ಪ್ರತಿಭಾನ್ವಿತ ನಟಿ ಅದ್ವಿತಿ ಶೆಟ್ಟಿ ಅಭಿನಯದ `ಬ್ರಹ್ಮ ಕಮಲ’ ಚಿತ್ರದ ಟ್ರೈಲರ್ ಬಿಡುಗಡೆ
“ದಾರಿ ಯಾವುದಯ್ಯ ವೈಕುಂಠಕೆ” ಚಿತ್ರದ ಮೂಲಕ ನಿರ್ದೇಶಕರಾಗಿ ಮನ್ನಣೆ ಗಳಿಸಿಕೊಂಡ ನಿರ್ದೇಶಕ ಸಿದ್ದು ಪೂರ್ಣಚಂದ್ರ. ಮತ್ತೊಂದು ಸೂಕ್ಷ್ಮ ಕಥನಕ್ಕೆ ದೃಶ್ಯರೂಪ ನೀಡಿದ್ದಾರೆ. ನಡುವಿನ ಕೌಟುಂಬಿಕ ವ್ಯವಸ್ಥೆಯೊಳಗಿನ ಹೆಣ್ಣೊಬ್ಬಳ ಒಳತೋಟಿಗೆ ಕಣ್ಣಾದ ಆ ಕಥನವೀಗ “ಬ್ರಹ್ಮಕಮಲ” ಶೀರ್ಷಿಕೆಯೊಂದಿಗೆ ಬಿಡುಗಡೆಗೆ ಅಣಿಗೊಂಡಿದೆ. ಟ್ರೈಲರ್ ಬಿಡುಗಡೆಯಾಗಿ ಗಮನ ಸೆಳೆದಿದೆ

ಸಾಮಾನ್ಯವಾಗಿ ಜನಪ್ರಿಯ ಅಲೆಗಳ ಸುತ್ತಲೇ ಸಿನಿಮಾ ನಿರ್ಮಾತೃಗಳ, ಪ್ರೇಕ್ಷಕರ ಚಿತ್ತ ನೆಟ್ಟಿರುತ್ತದೆ. ಆದರೆ, ಅದರ ಜೊತೆಜೊತೆಗೆ ಹೊಸಾ ಅಲೋಚನೆಯ, ಭಿನ್ನ ಕಥನಗಳು ಹುರಿಗೊಳ್ಳದಿದ್ದರೆ ಸಿನಿಮಾ ರಂಗ ನಿಂತ ನೀರಾಗುವ ಅಪಾಯವಿದೆ. ಅಂಥಾ ಅಪಾಯ ದಾಟಿಕೊಳ್ಳುವ ವಾಹಕವಾಗಿ ಬ್ರಹ್ಮಕಮಲ ಚಿತ್ರದ ಟ್ರೈಲರ್ ಇದೀಗ ಚರ್ಚೆ ಹುಟ್ಟು ಹಾಕಿದೆ.
ಹೆಣ್ಣು ಸಂಸಾರದ ಕಣ್ಣು ಎಂಬುದು ಪ್ರಸಿದ್ಧ ನಾಣ್ಣುಡಿ. ಆದರೆ, ಕಣ್ಣಲ್ಲಿ ಜಿನುಗುವ ಸುಪ್ತ ನೋವುಗಳನ್ನು ಗ್ರಹಿಸುವ ವ್ಯವಧಾನ ಈ ಸಮಾಜಕ್ಕಿದ್ದಂತಿಲ್ಲ. ಅಂಥಾದ್ದೊಂದು ಸೂಕ್ಷ್ಮ ಕಥನದೊಂದಿಗೆ ಈ ಸಿನಿಮಾವನ್ನು ಸಿದ್ದು ಪೂರ್ಣಚಂದ್ರ ರೂಪಿಸಿದ್ದಾರೆ.

ಸೂಕ್ಷ್ಮ ಅಂಶಗಳು ಸದರಿ ಟ್ರೈಲರ್ ಮೂಲಕ ಪ್ರೇಕ್ಷಕರನ್ನು ತಲುಪಿಕೊಂಡಿವೆ.ಕೌಟುಂಬಿಕ ವ್ಯವಸ್ಥೆಯಲ್ಲಿ ಘಟಿಸುವ ಒಂದು ರಾತ್ರಿಯ ಕಥೆ ಬ್ರಹ್ಮಕಮಲವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬ್ರಹ್ಮ ಕಮಲಕ್ಕೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಮೂರು ಮೂರು ಪ್ರದರ್ಶನಗಳನ್ನು ಕಂಡಿದೆ. ಇಂಥಾ ಚಿತ್ರವೀಗ ಟ್ರೈಲರ್ ಮೂಲಕ ಸದ್ದು ಮಾಡಲಾರಂಭಿಸಿದೆ.
ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಅದ್ವಿತಿ ಶೆಟ್ಟಿ, ಋತು ಚೈತ್ರ, ಲೋಕೇಂದ್ರ ಸೂರ್ಯ, ಬಾಲ ರಾಜ್ವಾಡಿ, ಮಮತಾ ರಾಹುತ್, ಪ್ರಮೀಳಾ ಸುಬ್ರಮಣ್ಯ ಮುಂತಾದವರ ತಾರಾಗಣ ಚಿತ್ರಕ್ಕಿದೆ


