ವಿಟಿಲಿಗೋ ಸಮಸ್ಯೆಯ ಸುತ್ತಾ.. ” ಬಿಳಿಚುಕ್ಕಿ ಹಳ್ಳಿಹಕ್ಕಿ “ಚಿತ್ರದಲ್ಲಿ ನಟಿ ಕಾಜಲ್ ಕುಂದರ್
ಹಿಂದೆ ಪೋಸ್ಟರ್ ಮೂಲಕ ಗಮನ ಸೆಳೆದಿದ್ದ ` ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರತಂಡಕ್ಕೆ ನಟಿ ಕಾಜಲ್ ಕುಂದರ್ ಆಗಮನವಾಗಿದೆ. ಮಹೇಶ್ ಗೌಡ ನಟಿಸಿ, ನಿರ್ಮಾಣ ಮಾಡಿ, ನಿರ್ದೇಶಿಸಿರುವ ಸಿನಿಮಾದಲ್ಲಿ ವಿಟಿಲಿಗೋ ಸಮಸ್ಯೆಯ ಸುತ್ತಾ ಚಿತ್ರದ ಕಥೆಯನ್ನು ಅನಾವರಣ ಮಾಡಿದ್ದಾರೆ.
ವಿಟಿಲಿಗೋ ಸುತ್ತಾ ಜರುಗುವ, ಪಕ್ಕಾ ಕಮರ್ಷಿಯಲ್ ಧಾಟಿಯ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಮೊದಲು ಎನ್ನುವ ಹೆಗ್ಗಳಿಕೆ ಹೊಂದಿದೆ. ಸಿನಿಮಾ ನಾಯಕಿಯಾಗಿರುವ ಕಾಜಲ್ ಕುಂದರ್ ಪೋಸ್ಟರ್ ಅನ್ನು ಚಿತ್ರ ತಂಡ ಬಿಡುಗಡೆಗೊಳಿಸಿದೆ.
ಕಾಜಲ್ ಕುಂದರ್ ಚಿತ್ರದ ನಾಯಕಿ ಕವಿತಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮೂಲತಃ ಮಂಗಳೂರಿನವರಾದ ಕಾಜಲ್ ಮುಂಬೈನಲ್ಲಿಯೇ ನೆಲೆ ಹೊಂದಿದ್ದರೂ ಕನ್ನಡ ಭಾಷೆಯಲ್ಲಿ ಹಿಡಿತ ಹೊಂದಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಕಾಜಲ್ ಪಾಲಿಗಿದು ಮೈಲಿಗಲ್ಲಿನ ಸಿನಿಮಾ ಎಂಬುದರಲ್ಲಿ ಸಂದೇಹವೇನಿಲ್ಲ.
ರಂಗಭೂಮಿ ಕಲಾವಿದೆಯಾಗಿ ಪಳಗಿಕೊಂಡಿರುವ ಕಾಜಲ್ ಆಡಿಷನ್ ಮೂಲಕವೇ ಕವಿತಾ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಪಾತ್ರಕ್ಕೆ ಹೇಳಿ ಮಾಡಿಸಿದಂತಿರುವ ಈಕೆ, ಬಹುಮುಖ ಪ್ರತಿಭೆ ಹೌದು. ಕವಿತಾ ಎಂಬುದು ಒಂದಿ ಕಥೆಯಲ್ಲಿ ಮಹತ್ವದ್ದಾದ, ಸೂಕ್ಷ್ಮ ಪಾತ್ರ. ಅದಕ್ಕೆ ಕಾಜಲ್ ಜೀವ ತುಂಬಿದ್ದಾರಂತೆ. ಇಂತಹ ನಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಬೇಕು, ಇನ್ನೂ ಒಂದಷ್ಟು ಸವಾಲಿನ ಪಾತ್ರಗಳಿಗೆ ಜೀವ ತುಂಬಬೇಕೆಂಬ ಆಶಯ ನಿರ್ದೇಶಕ ಮಹೇಶ್ ಗೌಡ ಅವರದು
ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಸಿನಿಮಾ ಇದೀಗ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ. ಒಂದೊಳ್ಳೆ ಕಂಟೆಂಟು ಹೊಂದಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ರಿಲೀಸ್ ಡೇಟ್ ಅನ್ನು ಅತೀ ಶೀಘ್ರವಾಗಿ ಘೋಷಿಸಲು ಚಿತ್ರತಂಡ ಅಣಿಗೊಳ್ಳುತ್ತಿದೆ.
ವಿಟಿಲಿಗೋ ಸಮಸ್ಯೆ ಲಕ್ಷಾಂತರ ಜನರನ್ನು ಕಾಡುತ್ತಿದೆ. ಇದಕ್ಕೆ ತುತ್ತಾದವರ ಮಾನಸಿಕ ತೊಳಲಾಟಗಳನ್ನು ಬೇರೆಯವರು ಸಲೀಸಾಗಿ ಅಂದಾಜಿಸೋದು ಕಷ್ಟ. ಅದರ ಸುತ್ತ ಜರುಗುವ ಬೆರಗಿನ, ಸೂಕ್ಷ್ಮ ಕಥನದೊಂದಿಗೆ ಮಹೇಶ್ ಗೌಡ ಚಿತ್ರ ರೂಪಿಸಿದ್ದಾರೆ.
ಪಕ್ಕಾ ಮನೋರಂಜನೆಯ, ಕಮರ್ಶಿಯಲ್ ಧಾಟಿಯಲ್ಲಿ ದೃಶ್ಯೀಕರಿಸಲಾಗಿದೆಯಂತೆ. ಒಟ್ಟಾರೆ ಸಿನಿಮಾದ ಇನ್ನೊಂದಷ್ಟು ಅಚ್ಚರಿಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ. ಅದರ ಜೊತೆ ಜೊತೆಗೇ ಬಿಡುಗಡೆ ದಿನಾಂಕವೂ ನಿಗಧಿಯಾಗಲಿದೆ.