Review : “ಎಕ್ಕ” : ಸಾಮಾನ್ಯ ಹುಡುಗನ ಬದುಕಿನ ಅನಿರೀಕ್ಷಿತ ಘಟನೆಗಳ ರೋಚಕ ಕಥನ
ಚಿತ್ರ; ಎಕ್ಕ
ನಿರ್ದೇಶನ: ರೋಹಿತ್ ಪದಕಿ
ತಾರಾಗಣ; ಯುವ ರಾಜ್ಕುಮಾರ್, ಸಂಜನಾ ಆನಂದ್, ಸಂಪದ ಹುಲಿವಾನ, ಶೃತಿ, ಅತುಲ್ ಕುಲಕರ್ಣಿ,ಆದಿತ್ಯ,ಅರುಣ್ ಸಾಗರ್, ಹರಿಣಿ ಶ್ರೀಕಾಂತ್, ಅರ್ಚನಾ ಕೊಟ್ಟಿಗೆ, ಡಾ.ಸೂರಿ ಮತ್ತಿತರರು
ರೇಟಿಂಗ್ ** 4/5
“ಕಂಡಕ್ಟರ್ ಆಗಿದ್ದವರು ಸೂಪರ್ ಸ್ಟಾರ್ ಆಗಿಲ್ವಾ . ಟೀ ಮಾರುತ್ತಿದ್ದವರು ಪ್ರಧಾನಿ ಆಗಿಲ್ವೆ ನಾನ್ ಊರು ಬಿಟ್ಟು ಏಲ್ಲೂ ಹೋಗಲ್ಲ..”‘ ಎಂದು ತಾಯಿಗೆ ಭರವಸೆ ನೀಡಿದ ಯುವಕನೊಬ್ಬನ ಬದುಕಿನಲ್ಲಿ ನಡೆದ ಅನಿರೀಕ್ಷಿತ ತಿರುವಿನ ಕಥನ ಕುತೂಹಲದ ಚಿತ್ರ ” ಎಕ್ಕ”.
“ಯುವ” ಚಿತ್ರದ ಬಳಿಕ ನಟ ಯುವ ರಾಜ್ ಕುಮಾರ್ ಅಭಿನಯದ ಎರಡನೇ ಚಿತ್ರ. ಮೊದಲ ಚಿತ್ರಕ್ಕಿಂತಲೂ ಪಕ್ವ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಚಿತ್ರದ ಕೆಲವು ಸನ್ನಿವೇಶಗಳು, ಹಾಡು, ನೃತ್ಯ, ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿದಂತಾಗುತ್ತದೆ. ಅದರಲ್ಲಿಯೂ ವಂಶಿ ಮತ್ತು ಜಾಕಿ ಚಿತ್ರಗಳು ಕಣ್ಣಮುಂದೆ ಬರುತ್ತವೆ. ಅಷ್ಟರ ಮಟ್ಟಿಗೆ ಪುನೀತ್ ರಾಜ್ಕುಮಾರ್ ಅವರ ಛಾಯೆ ಎದ್ದು ಕಾಣಲಿದೆ, ಈ ಮೂಲಕÀ ಜೂನಿಯರ್ ಪವರ್ ಸ್ಟಾರ್ ಭರವಸೆ ಮೂಡಿಸಿದ್ದಾರೆ
ನಿರ್ದೇಶಕ ರೋಹಿತ್ ಪದಕಿ ತಾಯಿ=ಮಗನ ಸೆಂಟಿಮೆಂಟ್, ಆಕ್ಷನ್, ಪ್ರೀತಿ, ಪ್ರೇಮ, ರೌಡಿಸಂ, ಭೂ ಕಬಳಿಕೆಯ ಮಾಫಿಯಾ ಸೇರಿದಂತೆ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾವನ್ನು ಜನರ ಮುಂದಿಟ್ಟಿದ್ದಾರೆ.
