ಠಾಣೆ ಹಾಡಿನಿಂದ ಜನಮನ ಗೆದ್ದ ಸಂಗೀತ ನಿರ್ದೇಶಕಿ ಮಾನಸ ಹೊಳ್ಳ
ಎರಡೂವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿದ್ದ ಗುರುತಿಸಿಕೊಂಡಿದ್ದ ಮಾನಸ ಹೊಳ್ಳ ಇತ್ತೀಚೆಗೆ ಸಂಗೀತ ನಿರ್ದೇಶಕಿಯಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಸಂಗೀತ ನೀಡಿರುವ ಠಾಣೆ ಚಿತ್ರದ “ಬಾಳಿನಲಿ ಭರವಸೆಯ ಬೆಳಕನು ನೀ ಹೂಡು..” ಎಂಬ ಹಾಡಿಗೆ ಇಡೀ ಕರುನಾಡೇ ಮನಸೋತಿದೆ.
ಎಲ್ಲೆಡೆ ವೈರಲ್ ಆಗಿರುವ,ಅದರಲ್ಲೂ ಪುಟ್ಟ ಮಕ್ಕಳೇ ದನಿಯಾಗಿರುವ ಈ ಹಾಡಿಗೆ ಗೆಳತಿ ರೆಮೋ ಸಾಹಿತ್ಯ ಬರೆದಿದ್ದಾರೆ. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕೂಡ ಈ ಹಾಡನ್ನು ಮೆಚ್ಚಿ ಹಾಡಿದ ಮಕ್ಕಳು ಹಾಗೂ ಸಂಗೀತ ನಿರ್ದೇಶಕಿಗೆ ಅಭಿನಂದಿಸಿದ್ದಾರೆ.
ಹಿರಿಯ ಕಲಾವಿದ ಶಂಖನಾದ ಅರವಿಂದ್ ಪುತ್ರಿಯಾದ ಮಾನಸ ಗಾಯಕಿ, ಸಂಗೀತ ನಿರ್ದೇಶಕಿ, ಕೀಬೋರ್ಡ್, ಪ್ರೋಗ್ರಾಮರ್ ಮತ್ತು ಸೌಂಡ್ ಇಂಜಿನಿಯರ್ ಆಗಿಯೂ ಸೈ ಎನಿಸಿಕೊಂಡಿದದ್ದು, ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. “ಠಾಣೆ” ಹಾಡಿನ ಯಶಸ್ಸು ಮಾನಸ ಅವರಿಗೆ ಬೆರಳೆಣಿಕೆಯಷ್ಟಿರುವ ಮಹಿಳಾ ಸಂಗೀತ ನಿರ್ದೇಶಕಿಯರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದೆ.

99, ಅಧ್ಯಕ್ಷ, ಶಿವಲಿಂಗ, ರವಿಕೆ ಪ್ರಸಂಗ, ರಜನಿಕಾಂತ, ಧಮಾಕ, ಸೂಪರ್ ರಂಗ, ಡಾರ್ಲಿಂಗ್ ಸೇರಿದಂತೆ ಹಲವಾರು ಚಿತ್ರಗಳ 500ಕ್ಕೂ ಹೆಚ್ಚು ಗೀತೆಗಳು, ಭಕ್ತಿಗೀತೆಗಳೂ ಸೇರಿದಂತೆ 1500 ಹಾಡುಗಳಿಗೆ ಧ್ವನಿಯಾಗಿರುವ. ಮಾನಸ ಹೊಳ್ಖ ಅವರು ಸಂಗೀತದಲ್ಲೂ ಹಿಂದೆ ಬಿದ್ದಿಲ್ಲ.
6 ಟು 6, ಕನಸು ಮಾರಾಟಕ್ಕಿದೆ, ಕೆಂಪು ದೀಪ, ಮನಸಾಗಿದೆ. ಮಸಣದ ಹೂವು, ಬಯಲು ಸೀಮೆ ಮತ್ತು ಚಿರತೆ ಬಂತು ಚಿರತೆ ಸೇರಿದಂತೆ ಹಲವಾರು ಚಿತ್ರಗಳಿಗೆ ಸಂಗೀತ ನೀಡಿರುವ ಮಾನಸ ಹೊಳ್ಳ ಅವರಿಗೆ, ಕನಸು ಮಾರಾಟಕ್ಕಿದೆ ಚಿತ್ರದ ಸಂಗೀತಕ್ಕೆ ಗೋವಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕಿ ಪ್ರಶಸ್ತಿ ಲಭಿಸಿದೆ. ಜೊತೆಗೆ ಮಸಣದ ಹೂವು ಚಿತ್ರಕ್ಕೆ ಬೆಂಗಳೂರು ಚಿತ್ರೋತ್ಸವದಲ್ಲಿ ವಿಶೇಷ ಜೂರಿ ಪ್ರಶಸ್ತಿ ಲಭಿಸಿದೆ.
ಇದರ ಜೊತೆಗೆ ವನಜ, ಗಂಡ ಗುಂಡಿ, ಹನಿ ಟ್ರ್ಯಾಪ್, ಪಾರ್ಸೆಲ್, ಚಿರಂಜೀವಿ ನವೀನದಂಥ ವೆಬ್ ಸೀರೀಸ್ ಹಾಗೂ ವಿವಿಧ ಧಾರಾವಾಹಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ.

