Review: “ಏಳುಮಲೆ” ಕುತೂಹಲ ಕೆರಳಿಸುವ ರೋಚಕ ಪ್ರೇಮ ಕಹಾನಿ
ವಿಮರ್ಶೆ
ಚಿತ್ರ: ಏಳುಮಲೆ
ನಿರ್ದೇಶನ: ಪುನೀತ್ ರಂಗಸ್ವಾಮಿ
ತಾರಾಗಣ: ರಾಣಾ, ಪ್ರಿಯಾಂಕ, ಟಿ,ಎಸ್ ನಾಗಾಭರಣ, ಕಿಶೋರ್, ಸರ್ದಾರ್ ಸತ್ಯ, ಜಗಪತಿಬಾಬು,ಜಗ್ಗಪ್ಪ, ಕಡ್ಡಿಪುಟಿ ಚಂದ್ರು ಮತ್ತಿತರರು
ರೇಟಿಂಗ್ : **** 4/5
ಕನ್ನಡದಲ್ಲಿ ಇತ್ತೀಚೆಗೆ ವಿಭಿನ್ನ ಮಾದರಿಯ ಸಿನಿಮಾಗಳು ಬರುತ್ತಿವೆ, ಅದರಲ್ಲಿ ಸಿನಿಮಾ ವೀಕ್ಷಕ ಒಳ್ಳೆಯ ಚಿತ್ರಗಳನ್ನಷ್ಟೇ ಸ್ವೀಕರಿಸಿ ಉಳಿದ ಚಿತ್ರಗಳ ಕಡೆಗೆ ಮೂಸಿಯೂ ನೋಡುವುದಿಲ್ಲ. ಅದರಲ್ಲಿಯೂ ಹೊಸಬರು ವಿಭಿನ್ನ ಕಥೆಯೊಂದಿಗೆ ಜನರ ಮುಂದೆ ಬರುತ್ತಿದ್ದು ಪ್ರೇಕ್ಷಕ ಅವುಗಳನ್ನು ಬಾಚಿ ತಪ್ಪಿಕೊಂಡಿದ್ದಾನೆ, ಅಂತಹ ಸಿನಿಮಾವಾಗಬಲ್ಲ ಚಿತ್ರ “ಏಳುಮಲೆ”.
ತಮಿಳುನಾಡು ಮತ್ತು ಕರ್ನಾಟಕದ ಪ್ರೇಮ ಕಹಾನಿಗೆ ಕಾಡುಗಳ್ಳ ವೀರಪ್ಪನ್ ಕಾಲದಲ್ಲಿಯ ಶಸ್ತಾಸ್ತ್ರ ಕಳ್ಳಸಾಗಾಣೆ, ಪೊಲೀಸರು ತಾವು ಮಾಡಿದ ತಪ್ಪನ್ನು ಅಮಾಯಕರ ಮೇಲೆ ಹಾಕುವ ತಿರುಳನ್ನು ಹದಗೊಳಿಸಿ ತೆರೆಗೆ ತಂದಿರುವ ಚಿತ್ರ ಇದು.
ಮೊದಲ ಬಾರಿಯಲ್ಲಿಯೇ ನಿರ್ದೇಶಕ ಪುನೀತ್ ರಂಗಸ್ವಾಮಿ, ಕುತೂಹಲ ಭರಿತ ಚಿತ್ರಕಥೆಯನ್ನು ಸಿನಿಮಾರೂಪಕ್ಕೆ ಇಳಿಸುವ ಮೂಲಕ ಪ್ರೇಕ್ಷಕರನ್ನು ಕೊನೆತನಕ ಸೀಟಿನ ತುದಿಯಲ್ಲಿ ಕುಳ್ಳಿರಿಸಿ ನೋಡುವ ಸಿನಿಮಾ ನೀಡಿದ್ದಾರೆ, ಈ ಕಾರಣಕ್ಕಾಗಿಯೇ ಚಿತ್ರ ಅಲ್ಲಲ್ಲಿ ರೋಚಕ ತಿರುವು ಪಡುಕೊಂಡಿದೆ, ಮುಂದೇನು ಎನ್ನುವುದನ್ನು ಊಹೆ ಮಾಡಲು ಆಗದ ಕುತೂಹಲ ಕಾಪಾಡಿಕೊಂಡಿದೆ. ಇದರ ಸಂಪೂರ್ಣ ಶ್ರೇಯ ಚಿತ್ರದ ಕ್ರಿಯೇಟೀವ್ ಹೆಡ್ ಅಗಿ ಕೆಲಸ ಮಾಡಿರುವ ನಿರ್ಮಾಪಕ ತರುಣ್ ಸುದೀರ್ ಅವರಿಗೆ ಸಲ್ಲಬೇಕು.
ಹರೀಶ್ ( ರಾಣಾ) ಕ್ಯಾಬ್ ಚಾಲಕ, ಮೈಸೂರಿನಲ್ಲಿ ಓದುತ್ತಿದ್ದ ವೇಳೆ ತಮಿಳುನಾಡಿನ ಸೇಲಂನ ಯುವತಿ ರೇವತಿ (ಪ್ರಿಯಾಂಕ) ಳನ್ನು ಇಷ್ಟಪಡುತ್ತಾಳೆ, ಆಕೆಯೂ ಕೂಡ, ಹೇಳಿ ಕೇಳಿ ಶ್ರೀಮಂತೆ ಬೇರೆ, ಈ ವಿಷಯ ಮನೆಯರಿಗೆ ತಿಳಿದು ಮಗಳಿಗೆ ಬೇರೆ ಮದುವೆ ಮಾಡಲು ಮುಂದಾಗುತ್ತಾರೆ. ಪ್ರೇಮಿಯನ್ನು ಭೇಟಿ ಮಾಡಲು ಮದುವೆ ಮನೆಯಿಂದ ಓಡಿ ಬರ್ತಾಳೆ.
ಇತ್ತ ಹರೀಶ್ ಆಕೆಯನ್ನು ಚಾಮರಾಜನಗರದಲ್ಲಿ ಭೇಟಿ ಮಾಡಲು ಮುಂದಾಗುತ್ತಾನೆ, ಆಕೆಯನ್ನು ಭೇಟಿ ಮಾಡಲು ಬರುವಾಗ ಗಡಿ ಭಾಗದಲ್ಲಿ ಪೊಲೀಸರ ತಪಾಸಣೆ, ಹೊಸದಾಗಿ ಕೆಲಸಕ್ಕೆ ಸೇರಿಕೊಂಡ ಪೇದೆ ಮಂಟೆಲಿಂಗ- ಜಗ್ಗಪ್ಪ, ಅತಿ ಅತಿ ಉತ್ಸಾಹದ ಕೆಲಸದ ಮೇಲಿನ ಕಾಳಜಿ ಮಹೇಶನನ್ನು ಸಮಸ್ಯೆಗೆ ಸಿಲಿಕಿಸಿ ಬಿಡುತ್ತದೆ.
ಪೇಮಿಯನ್ನು ಭೇಟಿ ಮಾಡಲು ಕಾದು ಕುಳಿತ ರೇವತಿ, ತನ್ನದಲ್ಲದ ತಪ್ಪಿಗೆ ಪೊಲೀಸ್ ಠಾಣೆಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿರು ಹರೀಶ ಮಗಳು ಮದುವೆ ಮನೆಯಿಂದ ಕಾಣೆಯಾದ್ದರಿಂದ ಕುಪಿತಗೊಂಡ ಅಣ್ಣ,ಆತನ ಸಂಗಡಿಗರು, ಶಸ್ತಾಸ್ತ್ರ ಕಳ್ಳಸಾಗಾಣೆ, ಕಾಡುಗಳನ್ನು ಮಟ್ಟಹಾಕಲು ಕಾಯುತ್ತಿರುವ ವಿಶೇಷ ಕಾರ್ಯಪಡೆ ಇವೆಲ್ಲದರ ನಡುವೆ ಯುವ ಪ್ರೇಮಿಗಳ ಕಾತುರ, ಕನವರಿಕೆ, ಒಂದಾಗುತ್ತಾರೆ, ಇಲ್ಲ ಮುಂದೇನು ಎನ್ನುವುದು ಕುತೂಹಕಕಾರಿ ಸಂಗತಿ ಅದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.
ಮಾಮೂಲಿ ಪ್ರೇಮಕಥೆಯಾದರೂ ಎಲ್ಲಿಯೂ ಬೋರ್ ಆಗದ ರೀತಿ ಚಿತ್ರಕಥೆ ರೂಪಿಸುವ ನಿರ್ದೇಶಕ ಜಾಣ್ಮೆ ಸಿನಿಮಾ ನೋಡುವ ಪ್ರೇಕ್ಷಕನ್ನು ಸನ್ನಿವೇಶದೊಂದಿಗೆ ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಕೂತಹಲಕಾರಿ ಸನ್ನಿವೇಶಗಳು ರೋಚಕತೆಯನ್ನು ಹೆಚ್ಚಿಸಿದೆ. ಮೊದಲ ಸಿನಿಮಾದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟ ಕೀರ್ತಿ ನಿರ್ದೇಶಕರಿಗೆ ಸಲ್ಲಬೇಕು.
ನಟ ರಾಣಾ ಎರಡನೇ ಚಿತ್ರದಲ್ಲಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಉತ್ತಮ ನಟನಾಗಬಲ್ಲ ಎಲ್ಲ ಭರವಸೆ ನೀಡಿದೆ. ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಪ್ರಿಯಾಂಕ ಆಚಾರ್, ಚಿತ್ರರಂಗದಲ್ಲಿ ಒಂದಷ್ಟು ವರ್ಷಗಳ ಕಾಲ ನಿಲ್ಲುವ ವಿಶ್ವಾಸ ಮೂಡಿಸಿದ್ದಾರೆ. ನಿರ್ಮಾಪಕ ತರುಣ್ ಆಯ್ಕೆಯನ್ನು ಪ್ರಿಯಾಂಕ ನಿರಾಸೆಗೊಳಿಸಲ್ಲ.
ಉಳಿದಂತೆ ಕಿಶೋರ್, ಟಿ,ಎಸ್ ನಾಗಾಭರಣ, ಜಗಪತಿ ಬಾಬು,ಜಗ್ಗಪ್ಪ, ಸರ್ದಾರ್ ಸತ್ಯ ಸೇರಿದಂತೆ ಮತ್ತಿತರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ಧಾರೆ. ಚಾಮರಾಜನರ ಮತ್ತು ತಮಿಳುನಾಡಿನ ಭಾಗದ ರಮಣೀಯತೆಯನ್ನು ಮತ್ತಷ್ಟು ಅಂದವಾಗಿ ತೆರೆಗೆ ಕಟ್ಟಿಕೊಡಲಾಗಿದೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

