ಕೋಳಿಗಳನ್ನು ಕಾದಾಡಿಸಲು ಬಂದ ಮನೋಜ್!

ಕೋಳಿಯ ಜೊತೆ ಖಡಕ್ ಲುಕ್ ಕೊಟ್ಟ ಧರಣಿ. ಧರಣಿ ಮಂಡಲದಲ್ಲಿ ಧಗಧಗ ಎನ್ನಲಿದೆ ಕುಕ್ಕುಟ ಕಾಳಗಯಾವುದೇ ಸಿನಿಮಾದ ಬಗ್ಗೆ ಕುತೂಹಲ ಹುಟ್ಟಿಸೋದು ಅದರ ಫಸ್ಟ್ ಲುಕ್ ಪೋಸ್ಟರ್. ಇಡೀ ಚಿತ್ರ ಹೇಗೆ ಮೂಡಿಬರಬಹುದು ಅನ್ನೋ ಅಂದಾಜು ಸಿಗೋದೇ ಈ ಫಸ್ಟ್ ಲುಕ್ ಮೂಲಕ. ಸದ್ಯ ಧರಣಿ ಚಿತ್ರದ ಮೊಟ್ಟಮೊದಲ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ
ಟಕ್ಕರ್ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆದವರು ಮನೋಜ್. ಸದ್ಯ ಮನೋಜ್ ವಿಭಿನ್ನ ಜಾನರಿನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮನೋಜ್ ಹುಟ್ಟು ಹಬ್ಬದ ಪ್ರಯುಕ್ತ 'ಧರಣಿ' ಫಸ್ಟ್ ಲುಕ್ ಲೋಕಾರ್ಪಣೆಗೊಂಡಿದೆ. " ನನ್ನ ಹಿಂದಿನ ಸಿನಿಮಾದ ಜೊತೆಗೆ ಧರಣಿಯನ್ನು ಹೋಲಿಕೆ ಮಾಡಲೂ ಸಾಧ್ಯವಿಲ್ಲ. ಕೋಳಿ ಪಂದ್ಯದಂತೆಯೇ ಇಲ್ಲಿ ಕೂಡಾ ನೋಡುಗರನ್ನು ರಂಜಿಸುತ್ತಲೇ ಕಾಡುವ ಅಂಶಗಳಿವೆ. ನನ್ನ ಲುಕ್ ಕೂಡಾ ಇಲ್ಲಿ ಬೇರೆಯದ್ದೇ ರೀತಿಯಲ್ಲಿ ನೋಡಬಹುದು. ಇತ್ತೀಚೆಗೆ ಕಟೆಂಟ್ ಇರುವ ಸಿನಿಮಾಗಳನ್ನು ಜನ ಹೆಚ್ಚು ಇಷ್ಟ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಧರಣಿ ಹೊಸ ವಿಚಾರಗಳ ಸುತ್ತ ಆವರಿಸಿಕೊಂಡಿದೆ. ಅದನ್ನು ಕಮರ್ಷಿಯಲ್ ಆಗಿ ರೂಪಿಸುತ್ತಿದ್ದೇವೆ" ಎನ್ನುವುದು ಮನೋಜ್ ಮಾತು.
ಇಲ್ಲಿ ಎಲ್ಲವನ್ನೂ ಹೊಚ್ಚ ಹೊಸದಾಗಿ ಹೇಳುತ್ತಿದ್ದೇವೆ. ಪಕ್ಕಾ ದೇಸೀ ಸೊಗಡಿನ ಆಬ್ಜೆಕ್ಟ್ ಇದಾಗಿದೆ. ಕರ್ನಾಟಕ ಮಾತ್ರವಲ್ಲದೆ ಭಾರತದ ಇತರೆ ರಾಜ್ಯಗಳಲ್ಲೂ ಕೋಳಿ ಪಂದ್ಯ ಬರಿಯ ಮನರಂಜನೆ ಅಲ್ಲದೆ ಅಪಾರ ಪ್ರಮಾಣದ ವಹಿವಾಟು ನಡೆಸುವ ಜೂಜಾಗಿದೆ. ಇದರ ಸುತ್ತ ಧರಣಿ ಕಥಾ ಹಂದರ ತೆರೆದುಕೊಂಡಿದೆ. ಇದಲ್ಲದೇ ಈ ವರೆಗೆ ಎಲ್ಲೂ ಹೇಳಿರದ ಒಂದಷ್ಟು ವಿಚಾರಗಳೂ ಇಲ್ಲಿ ದೃಶ್ಯರೂಪದಲ್ಲಿ ಅನಾವರಣಗೊಳ್ಳಲಿದೆ ಎಂದು ನಿರ್ದೇಶಕ ಸುಧೀರ್ ಶಾನುಭೋಗ್ ವಿವರ ನೀಡಿದ್ದಾರೆ.

ಈ ಹಿಂದೆ ವಿನಯ್ ರಾಜ್ ಕುಮಾರ್ ನಟಿಸಿದ್ದ ಅನಂತು ವರ್ಸಸ್ ನುಸ್ರತ್ ಚಿತ್ರವನ್ನು ನಿರ್ದೇಶಿದ್ದವರು ಸುಧೀರ್ ಶಾನುಭೋಗ್. ರಾಷ್ಟ್ರ ಪ್ರಶಸ್ತಿ ಪಡೆದ ‘ಮದಿಪು’ ಚಿತ್ರದ ಭಾಗವಾಗಿದ್ದ, ಹೊಸತನದಿಂದ ಮೂಡಿಬಂದಿದ್ದ ‘ಅಳಿದು ಉಳಿದವರು’ ಸಿನಿಮಾಗೆ ಕಥೆ ಬರೆದಿದ್ದವರು ಇದೇ ಸುಧೀರ್ ಶಾನುಭೋಗ್. ಇವರದ್ದೇ ನಿರ್ದೇಶನದ, ರಾಮರಾಮರೇ ಖ್ಯಾತಿಯ ನಟರಾಜ್ ಅಭಿನಯದ ‘ಮಾರೀಚ’ ಬಿಡುಗಡೆಗೆ ತಯಾರಾಗಿದೆ. ಭಿನ್ನ ಚಿಂತನೆಯ, ಕ್ರಿಯಾಶೀಲ ನಿರ್ದೇಶಕ ಅನ್ನಿಸಿಕೊಂಡಿರುವ ಸುಧೀರ್ ಈ ಸಲ ಔಟ್ ಅಂಡ್ ಔಟ್ ಆಕ್ಷನ್ ಸಬ್ಜೆಕ್ಟನ್ನು ಕೈಗೆತ್ತಿಕೊಂಡಿರೋದು ವಿಶೇಷ.
ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಅವರು ನಿರ್ಮಿಸುತ್ತಿರುವ ಮೂರನೇ ಚಿತ್ರ ಇದಾಗಿದೆ.ಧರಣಿಗೆ ಶಶಾಂಕ್ ಶೇಷಗಿರಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ, ಅರುಣೋದಯ ಕಥೆ , ಶ್ರೀನಿಧಿ ಡಿ ಎಸ್ ಸಂಭಾಷಣೆ ಜೊತೆಗೆ ಡಾ.ವಿ.ನಾಗೇಂದ್ರ ಪ್ರಸಾದ್ ಹಾಗೂ ಶಿವಕುಮಾರ್ ಮಾವಲಿ ಸಾಹಿತ್ಯ ಇದೆ.ಧರಣಿಯ ಕುರಿತ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.