ನಟ ರಾಕ್ಷಸ ಡಾಲಿ ಧನಂಜಯ ಸಾಮಾಜಿಕ ಕಳಕಳಿಗೆ ಮುಖ್ಯಮಂತ್ರಿ ಸಿದ್ದು ಶ್ಲಾಘನೆ

ಸಮಾಜಮುಖಿ ಕಾಳಜಿ,ಕಳಕಳಿ ಹೊಂದಿರುವ ನಟ, ನಿರ್ಮಾಪಕ ಡಾಲಿ ಧನಂಜಯ ಅವರು ರಾಜ್ಯ ಸರ್ಕಾರದ ಅಂಗಸಂಸ್ಥೆಯಾದ ಲಿಡ್ಕರ್ ಸಂಸ್ಥೆಗೆ ರಾಯಬಾರಿಯಾಗಿದ್ದಾರೆ. ಅದು ಉಚಿತವಾಗಿ ಎನ್ನುವುದು ಮತ್ತೊಂದು ವಿಶೇಷದ ಸಂಗತಿ.

ಲಿಡ್ಕರ್ ಸಂಸ್ಥೆಗೆ ನಟ ಧನಂಜಯ ಅವರು ರಾಯಬಾರಿ ಆಗಿರುವ ವಿಷಯವನ್ನು ಪ್ರಕಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ,`ಖ್ಯಾತ ನಟ ಡಾಲಿ ಧನಂಜಯ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದೀವಿ. ಉಚಿತವಾಗಿ ರಾಯಭಾರಿ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಸಾಮಾಜಿಕ ಕಳಕಳಿ ಇರುವ ನಟ, ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದು ಅರ್ಥಪೂರ್ಣವಾಗಿದೆ. ಇದರಿಂದ ಚರ್ಮ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಶ್ಲಾಘಿಸಿದ್ಧಾರೆ.
ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ -ಲಿಡ್ಕರ್ ರಾಯಭಾರಿಯಾಗುವ ಮೂಲಕ ನಟ ಡಾಲಿ ಧನಂಜಯ್ ಅವರು ಸರ್ಕಾರದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಮೂಲಕ ಚರ್ಮ ಕುಶಲಕರ್ಮಿಗಳ ಕುಟುಂಬದ ನೆರವಿಗೆ ನಿಂತಿದ್ದಾರೆ.

ಈ ಮೂಲಕ ಅಣ್ಣಾವ್ರು ವರನಟ ಡಾ. ರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಹಾದಿಯಲ್ಲಿ ಸಾಗಿದ್ದು ಧನಂಜಯ ಅವರ ಸಾಮಾಜಿಕ ಕಳಕಳಿ ಮತ್ತು ಬದ್ದತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಸ್ಯಾಂಡಲ್ವುಡ್ ನಲ್ಲಿ ನಟನಾಗಿ ನಿರ್ಮಾಪಕನಾಗಿ ಬ್ಯುಸಿ ಇರುವ ಸ್ಟಾರ್ ನಟ ಡಾಲಿ ಧನಂಜಯ ಅವರು ನಟನೆ, ನಿರ್ಮಾಣದ ಜೊತೆಗೀಗ ಧನಂಜಯ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಉಚಿತವಾಗಿ ಲಿಡ್ಕರ್ ಬ್ರಾಂಡ್ ಪ್ರಮೋಟ್ ಮಾಡುವ ಮೂಲಕ ಧನಂಜಯ್ ಮಾದರಿಯಾಗಿದ್ದಾರೆ.

ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 67ನೇ ಪುಣ್ಯ ಸ್ಮರಣೆ ದಿನವೇ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಧನಂಜಯ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಪ್ರಾರಂಭಿಸಿದರು.
ಲಿಡ್ಕರ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ರಾಯಭಾರಿಯನ್ನ ಆಯ್ಕೆ ಮಾಡಿ ಈ ನಿಗಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರಕ್ಕೆ ಡಾಲಿ ರಾಯಾಭಾರಿಯಾಗುವ ಮೂಲಕ ಬಡವರ ಮಕ್ಕಳು ಬೆಳಿಬೇಕು ಎನ್ನುವುದನ್ನು ಮತ್ತೆ ಸಾರಿ ಹೇಳಿದ್ದಾರೆ.

ಘೋಷಣೆ ಬಳಿಕ ಮಾತನಾಡಿದ ನಟ ಧನಂಜಯ, ‘ಲಿಡ್ಕರ್ ಅಡಿ ಐವತ್ತು ಸಾವಿರ ಕುಟುಂಬವಿದೆ. ನಮ್ಮದೇ ಆದ ಬ್ರಾಂಡಿಗೆ ನಾವು ಸಹಾಯ ಮಾಡಬೇಕು ಎನ್ನುವ ಕಾರಣಕ್ಕೆ ಇದನ್ನು ಒಪ್ಪಿಕೊಂಡೆ. ಮೇಕ್ ಇನ್ ಇಂಡಿಯಾ ಹೇಗಿದೆಯೋ ಹಾಗೆ ಮೇಕ್ ಇನ್ ಕರ್ನಾಟಕ ಆಗಬೇಕು. ಲಿಟ್ಕರ್ ಗೆ ಸಪೆÇೀರ್ಟ್ ಮಾಡುವುದರಿಂದ ಅದನ್ನೆ ನಂಬಿಕೊಂಡ ಕುಟುಂಬಗಳಿಗೆ ಸಹಾಯವಾಗಲಿದೆ. ಮೈಸೂರ್ ಸಿಲ್ಕ್ ಹೇಗಿದಿಯೋ ಹಾಗೆ ನಮ್ಮದೆ ಬ್ರ್ಯಾಂಡ್ ಇರಬೇಕು’ ಎಂದರು.

ಬಳಿಕ ಲಿಡ್ಕರ್ ಕೇಂದ್ರಕ್ಕೆ ಭೇಟಿ ನೀಡಿದ ನಟ ಧನಂಜಯ ಅವರಿಗೆ ವಿಶೇಷವಾಗಿ ತಯಾರಿಸಿದ್ದ ಲಿಡ್ಕರ್ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದರು. ಧನಂಜಯವರಿಗಾಗಿಯೇ ವಿಶೇಷವಾಗಿ ಚಪ್ಪಲಿಯನ್ನು ತಯಾರಿಸಲಾಗಿತ್ತು. ಡಾಲಿ ಹೊಸ ಚಪ್ಪಲಿಯನ್ನು ಧರಿಸಿ ಅಲ್ಲಿನ ಕುಶಲಕರ್ಮಿಗಳ ಜೊತೆ ಮಾತನಾಡಿ ಖುಷಿಪಟ್ಟರು.