The stage is set for the multi-talented Chandan S Nag's Bharatanatyam "Ranga Pravesha".

ಬಹುಮುಖ ಪ್ರತಿಭೆ ಚಂದನ ಎಸ್ ನಾಗ್ ಭರತನಾಟ್ಯ ರಂಗಪ್ರವೇಶಕ್ಕೆ ವೇದಿಕೆ ಸಜ್ಜು - CineNewsKannada.com

ಬಹುಮುಖ ಪ್ರತಿಭೆ ಚಂದನ ಎಸ್ ನಾಗ್ ಭರತನಾಟ್ಯ ರಂಗಪ್ರವೇಶಕ್ಕೆ ವೇದಿಕೆ ಸಜ್ಜು

ಕಲಾ ಕುಟುಂಬದಲ್ಲಿ ಅರಳಿದ ಪ್ರತಿಭೆ ಚಂದನ ಎಸ್. ನಾಗ್. ಹಿರಿಯ ನಿರ್ದೇಶಕ ಬಿ.ಸುರೇಶ ಮತ್ತು ನಿರ್ಮಾಪಕಿ ಶೈಲಾಜ ನಾಗ್ ಅವರ ಪುತ್ರಿ. ನಟಿ, ನೃತ್ಯಗಾರ್ತಿ, ಬರಹಗಾರ್ತಿ ಮತ್ತು ನಿರ್ದೇಶಕಿಯಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಿ ಸೈ ಎನಿಸಿಕೊಂಡ ಬಹುಮುಖ ಪ್ರತಿಭೆ.

ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಿಂದ ದೃಶ್ಯ ಸಂವಹನದಲ್ಲಿ ಪದವಿ ಪಡೆದಿರುವ ಚಂದನ ಎಸ್ ನಾಗ್, ಭರತನಾಟ್ಯ ಪ್ರವೀಣೆ ಅಲ್ಲದೆ ನಟಿ, ಬಹಗಾರ್ತಿ ಮತ್ತು ನಿರ್ದೇಶಕಿಯಾಗಿ ಗಮನ ಸೆಳೆದಿದ್ದಾರೆ .ಚಂದನ ಅವರನ್ನು ಅಜ್ಜಿ ಕಮಲಾ ರಾಧಾಕೃಷ್ಣ , ಹಿರಿಯ ಪತ್ರಕರ್ತೆ ಮತ್ತು ಬರಹಗಾರ್ತಿಯಾಗಿರುವ ಮತ್ತೊಬ್ಬ ಅಜ್ಜಿ ಡಾ, ವಿಜಯಾ ಮತ್ತು ಪೋಷಕರಾದ ಬಿ.ಸುರೇಶ ಮತ್ತು ಶೈಲಜಾ ನಾಗ್ ಅವರ ಪ್ರೋತ್ಸಾಹದಿಂದ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ

ಚಂದನ ಅವರ ಭರತನಾಟ್ಯ ರಂಗಪ್ರವೇಶ ಏಪ್ರಿಲ್ 20ರಂದು ಸಂಜೆ 5.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಎದುರು ಇರುವ ಎಡಿಎ ರಂಗಮಂದಿರದಲ್ಲಿ ನಡೆಯಲಿದ್ದು ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಅಪರೂಪದ ಕ್ಷಣಕ್ಕೆ ಪ್ರದರ್ಶನ ನೀಡಲು ಚಂದನ ಎಸ್ ನಾಗ್ ಕಾತುರರಾಗಿದ್ದಾರೆ.

Chandana S Nag

ರಂಗಪ್ರವೇಶ,ಭರತನಾಟ್ಯದಲ್ಲಿ ಸಾಂಪ್ರದಾಯಿಕ ಚೊಚ್ಚಲ ಪ್ರವೇಶಕ್ಕಿಂತ ವಿಶೇಷವಾಗಿದೆ. ಬ್ರಹ್ಮಾಂಡ ರೂಪಿಸುವ ಧಾತುರೂಪದ ಶಕ್ತಿಗಳಾದ ಪಂಚಭೂತಗಳ ಮೂವಿಷಯಾಧಾರಿತ ಪ್ರಸ್ತುತ ಪಡಿಸಲು ಚಂದನ ಸಿದ್ದವಾಗಿದ್ಧಾರೆ. ಭೂಮಿ, ನೀರು,ಬೆಂಕಿ, ಗಾಳಿ ಮತ್ತು ಆಕಾಶ ಸಾಂಪ್ರದಾಯಿಕ ಮಾರ್ಗದ ಪ್ರಸ್ತುತಿ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಆಯಾಮಗಳ ಮೂಲಕ ವಿಶೇಷವಾಗಿ ಸಂಯೋಜಿಸಲಾದ ಸಂಗೀತ ಮತ್ತು ನೃತ್ಯ ಸಂಯೋಜನೆಯಾಗಿದೆ.

ರಂಗಭೂಮಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಚಂದನ, ಸಂಚಯ, ಸಮುದಾಯ ಮತ್ತು ಬೆಂಗಳೂರು ಪ್ಲೇಯರ್ಸ್ ನಂತಹ ತಂಡಗಳೊಂದಿಗೆ ಕೆಲಸ ಮಾಡಿದ್ದಾರೆ “ಕಿಂಟ್ಸುಗಿ” ನಾಟಕಕ್ಕೆ 2024ರಲ್ಲಿ ಬೆಂಗಳೂರು ಉತ್ಸವದಲ್ಲಿ ಅತ್ಯುತ್ತಮ ಮೂಲ ನಾಟಕ ಪ್ರಶಸ್ತಿಗೆ ಭಾಜನವಾಗಿದೆ. ನಾಟಕದ ಜೊತೆ ಜೊತೆಗೆ ಚಂದನ ನಟಿಸಿದ ಮೊದಲಾನೆ ಅಧ್ಯಾಯ, ಬ್ಲಡಿ ಡೊಮಿನೊ, ಸದ್ಗತಿ, ಅನ್‍ವಾಂಟೆಡ್ ಕಿಡ್ ಮತ್ತು ಪಂಜರದ ಗಿಳಿಯಂತಹ ಕಿರುಚಿತ್ರಗಳು ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿವೆ. 2021 ರಲ್ಲಿ ಪ್ರಗುಣಿ ಕಿರುಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಅಪ್ಪ ನಿರ್ದೇಶಕ,ಅಮ್ಮ ನಿರ್ಮಾಪಕಿಯೂ ಆಗಿರುವ ಹಿನ್ನೆಲೆಯಲ್ಲಿ ತಮ್ಮದೇ ಪ್ರೊಡಕ್ಷನ್‍ನಲ್ಲಿ ನಿರ್ಮಾಣವಾದ ಯಜಮಾನ ಮತ್ತು ಕ್ರಾಂತಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ನಮ್ಮನೆ, ಸಂತೆಯೋಳಗೊಂದು ಸೇತುವೆ, ಉಭಯ ಮತ್ತು ಪಂಜರದ ಗಿಳಿ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. 2021ರ ಡೆಕ್ಕನ್ ಹೆರಾಲ್ಡ್ ಫ್ಲ್ಯಾಶ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಎರಡನೇ ಸ್ಥಾನ ಪಡೆದಿವೆ.

Chandana S Nag

14 ವರ್ಷಗಳ ಕಾಲ ಗುರು ಬಿ. ಭಾನುಮತಿ ಅವರಿಂದ ಭರತನಾಟ್ಯ ಕಲಿಯಲು ಪ್ರಾರಂಭಿಸಿದ ಚಂದನ ಕಳೆದ ಐದು ವರ್ಷಗಳಿಂದ ಗುರು ಸ್ನೇಹ ಕಪ್ಪಣ್ಣ ಅವರಿಂದ ತರಬೇತಿ ಪಡೆದಿದ್ದಾರೆ. ಹಂಪಿ ಉತ್ಸವ, ಹೊಸೂರು ನಾಟ್ಯಾಂಜಲಿ, ಶೃಂಗೇರಿ ಮಠ ಮತ್ತು ಪುಣೆಯ ರಾಷ್ಟ್ರೀಯ ಸಾಮರಸ್ಯ ಉತ್ಸವ ಸೇರಿದಂತೆ ಪ್ರತಿಷ್ಠಿತ ಸ್ಥಳಗಳಲ್ಲಿ ಪ್ರದರ್ಶನ ನೀಡಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ

Chandana S Nag

ಕರ್ನಾಟಕ ಶಿಕ್ಷಣ ಮಂಡಳಿಯ ಹಿರಿಯ ಮಟ್ಟದ ಪರೀಕ್ಷೆ, ಅಖಿಲ ಗಂಧರ್ವ ಮಂಡಳಿಯ ವಿಶಾರದ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯನ್ನು ತನ್ನದಾಗಿಸಿಕೊಂಡಿದ್ದಾರೆ. 2024 ರಿಂದ, ಚಂದನ, ರಾಜ್ಯಾದ್ಯಂತ ನೃತ್ಯದ ಮೂಲಕ ಸಾಂವಿಧಾನಿಕ ಮೌಲ್ಯಗಳನ್ನು ಉತ್ತೇಜಿಸುವ ಭರತನಾಟ್ಯಗಳ ಪ್ರದರ್ಶನ ನೀಡುತ್ತಿದ್ದಾರೆ.ಚಂದನ ಅವರ ಭರತನಾಟ್ಯ ರಂಗಪ್ರವೇಶ ಇದೇ 20 ರಂದು ಎಡಿಎ ರಂಗಮಂದಿರದಲ್ಲಿ ನಡೆಯಲಿದ್ದು ಚಂದನ ಅವರಷ್ಟೇ ಅವರ ಪೋಷಕರೂ ಕೂಡ ಈ ಕ್ಷಣಕ್ಕಾಗಿ ಎದುರು ನೋಡುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin