ಮಂಡ್ಯದ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ನ ಏಳು ವಿದ್ಯಾರ್ಥಿಗಳು ಜಪಾನ್ನ “ವಿದ್ಯಾರ್ಥಿ ವಿನಿಮಯ’ಕ್ಕೆ ಆಯ್ಕೆ
ಜಪಾನ್ನ ಇಥಾಮಿ ನಗರದಲ್ಲಿ ನಡೆಯಲಿರುವ ‘ವಿದ್ಯಾರ್ಥಿ ವಿನಿಮಯ’ ಕಾರ್ಯಕ್ರಮಕ್ಕೆ ಮಂಡ್ಯ ತಾಲೂಕಿನ ಸಿದ್ದಯ್ಯನಕೊಪ್ಪಲಿನ ಪ್ರತಿಷ್ಠಿತ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ನ ಏಳು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಏಪ್ರಿಲ್ 12ರಿಂದ 20ರವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ಮೊದಲ ವರ್ಷ ಇಬ್ಬರು, ಕಳೆದ ವರ್ಷ ಇಬ್ಬರು ಹಾಗೂ ಈ ಸಾಲಿನಲ್ಲಿ ಏಳು ವಿದ್ಯಾರ್ಥಿಗಳು ಜಪಾನ್ ಪ್ರವಾಸದ ಅವಕಾಶ ಪಡೆದುಕೊಂಡಿದ್ದಾರೆ. ಇದರೊಂದಿಗೆ ಶಾಲೆಯ 11 ವಿದ್ಯಾರ್ಥಿಗಳು ಆಯ್ಕೆಯಾದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಶಾಲೆಯ ಅಧ್ಯಕ್ಷ ಎಸ್,ಮಂಜು ಅವರ ಪರಿಶ್ರಮ ಮತ್ತು ಕಾಳಜಿಯಿಂದ ಇದು ಸಾಧ್ಯವಾಗಿದೆ.
ಈ ಬಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಕೊತ್ತತ್ತಿ ಗ್ರಾಮದ ಕೆ.ವಿ.ರೇವತಿ, ಇಂಡುವಾಳು ಗ್ರಾಮದ ಎಸ್. ಮೋಹನ್ಕುಮಾರ್, ಮಂಡ್ಯ ನಗರದ ಕಲ್ಲಹಳ್ಳಿಯ ಕೆ.ಬಿ. ಯಶಸ್ವಿನಿ ಮತ್ತು ಎ.ಅಪೂರ್ವ, 7ನೇ ತರಗತಿ ವಿದ್ಯಾರ್ಥಿಗಳಾದ ಮರೀಗೌಡ ಲೇಔಟ್ ನ ಪಿ.ಸಾನಿಕಾ, ಎ.ಹುಲ್ಲುಕೆರೆ ಗ್ರಾಮದ ಎಚ್.ವೈ.ಏಕಾಂತ್ ಮತ್ತು 9ನೇ ತರಗತಿ ವಿದ್ಯಾರ್ಥಿ ಸಿದ್ದಯ್ಯನಕೊಪ್ಪಲು ಗ್ರಾಮದ ಧನುಷ್ ಕೆ.ಗೌಡ ಮೂರು ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಪಾನ್ಗೆ ಆಯ್ಕೆಯಾಗಿದ್ದಾರೆ
ಈ ವರ್ಷದ ಕಾರ್ಯಕ್ರಮಕ್ಕೆ ರಿಪಬ್ಲಿಕ್ ಸಂಸ್ಥೆಯಿಂದ ಮೊದಲ ಸುತ್ತಿನಲ್ಲಿ 78 ವಿದ್ಯಾರ್ಥಿಗಳು ಸ್ಪರ್ಧಿಸಿ ಪರೀಕ್ಷೆ ಬರೆದಿದ್ದರು. 2ನೇ ಸುತ್ತಿಗೆ 21 ವಿದ್ಯಾರ್ಥಿಗಳು ಆಯ್ಕೆಯಾಗಿ ಪ್ರಾಯೋಗಿಕ ಪ್ರದರ್ಶನ ನೀಡಿದರು. ಮೂರನೇ ಸುತ್ತಿನಲ್ಲಿ 7 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಮೊದಲ ಸುತ್ತಿನ ಲಿಖಿತ ಪರೀಕ್ಷೆಯಲ್ಲಿ ‘ಭಾರತ ಮತ್ತು ಜಪಾನ್ನ’ ಸಾಂಪ್ರದಾಯಿಕ ಸಂಸ್ಕೃತಿಗಳ ಜತೆಗೆ ಪ್ರಚಲಿತ ವಿದ್ಯಮಾನ ಆಧರಿಸಿತ್ತು.
ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದ ಅವಧಿಯಲ್ಲಿ ಅಲ್ಲಿನ ಶೈಕ್ಷಣಿಕ ವ್ಯವಸ್ಥೆ, ಪ್ರವಾಸಿತಾಣಗಳ ಪರಿಚಯ, ಸಂಸ್ಕೃತಿಯನ್ನು ನಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳಲಿದ್ದು, ನಮ್ಮ ವ್ಯವಸ್ಥೆಯ ಬಗ್ಗೆ ಅಲ್ಲಿ ತಿಳಿಸಲಿದ್ದಾರೆ. ಜತೆಗೆ ಅಲ್ಲಿನ ವಿದ್ಯಾರ್ಥಿಗಳ ಮನೆಯಲ್ಲಿ ವಾಸ್ತವ್ಯವಿರಲಿದ್ದಾರೆ. ಪ್ರಾಂಶುಪಾಲೆ ಸುನೀತಾ ರಾಜನ್ ಉಪಸ್ಥಿತರಿದ್ದರು.
ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ರಿಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆ, ಎರಡನೇ ಹಂತದಲ್ಲಿ ಭಾಷಣ ಹಾಗೂ ಮೂರನೇ ಹಂತದಲ್ಲಿ ಸಂದರ್ಶನ ಇರುತ್ತದೆ. ಈ ಮೂರರಲ್ಲಿಯೂ ಉತ್ತೀರ್ಣರಾದವರನ್ನು ಶೈಕ್ಷಣಿಕ ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕಳೆದ ಮೂರು ಸಾಲಿನಿಂದ ರಿಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ.

ಪಾಲಕರೇ ರೋಲ್ ಮಾಡೆಲ್: ಜಿಲ್ಲಾಧಿಕಾರಿ ಡಾ. ಕುಮಾರ
ವಿದ್ಯಾರ್ಥಿ ಜೀವನದಲ್ಲಿ ವಿಧೇಯತೆ ರೂಢಿಸಿಕೊಳ್ಳಬೇಕು. ಪಾಲಕರೇ ರೋಲ್ ಮಾಡೆಲ್ಗಳಾಗಬೇಕು. ಜಿಲ್ಲೆಯಲ್ಲಿ ಕೃಷಿ ಅವಲಂಬಿತ ಕುಟುಂಬ ಹೆಚ್ಚಾಗಿದ್ದು, ಅವರ ಕನಸಿಗೆ ನೀರೆರೆಯುವ ಜಾಣೆ ರೂಢಿಸಿಕೊಂಡು ಕಾಣದ ದೇವರನ್ನು ಅವರಲ್ಲೇ ಕಾಣಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದ್ದಾರೆ
ಶೈಕ್ಷಣಿಕ ಪ್ರವಾಸಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ಅಭಿನಂದಿಸಿ ಮಾತನಾಡಿದ ಅವರು, ಪ್ರತಿ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಅವಿರತವಾಗಿ ಶ್ರಮಿಸುತ್ತಾರೆ. ಅವರ ಕನಸಿನ ಮೌಲ್ಯವನ್ನು ಅರಿತು ಸತ್ಪಜೆಗಳಾಗಿ ಹೊರ ಹೊಮ್ಮಬೇಕು ಎಂದು ಸಲಹೆ ನೀಡಿದರು.
ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಉತ್ತಮ ಪರಿಸರ, ಅತ್ಯುತ್ತಮ ವಾತಾವರಣದಲ್ಲಿ ನಿರ್ಮಾಣಗೊಂಡಿದೆ. ಸಂಸ್ಥೆಯ ಅಧ್ಯಕ್ಷ ಮಂಜು ಅವರ ಕಾಳಜಿ ಅನನ್ಯವಾಗಿದ್ದು, ಇಂತಹ ಸುಂದರ ಪರಿಸರದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಪುಣ್ಯವಂತರು. ಭಾರತ ಮತ್ತು ಜಪಾನ್ ರಾಷ್ಟ್ರದ ನಡುವಿನ ವಿದ್ಯಾರ್ಥಿಗಳಲ್ಲಿ ಬಾಂಧವ್ಯ ವೃದ್ಧಿಸುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಸತತ ಮೂರನೇ ಬಾರಿಗೆ ಆಯ್ಕೆಗೊಂಡಿರುವುದು ಸಂತಸದ ವಿಚಾರ ಎಂದರು.

ಸಂಸ್ಥೆಯ ಅಧ್ಯಕ್ಷ ಎಸ್.ಮಂಜು ಮಾತನಾಡಿ, ಶೈಕ್ಷಣಿಕ ಕ್ಷೇತ್ರದ ಸವಾಲುಗಳನ್ನು ಮೆಟ್ಟಿ ನಿಲ್ಲಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಸದುದ್ದೇಶದಿಂದ ಆರಂಭಗೊಂಡಿರುವ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಎಲ್ ಕೆಜಿಯಿಂದ ಎಸ್ಎಸ್ಎಲ್ಸಿವರೆಗೆ 503 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಕಳೆದ ಮೂರು ವರ್ಷದಿಂದ ಶಾಲೆಯ ಮಕ್ಕಳು ಕಾರ್ಯಕ್ರಮಕ್ಕೆ ತೆರಳುತ್ತಿದ್ದು, ಈ ಬಾರಿಯ ವಿಶೇಷವೆಂದರೆ ಜಪಾನ್ನ ಒಸಾಕೋ ನಗರದಲ್ಲಿ ನಡೆಯಲಿರುವ ಎಕ್ ಪೋದಲ್ಲಿ ವಿಶ್ವದ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ನಮ್ಮ ಮಕ್ಕಳ ಪಾಲ್ಗೊಳ್ಳುವಿಕೆ ಹೆಮ್ಮೆ ತರಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ

