“ತಾಯವ್ವ” ಚಿತ್ರಕ್ಕೆ ಕಿಚ್ಚ ಸುದೀಪ್ ಬೆಂಬಲ: ಹಾಡು ಬಿಡುಗಡೆ

“ತಾಯವ್ವ” ಚಿತ್ರ ಕಿಚ್ಚ ಸುದೀಪ್ ನಟಿಸಿದ್ದ ಮೊದಲ ಚಿತ್ರ. ಈಗ ಅದೇ ಹೆಸರಲ್ಲಿ ಚಿತ್ರ ಮತ್ತೊಮ್ಮೆ “ತಾಯವ್ವ” ಚಿತ್ರ ರೆಡಿಯಾಗಿದೆ. ಆದರೆ ಕಥೆ ಬೇರೆ ಬೇರೆ ಶೀರ್ಷಿಕೆ ಮಾತ್ರ ಒಂದೇ. ಇದೇ ಅಭಿಮಾನದಿಂದ ಕಿಚ್ಚ ಸುದೀಪ್ ಚಿತ್ರದ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ತಾಯವ್ವ ಚಿತ್ರದಲ್ಲಿ ಸುದೀಪ್ ಅವರೊಂದಿಗೆ ಹಿರಿಯ ನಟಿ ಉಮಾಶ್ರೀ ತಾಯವ್ವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ತಾಯವ್ವ ಎಂಬ ಹೆಸರಿನಲ್ಲಿ, ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಈ ಬಾರಿ ತಾಯವ್ವನಾಗಿ ಚಿತ್ರದಲ್ಲಿ ಗೀತಪ್ರಿಯ ಕಾಣಿಸಿಕೊಂಡಿದ್ದಾರೆ
ತಾಯವ್ವ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಅನಂತ ಆರ್ಯನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ತಾಯವ್ವ ಚಿತ್ರದ ಗೀತೆಗಳಿಗೆ ಸ್ವತಃ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ತಾಯವ್ವನಾಗಿ ಅಭಿನಯಿಸಿರುವ, ಗೀತಪ್ರಿಯ ಅವರೇ ಧ್ವನಿಯಾಗಿದ್ದಾರೆ. ಅಪ್ಪಟ ಕನ್ನಡದ ಗ್ರಾಮೀಣ ಸೊಗಡಿನ ಜನಪದ ಗೀತೆಗಳ ಗುಚ್ಚವನ್ನು ತಾಯವ್ವ ಚಿತ್ರದಲ್ಲಿ ಹೊಸರೂಪದಲ್ಲಿ ತೆರೆಮೇಲೆ ತರಲಾಗುತ್ತಿರುವುದು ಮತ್ತೊಂದು ವಿಶೇಷ.
ನಟ ಕಿಚ್ಚ ಸುದೀಪ್ ಮಾತನಾಡಿ ಆಗಷ್ಟೇ ಕಾಲೇಜು ಮುಗಿಸುತ್ತಿರುವ ಸಂದರ್ಭದಲ್ಲಿ ತಾಯವ್ವ ಸಿನೆಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಮೊದಲ ಬಾರಿಗೆ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ಸಿನೆಮಾ ನನಗೆ ಸಾಕಷ್ಟು ವಿಷಯ ಹೇಳಿಕೊಟ್ಟಿತ್ತು. ವೃತ್ತಿ ಜೀವನದಲ್ಲಿ ಸಿನೆಮಾ ಇಂದಿಗೂ ಒಂದು ಸುಮಧುರ ನೆನಪಾಗಿ ಉಳಿದಿದೆ. ಈಗ ತಾಯವ್ವ ಹೆಸರಿನಲ್ಲಿ ಮತ್ತೊಂದು ಸಿನೆಮಾ ತೆರೆಗೆ ಬರುತ್ತಿರುವುದು ಒಳ್ಳೆಯ ವಿಷಯ. ಭಾವನಾತ್ಮಕ ಸೆಳೆತವಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಗೀತಪ್ರಿಯ ಮಾತನಾಡಿ ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನೆಮಾ. ಹೆಣ್ಣುಮಕ್ಕಳನ್ನು ಉಳಿಸಿ, ಬೆಳೆಸಿ ಎಂಬ ಸಂದೇಶ ಇಟ್ಟುಕೊಂಡು ಈ ಸಿನೆಮಾ ಮಾಡಲಾಗಿದೆ. ತಾಯವ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನೆಮಾದಲ್ಲಿ ಒಂದು ಸಂದೇಶವಿದೆ. ಸಿನೆಮಾದಲ್ಲಿದೆ. ಕಿಚ್ಚ ಸುದೀಪ್ ಅವರ ಮೊದಲ ಸಿನೆಮಾದ ಹೆಸರನ್ನೇ ನಮ್ಮ ಸಿನೆಮಾಕ್ಕೆ ಇಟ್ಟುಕೊಂಡು ತೆರೆಗೆ ತರುತ್ತಿದ್ದೇವೆ. ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಆದಷ್ಟು ಬೇಗ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ ಎಂದರು.
ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮ. ಹರೀಶ್, ಮೊದಲ ಬಾರಿಗೆ ಭಾ. ಮ. ಹರೀಶ್ ಆಡಿಯೋ ಹೆಸರಿನಲ್ಲಿ ಹೊಸ ಆಡಿಯೋ ಕಂಪೆನಿ ಪ್ರಾರಂಭಿಸಿದ್ದು, ಈ ಕಂಪೆನಿಯ ಅಡಿಯಲ್ಲಿ ತಾಯವ್ವ ಸಿನೆಮಾದ ಆಡಿಯೋ ಬಿಡುಗಡೆಯಾಗಿದೆ.
ನಿರ್ಮಾಪಕಿ ಪದ್ಮಾವತಿ ಚಂದ್ರಶೇಖರ್, ಕರ್ನಾಟಕ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಐಪ್ಲೆಕ್ಸ್ ಮುಖ್ಯಸ್ಥ ಗಿರೀಶ್, ಶಿಕ್ಷಣ ತಜ್ಞ ನಾಗಪಾಲ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು ಚಿತ್ರಕ್ಕೆ ಶುಭ ಕೋರಿದರು.