ಕನ್ನಡದಲ್ಲಿ ಗಟ್ಟಿಯಾಗಿ ನೆಲೆಯೂರಲು ಕಾತರ- ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್
ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಅನೂಪ್ ರೂಬೆನ್ಸ್, ಸುಮಧುರ ಸಂಗೀತದ ಮೂಲಕ ದಕ್ಷಿಣ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದು ಇದೀಗ ಕನ್ನಡ ಚಿತ್ರರಂಗದಲ್ಲೂ ವಿಶಿಷ್ಟ ಛಾಪು ಮೂಡಿಸುತ್ತಿದ್ದಾರೆ.

ಅನೂಪ್ ರೂಬೆನ್ಸ್ ಭಾವನಾತ್ಮಕ ಮತ್ತು ಸುಮಧುರ ರಾಗಗಳಿಗೆ ಹೆಸರಾದವರು. ಇವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ‘ಇಷ್ಕ್’, ‘ಪ್ರೇಮ ಕಾವಲಿ’, ‘ಗುಂಡೆ ಜಾರಿ ಗಲ್ಲಂತಯ್ಯಿಂದೆ’, ‘ಮನಂ’, ‘ಗೋಪಾಲ ಗೋಪಾಲ’, ‘ಸೊಗ್ಗಾಡೆ ಚಿನ್ನಿ ನಾಯನಾ’ ಮತ್ತು ’30 ರೋಜುಲ್ಲೋ ಪ್ರೇಮಿಂಚಡಂ ಎಲಾ’ ಅಂತಹ ಚಿತ್ರಗಳು ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಅಚ್ಚೊತ್ತಿವೆ.
ತೆಲುಗಿನ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ಅನೂಪ್ ಹಿಟ್ ಹಾಡುಗಳನ್ನು ನೀಡುತ್ತಾ ಬಂದಿದ್ದಾರೆ. ಪ್ರಮುಖ ಕನ್ನಡ ಚಿತ್ರಗಳ ಬಗ್ಗೆ ನೋಡುತ್ತ ಹೋದರೆ, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ, ಖುಷಿ ಖುಷಿಯಾಗಿ ಈ ಚಿತ್ರದ “ಅರೆ ಅರೆ ಮತ್ತೆ ಹೃದಯ ಹಾಡಿತು” ಹಾಡು ಬಿಡುಗಡೆಯಾದ ಸಮಯದಲ್ಲಿ ದೊಡ್ಡ ಮಟ್ಟದ ಹಿಟ್ ಆಗಿತ್ತು. ಇಂದಿಗೂ ಇದು ಕನ್ನಡದ ಮೆಲೋಡಿ ಹಾಡುಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.
ನಿಖಿಲ್ ಕುಮಾರಸ್ವಾಮಿ ನಟನೆಯ ಸೀತಾರಾಮ ಕಲ್ಯಾಣ ಈ ಚಿತ್ರದ “ನಿನ್ನ ರಾಜ ನಾನು ನನ್ನ ರಾಣಿ ನೀನು” ರೋಮ್ಯಾಂಟಿಕ್ ಹಾಡು ಕರ್ನಾಟಕದಾದ್ಯಂತ ಅಬ್ಬರಿಸಿತ್ತು. ಹಳ್ಳಿ-ಹಳ್ಳಿಗಳಲ್ಲೂ ಈ ಹಾಡು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ರೀತಿ ಗೀತಾ ಚಿತ್ರದ ಮೂಲಕವೂ ಅನೂಪ್ ತಮ್ಮ ಸಂಗೀತದ ವೈವಿಧ್ಯತೆ ಸಾಬೀತುಪಡಿಸಿದ್ದರು.

ನಟ, ನಿರ್ದೇಶಕ ಹಾಗೂ ನಿರ್ಮಾಪಕ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ಸೀತಾ ಪಯಣ. ಈ ಸಿನಿಮಾ ಮೂಡಿಬರುತ್ತಿದೆ. ಸದ್ಯ ಅನೂಪ್ ರೂಬೆನ್ಸ್ ಸಂಗೀತವಿರುವ ‘ಸೀತಾ ಪಯಣ’ ಚಿತ್ರದ ಹಾಡುಗಳು ಕನ್ನಡ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿವೆ.
ಈಗಾಗಲೇ ಬಿಡುಗಡೆಯಾಗಿರುವ “ಯಾವೂರಿಗ್ ಹೊಕ್ಕಿಯೆ ಹುಡುಗಿ” ಮತ್ತು “ಅಸಲಿ ಸಿನಿಮಾ” ಈ ಎರಡೂ ಹಾಡುಗಳು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಇದರ ಬೆನ್ನಲ್ಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗಾಗಿ ಅನೂಪ್ ಸಂಯೋಜಿಸಿರುವ ಮೂರನೇ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಅದರ ಫ್ರೆಶ್ ಸೌಂಡ್ ಮತ್ತು ಮಾಸ್ ಅಪೀಲ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಸಂದರ್ಭಕ್ಕೆ ತಕ್ಕಂತೆ ರಾಗ ಸಂಯೋಜಿಸುವ ಕಲೆ ಹೊಂದಿರುವ ಅನೂಪ್ ರೂಬೆನ್ಸ್, ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ತಮ್ಮ ಯಶಸ್ವಿ ಪಯಣವನ್ನು ಮುಂದುವರಿಸುತ್ತಿದ್ದಾರೆ. ಕಥೆಯ ಭಾವನೆಗೆ ಜೀವ ತುಂಬುವ ಅವರ ಸಂಗೀತ ಶೈಲಿಯು ಮುಂಬರುವ ಚಿತ್ರಗಳ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