ಹಳ್ಳಿಯಲ್ಲಿ ತಾಯಿ ರತ್ನ (ಶೃತಿ) ಜೊತೆ ಬದುಕು ಸಾಗಿಸುವ ಮುತ್ತು (ಯುವ ರಾಜ್ ಕುಮಾರ್) ಸ್ನೇಹಿತನಿಗೆ ಸಾಲ ಕೊಡಿಸಿ ಊರು ಬಿಡುವ ಸಂದಿಗ್ದ ಪರಿಸ್ಥಿತಿಗೆ ಸಿಲುಕುತ್ತಾನೆ, ಮನೆ ಬಿಡಿಸಿಕೊಳ್ಳಲು ನಗರ ಸೇರುವ ಮುತ್ತು ಸ್ನೇಹಿತರ ಮನೆಯಲ್ಲಿ ಜೀವನ, ಅದೇ ವಠಾರದ ನಂದು (ಸಂಜನಾ ಆನಂದ್) ಮೇಲೆ ಮೊದಲ ನೋಟದಲ್ಲಿಯೇ ಪ್ರೀತಿಯ ಸೆಳೆತ. ಆತ ಅಣ್ಣನೋ ಸುಫಾರಿ ಕಿಲ್ಲರ್, ಅಂತವನ್ನು ಒಲಿಸಿಕೊಳ್ಳುವ ಮುತ್ತು ಆತನ ತಂಗಿಯ ಮನಸ್ಸನ್ನು ಸುಲಭವಾಗಿ ಗೆದ್ದು ಬಿಡುತ್ತಾನೆ.ಈ ನಡುವೆ ನಡೆದ ಅನಿರೀಕ್ಷಿತ ಘಟನೆ ಅಲ್ಲಿಂದ ಆತನನ್ನು ಊರು ಬಿಡುವಂತೆ ಮಾಡುತ್ತೆ.
ಇತ್ತ ಪ್ರೀತಿಸಿದ ಹುಡುಗಿ ಕೈತಪ್ಪಿ ಹೋಗುವ ಸ್ಥಿತಿ, ಮತ್ತೊಬ್ಬ ಹುಡುಗಿ ಮಲ್ಲಿಕಾ (ಸಂಪದ) ಎಂಟ್ರಿ, ಆಕೆ ಯಾಕೆ ಈತನ ಜೀವನದಲ್ಲಿ ಪ್ರವೇಶ ಮಾಡಿದಳು, ಇಷ್ಟಕ್ಕೂ ಮುತ್ತು ಸಿಟಿಯಿಂದ ಮತ್ತೊಂದು ಸಿಟಿಗೆ ಊರು ಬಿಡುವ ಪ್ರಮೇಯ ಬಂದಿದ್ದಾರೂ ಯಾಕೆ, ಎನ್ನುವುದನ್ನು ಸಿನಿಮಾ ಪ್ರೇಕ್ಷಕರನ್ನು ತುದಿಗಾಲ ಮೇಲೆ ಕೂರಿಸಿದೆ.
ಸಾಮಾನ್ಯ ಹುಡುಗನೊಬ್ಬ ರೌಡಿಗಳನ್ನೇ ಎದುರು ಹಾಕಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾದರೂ ಯಾಕೆ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಿದರೆ ಚೆನ್ನ.
ನಿರ್ದೇಶಕ ರೋಹಿತ್ ಪದಕಿ ಪಕ್ಕಾ ಕಮರ್ಷಿಯಲ್ ಸಿನಿಮಾವನ್ನು ಜನರಿಗೆ ಹಿಡಿಸುವ ರೀತಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಯುವ ರಾಜ್ ಕುಮಾರ್ ಅವರನ್ನು ಬೇರೊಂದು ರೀತಿಯಲ್ಲಿ ತೋರಿಸಿದ್ದಾರೆ.
ಯುವ ರಾಜ್ಕುಮಾರ್ ಮೊದಲ ಚಿತ್ರಕ್ಕಿಂತಲೂ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಾರೆ, ನಟನೆ, ಪೈಟುಗಳಲ್ಲಿ ಪುನೀತ್ ರಾಜ್ ಕುಮಾರ್ ರೀತಿಯೇ ಕಾಣುತ್ತಾರೆ, ಇದು ಅಭಿಮಾನಿಗಳ ಸಂತಸ ಹಿಮ್ಮಡಿಗೊಳಿಸಿದೆ.
ಕಲಾವಿದರಾದ ಸಂಜನಾ ಆನಂದ್, ಸಂಪದ ಹುಲಿವಾನ, ಶೃತಿ, ಅತುಲ್ ಕುಲಕರ್ಣಿ, ಆದಿತ್ಯ, ಅರುಣ್ ಸಾಗರ್, ಹರಿಣಿ ಶ್ರೀಕಾಂತ್, ಅರ್ಚನಾ ಕೊಟ್ಟಿಗೆ, ಡಾ.ಸೂರಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಜೊತೆಗೆ ಕನ್ನಡದ ಮೂರು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಪಿ ಆರ್ ಕೆ, ಜಯಣ್ಣ ಫಿಲ್ಮ್ಂ ಹಾಗು ಕೆಆರ್ಜಿ ಸಂಸ್ಥೆ ಜೊತೆಯಾಗಿ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ಈ ರೀತಿಯ ಮತ್ತಷ್ಟು ಚಿತ್ರಗಳ ನಿರ್ಮಾಣಕ್ಕೆ ನಾಂದಿ ಹಾಡಿದೆ.
ಸತ್ಯ ಹೆಗಡೆ ಕ್ಯಾಮರಾ, ಚರಣ್ ರಾಜ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

