Maryade Prashne film released on November 22

ಮರ್ಯಾದೆ ಪ್ರಶ್ನೆ ನವಂಬರ್ 22 ರಂದು ಬಿಡುಗಡೆ - CineNewsKannada.com

ಮರ್ಯಾದೆ ಪ್ರಶ್ನೆ ನವಂಬರ್ 22 ರಂದು ಬಿಡುಗಡೆ

ಶಂಕರ್ ನಾಗ್ ಜನ್ಮದಿನ ‘ಚಾಲಕರ ದಿನಾಚರಣೆ’ ಎಂದೇ ಪ್ರಸಿದ್ಧಿ. ಬಸವೇಶ್ವರ ನಗರದ ಸುಮಾರು 200ಕ್ಕೂ ಹೆಚ್ಚು ಆಟೋ ಚಾಲಕರು ‘ಮರ್ಯಾದೆ ಪ್ರಶ್ನೆ’ ಚಿತ್ರತಂಡದೊಂದಿಗೆ ಚಾಲಕರ ದಿನಾಚರಣೆ ಆಚರಿಸಿದರು. ಮರ್ಯಾದೆ ಪ್ರಶ್ನೆ ಚಿತ್ರತಂಡದ ಜೊತೆಗೆ ನಮ್ಮ ಯಾತ್ರಿ ಆಪಿನ ರಾಜೀವ್ ಕೂಡ ಭಾಗವಹಿಸಿದ್ದರು.

“ನಮ್ಮ ಯಾತ್ರಿ ಕನ್ನಡದ ಚಾಲಕರಿಗೆ ಸಹಾಯ ಮಾಡಲು ಶುರುವಾದ ಆಪ್. ಕನ್ನಡಿಗರ ಜತೆ ನಿಲ್ಲುವುದು ನಮ್ಮ ನಂಬರ್ ಒನ್ ಉದ್ದೇಶ. ಅದೇ ಉದ್ದೇಶದಿಂದ ಚಾಲಕರ ಪಾತ್ರವಿರುವ ‘ಮರ್ಯಾದೆ ಪ್ರಶ್ನೆ’ ಸಿನಿಮಾ ತಂಡದ ಜತೆ ನಿಂತಿದ್ದೇವೆ” ಎಂದರು.

ಆರ್ ಜೆ ಪ್ರದೀಪಾ ಅವರು ‘ಸಕ್ಕತ್ ಸ್ಟುಡಿಯೋ’ವನ್ನು ಶಂಕರ್ ನಾಗ್ ಅವರ ಜನ್ಮದಿನದಂದು 2017ರಲ್ಲಿ ಆರಂಭಿಸಿದರು. ಎಂಟು ವರ್ಷಗಳ ಹಿಂದೆ ಶಂಕರ್ ನಾಗ್ ಹಾಡುಗಳ ಅಕಾಪೆಲ್ಲದೊಂದಿಗೆ ಶುರುವಾದ ಸಂಸ್ಥೆ ತಮ್ಮದೇ ಒಂದು ಸಿನಿಮಾ ನಿರ್ಮಿಸುವ ಮಟ್ಟಕ್ಕೆ ಬೆಳೆದಿದೆ. ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ‘ಮರ್ಯಾದೆ ಪ್ರಶ್ನೆ’ ಸಕ್ಕತ್ ಸ್ಟುಡಿಯೋದ ಮೊದಲ ಚಿತ್ರ.

ಚಿತ್ರದಲ್ಲಿ ‘ಡ್ರೈವರ್’ ಪಾತ್ರ ಮಾಡಿರುವ ಪೂರ್ಣಚಂದ್ರ ಮೈಸೂರು ಅವರಿಗೆ ಖಾಕಿ ಕೋಟ್ ಹಾಕುವ ಮೂಲಕ ಆಟೋ ಚಾಲಕರು ಸಾಂಕೇತಿಕವಾಗಿ ಪೂರ್ಣ ಅವರನ್ನು ಚಾಲಕರ ಬಳಗಕ್ಕೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಮರ್ಯಾದೆ ಪ್ರಶ್ನೆ ಚಿತ್ರದ ಆಟೋ ಸ್ಟಿಕ್ಕರ್ಸ್ ಹಾಕುವುದನ್ನು ಶುರುಮಾಡಲಾಯಿತು.

ಮಾತನಾಡಿದ ಪೂರ್ಣಚಂದ್ರ ಮೈಸೂರು ಅವರು “ಈ ಸಿನಿಮಾದಲ್ಲಿ ನಾನು ಚಾಲಕನ ಪಾತ್ರ ಮಾಡಿದ್ದೇನೆ. ಚಾಲಕರ ಕಷ್ಟಸುಖಗಳನ್ನು ತೋರಿಸುವ ಚಂದದ ಪಾತ್ರ. ‘ಮರ್ಯಾದೆ ಪ್ರಶ್ನೆ’ ಮಿಡಲ್ ಕ್ಲಾಸ್ ಜೀವನ ತೋರಿಸುವ ಚಿತ್ರ. ಚಾಲಕರು ಸೇರಿದಂತೆ ಎಲ್ಲ ದುಡಿಯುವ ವರ್ಗಕ್ಕೂ ಈ ಸಿನಿಮಾ ಇಷ್ಟವಾಗುವ ನಂಬಿಕೆಯಿದೆ” ಎಂದರು.

‘ಮರ್ಯಾದೆ ಪ್ರಶ್ನೆ’ ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡಲಿಗಿ, ಶ್ರವಣ್, ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿವೆ. ಎಲ್ಲ ಹಾಡುಗಳಿಗೆ ಅರ್ಜುನ್ ರಾಮು ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ಸಕುಟುಂಬ ಸಮೇತ, ಗೌಳಿ ಮತ್ತು ಚಾರ್ಲಿ ಸಿನಿಮಾಗೆ ಕೆಲಸಮಾಡಿರುವ ಸಂದೀಪ್ ವೆಲ್ಲುರಿ ಈ ಸಿನಿಮಾದ ಛಾಯಾಗ್ರಾಹಕರು. ಇದೇ ತಿಂಗಳ 12ಕ್ಕೆ ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ಸಜ್ಜಾಗಿದೆ.

ಈಗಾಗಲೇ ಲೂಸ್ ಕನೆಕ್ಷನ್, ಹನಿಮೂನ್ ವೆಬ್ ಸೀರೀಸ್ಗಳನ್ನು ನಿರ್ಮಿಸಿ ಸದ್ದು ಮಾಡಿದ್ದ ಆರ್‍ಜೆ ಪ್ರದೀಪಾ ಅವರ ‘ಸಕ್ಕತ್ ಸ್ಟೂಡಿಯೋ’ ಈ ಚಿತ್ರವನ್ನು ನಿರ್ಮಿಸಿದೆ. ಪ್ರದೀಪಾ ಅವರೇ ಬರೆದ ಕಥೆಗೆ ನಾಗರಾಜ ಸೋಮಯಾಜಿ ಅವರ ಚಿತ್ರಕತೆ,ಸಂಭಾಷಣೆ ನಿರ್ದೇಶನವಿದೆ.’ಮರ್ಯಾದೆ ಪ್ರಶ್ನೆ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin