಣಾ ಸುಂದರ್, ಟೀವಿ ಠೀವಿಯ ಪ್ರಧಾನ ಸಂಪಾದಕ ಬುಕ್ಕಾಪಟ್ಣ ವಾಸು ಸೇರಿದಂತೆ ಅಸೋಸಿಯೇಷನ್ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.