ಸಿಂಪಲ್ ಕ್ವೀನ್” ಶ್ವೇತಾ ಶ್ರೀವಾಸ್ತವ್ ಈಗ ಲೇಖಕಿ: “ರೆಕ್ಕೆ ಇದ್ದರೆ ಸಾಕೆ” ಕೃತಿ ಬಿಡುಗಡೆ

2006 ರಲ್ಲಿ “ಮುಖಾ ಮುಖಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಶ್ವೇತಾ ಶ್ರೀವಾಸ್ತವ್, “ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ”, ” ಕಿರೂಗೂರಿನ ಗಯ್ಯಾಳಿಗಳು”, “ರಾಘವೇಂದ್ರ ಸ್ಟೋರ್ಸ್”, ” ಹೋಪ್” ಮುಂತಾದ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದರು. ನಟಿಯಾಗಿ ಪರಿಚಿತರಾಗಿರುವ ಶ್ವೇತಾ ಶ್ರೀವಾಸ್ತವ್ ಈಗ ಲೇಖಕಿಯಾಗಿದ್ದಾರೆ.

ಎರಡು ದಶಕಗಳ ತಮ್ಮ ಸಿನಿಮಾ ಜರ್ನಿಯ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ. ಪುಸ್ತಕಕ್ಕೆ “ರೆಕ್ಕೆ ಇದ್ದರೆ ಸಾಕೆ” ಎಂದು ಹೆಸರಿಟ್ಟಿದ್ದಾರೆ. ಇಂಗ್ಲಿಷ್ ನಲ್ಲೂ ((Against the Grain)) ಈ ಪುಸ್ತಕ ಲಭ್ಯವಿದೆ
“ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ಸಮುದಾಯದ ಪ್ರಗತಿ ಅಳೆಯಬೇಕು” ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಮಾತಿನ ಮೂಲಕ ತಮ್ಮ ಮಾತು ಪ್ರಾರಂಭಿಸಿದ ನಟಿ ಶ್ವೇತಾ ಶ್ರೀವಾಸ್ತವ್, ಅಂಬೇಡ್ಕರ್ ಹೇಳಿದ ಮಾತು ಎಲ್ಲಾ ರಂಗಕ್ಕೂ ಅನ್ವಯಿಸುತ್ತದೆ., ಹೆಣ್ಣುಮಕ್ಕಳು ಮದುವೆ ಆದ ನಂತರ ಚಿತ್ರದಲ್ಲಿ ನಾಯಕಿಯಾಗಿ ನಟಿಸಬಾರದು ಎಂಬುದು ಎರಡು ದಶಕಗಳ ಹಿಂದೆ ನಾನು ನಟಿಸಲು ಆರಂಭಿಸಿದಾಗಲೂ ಇತ್ತು. ಈಗಲೂ ಇದೆ. ಅದಕ್ಕೆ ಕಾರಣ ಏನು ಹೆಣ್ಣು ಸ್ವಾವಲಂಬಿ ಅಲ್ಲವೇ ಆಕೆ ಯಾವುದೇ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎಂದರೆ, ಆಕೆ ಗಂಡ ಅಥವಾ ತಂದೆಯ ಹೆಸರಿನ ಜೊತೆಗೆ ಗುರುತಿಸಿಕೊಳ್ಳುತ್ತಾಳೆ. ಈ ಪರಿಸ್ಥಿತಿ ಎಲ್ಲಾ ಕಾಲದಲ್ಲೂ ಪ್ರಸ್ತುತ. ಹಾಗಂತ ನಮ್ಮ ಸಾಧನೆಗೆ ಮನೆಯವರ ಸಹಕಾರ ಬೇಡ ಅಂತ ನಾನು ಹೇಳುತ್ತಿಲ್ಲ. ವಾಸ್ತವದ ಬಗ್ಗೆ ಮಾತನಾಡುತ್ತೇನೆ ಅಷ್ಟೆ ಎಂದರು

ಸರಿಸುಮಾರು ಇಪ್ಪತ್ತು ವರ್ಷಗಳ ನನ್ನ ಸಿನಿಬದುಕನ್ನು ಸಾಧನೆ ಅಂತ ಕರೆದುಕೊಳ್ಳುತ್ತೇನೆ. ಸಮಯದಲ್ಲಿ ಎದರಿಸಿದ ಸವಾಲುಗಳು, ಸನ್ನಿವೇಶಗಳು ಹಾಗೂ ಸಂತೋಷದ ವಿಚಾರಗಳು ಎಲ್ಲವನ್ನು ಪುಸ್ತಕದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಇದನ್ನು ಬಯೋಪಿಕ್ ಅಂತಲೂ ಕರೆಯಬಹುದು. ಈ ಪುಸ್ತಕವನ್ನು ಮೊದಲು ಇಂಗ್ಲಿಷ್ ನಲ್ಲಿ ಬರೆದಿದ್ದೆ. ಆನಂತರ ತಾಯಿಭಾಷೆಯ ಬಗ್ಗೆ ನನಗೆ ಅಪಾರ ಪ್ರೀತಿ ಹಾಗೂ ಸೆಂಟಿಮೆಂಟ್. ಹೀಗಾಗಿ ಕನ್ನಡದಲ್ಲೂ ಬರೆಯೋಣ ಅನಿಸಿತು. ಪ್ರಕಾಶಕರ ಬಳಿ ಹೇಳಿದೆ ಅವರು ಒಪ್ಪಿಕೊಂಡರು. ಲೇಖಕಿಯಾಗಿ ಇದು ಮೊದಲ ಹೆಜ್ಜೆ ಎಂದು ಮಾಹಿತಿ ಹಂಚಿಕೊಂಡರು

ನನ್ನ ಮನೆಯವರು, ಸ್ನೇಹಿತರು ಎಲ್ಲಾ ನಿನ್ನ ಪುಸ್ತಕ ನೀನೆ ಬಿಡುಗಡೆ ಮಾಡುತ್ತೀಯಾ ಅತಿಥಿಗಳನ್ನು ಕರೆಯುವುದಿಲ್ಲವಾ ಎಂದರು. ಇಲ್ಲ. ಎಲ್ಲರೂ ಮಾಡುವ ರೀತಿ ಮಾಡುವುದು ಬೇಡ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಮುಂದೊಂದು ದಿನ ಅದ್ದೂರಿ ಸಮಾರಂಭವನ್ನು ಆಯೋಜಿಸುತ್ತೇನೆ. ಭಾರತ ಸೇರಿದಂತೆ ಹದಿನೈದು ದೇಶಗಳಲ್ಲಿ ನನ್ನ ಪುಸ್ತಕ (ಆನ್ ಲೈನ್) ಬಿಡುಗಡೆಯಾಗಿದೆ. ಅಷ್ಟು ದೇಶಗಳಲ್ಲೂ ಪುಸ್ತಕ ದೊರೆಯಲಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ, ವಿಶೇಷವಾಗಿ ನನ್ನ ಪತಿ ಅಮಿತ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು.