“ಕಿನ್ನರಿ” ಯಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ತನಕ ನಟ ಪವನ್ ನಡೆದು ಬಂದ ಹಾದಿ

ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ತಾಜಾ ಉದಾಹರಣೆ “ಪುಟ್ಟಕ್ಕನ ಮಕ್ಕಳು” ಧಾರಾವಾಹಿಯ ನಟ ಪವನ್ ಕುಮಾರ್. ಪವನ್ ಕುಮಾರ್. ಮೃದು ಸ್ವಭಾವ ಮುರುಳಿ ಮೇಷ್ಟ್ರು ಪಾತ್ರ ಮಾಡಿದ ಕಲಾವಿದ ಈತ. ಸ್ಟಾಕ್ ಬ್ರೇಕರ್ ಆಗಿದ್ದ ಪವನ್ ನಾಯಕನಾಗಿ ಗಮನ ಸೆಳೆಯ ಕನಸು ಕಂಡಿದ್ದಾರೆ.

- ಬಣ್ಣದ ಜಗತ್ತಿನ ಆಕರ್ಷಣೆ ಹೇಗಾಯಿತು
ಸ್ಟಾಕ್ ಬ್ರೋಕರ್ ಕೆಲಸ ಮಾಡುತ್ತಿದ್ದ ಕಚೇರಿ ಬಳಿ ಇದ್ದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ “ಟೆಂಟ್” ಸಿನಿಮಾ ತರಬೇತಿ ಶಾಲೆ ಇದ್ದುದರಿಂದ ನಾನು ಬಣ್ಣದ ಜಗತ್ತಿನ ಕಡೆ ವಾಲಬೇಕು ಎನ್ನುವ ಆಕರ್ಷಣೆಯಾಯಿತು.

- ತರಬೇತಿ ಪಡೆದಿದ್ದೀರಾ ಹೇಗೆ. ಮೊದಲ ಅವಕಾಶ ಯಾವುದು
ಹೌದು. ವಾರಾಂತ್ಯದ ನಾಲ್ಕು ತಿಂಗಳ ತರಬೇತಿ ಪಡೆದು ಕಲಾ ಬದುಕಿನತ್ತ ಗಮನ ಹರಿಸಿದೆ. ಆರಂಭದ ಹೆಜ್ಜೆ ಎನ್ನುವಂತೆ “ಶನಿ” ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಆ ನಂತರ ನಟ ಕಿರಣ್ ರಾಜ್ “ಕಿನ್ನರಿ ” ಧಾರಾವಾಹಿಯಿಂದ ಹೊರಬಂದ ನಂತರ ಧಾರಾವಾಹಿಗೆ ಭೂಮಿ ಶೆಟ್ಟಿ ಎದುರು ನಾಯಕನಾಗಿ ಕಾಣಿಸಿಕೊಂಡೆ ಹೀಗೆ ಜರ್ನಿ ಆರಂಭವಾಯಿತು

- ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಅವಕಾಶ ಸಿಕ್ಕ ಬಗೆ
ಜಾಹೀರಾತು, ಹೊಸ ಪ್ರಾಜೆಕ್ಟ್ ಎನ್ನುವ ಚರ್ಚೆಯಲ್ಲಿದ್ದಾಗ ಸಿಕ್ಕ ಅವಕಾಶವೇ “ ಆರೂರು ಜಗದೀಶ್ ನಿರ್ಮಾಣ ಮತ್ತು ನಿರ್ದೇಶನದ ” ಪುಟ್ಟಕ್ಕನ ಮಕ್ಕಳು” ಧಾರಾವಾಹಿ, ಸದ್ಯಕ್ಕೆ ಈ ಧಾರಾವಾಹಿಯ ಕಡಗೆ ಹೆಚ್ಚು ಗಮನ ಹರಿಸಿದ್ದೇನೆ.
ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್ ಅವರು ಬೇರೊಂದು ಪ್ರಾಜೆಕ್ಟ್ ವಿಷಯಕ್ಕೆ ನನ್ನ ಜೊತೆ ಚರ್ಚೆ ನಡೆಸಿದ್ದರು.ಅದು ಆರಂಭವಾಗುವುದು ವಿಳಂಬವಾದ ಹಿನ್ನೆಲೆಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮೃಧು ಸ್ವಭಾವದ ಪಾತ್ರವೊಂದಿದೆ ಮಾಡುತ್ತೀರಾ ಎಂದು ಕೇಳಿದರು. ನಾನು ಒಪ್ಪಿಕೊಂಡೆ. ಹೀಗೆ ನನಗೆ ಧಾರಾವಾಹಿಯಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತು. ಇದುವರೆಗೂ 450 ಎಪಿಸೋಡ್ ದಾಟಿದೆ 50 ರಿಂದ 60 ಎಪಿಸೋಡ್ ಹೊರತು ಪಡಿಸಿದರೆ ಬಹುತೇಕ ಎಪಿಸೋಡ್ನಲ್ಲಿ ನಾನಿದ್ದೇನೆ.

- ನಿಮ್ಮ ಪಾತ್ರ ಏನು.
ಮುರುಳಿ ಮೇಷ್ಟ್ರು ಎನ್ನುವ ಪಾತ್ರ ನನ್ನದು. ಸತ್ಯವಾದಿ. ಸತ್ಯ ಎಲ್ಲಿ ಇರುತ್ತದೋ ಆ ಕಡೆ. ವರದಕ್ಷಿಣೆ ವಿರೋದಿ. ಇದೇ ಕಾರಣಕ್ಕೆ ಅಪ್ಪ ಅಮ್ಮನನ್ನು ವಿರೋಧಿಸಿ ಪ್ರೀತಿಸಿದ ಹುಡುಗಿಯನ್ನು ಕೈಹಿಡಿಯುವ ಪಾತ್ರ ಹಾಗಂತ. ಅಪ್ಪ- ಅಮ್ಮನ ಮೇಲೆ ಗೌರವ ಇಲ್ಲ ಅಂತಲ್ಲ. ಅವರನ್ನು ಪ್ರೀತಿಯಿಂದ ಕಾಣುವ ಪ್ರೀತಿಸಿದ ಹುಡುಗಿಯ ಮನ ನೋಯಿಸದ ಪಾತ್ರ.
- ನಟಿ ಉಮಾಶ್ರೀ ಅವರ ಜೊತೆ ನಟಿಸುತ್ತಿದ್ದೀರಾ ಅನುಭವ ಹೇಗಿತ್ತು
“ಪುಟ್ಟಕ್ಕನ ಮಕ್ಕಳು” ಧಾರಾವಾಹಿಯಲ್ಲಿ ನಟಿಸುತ್ತಿರುವ ಹಿರಿಯ ನಟಿ ಉಮಾಶ್ರೀ ನಟನೆಯಲ್ಲಿ ವಿಶ್ವವಿದ್ಯಾಲಯವಿದ್ದಂತೆ ಅವರ ಬಳಿ ಕಲಿಯುವುದು ಸಾಕಷ್ಟಿದೆ. ಸಣ್ಣ ಪುಟ್ಟ ವಿಷಯಗಳನ್ನು ಹೇಳಿಕೊಡುತ್ತಾರೆ. ಅವರ ಜೊತೆ ಒಂದು ಸಾವಿರ ಎಪಿಸೋಡ್ ಮಾಡಿದರೂ ಅಂತಹ ” ಅಮ್ಮ”ನಿಂದ ಕಲಿಯುವುದು ಸಾಕಷ್ಟಿದೆ. ಅವರ ಜೊತೆ ನಟನೆಗೆ ಅವಕಾಶ ಸಿಕ್ಕಿರುವುದಕ್ಕೆ ನಾನೇ ಅದೃಷ್ಠವಂತ.ಜೊತೆಗೆ ನಿರ್ಮಾಪಕ, ನಿರ್ದೇಶಕರೂ ಆಗಿರುವ ಆರೂರು ಜಗದೀಶ್ ಸೇರಿದಂತೆ ಧಾರಾವಾಹಿಯ ಎಲ್ಲಾ ಕಲಾವಿದರ ಸಹಕಾರದಿಂದ ಕಲಿಕೆಗೆ ಮತ್ತಷ್ಟು ಸಹಕಾರಿಯಾಗಿದೆ.

“ ಸಿನಿಮಾದಲ್ಲಿಯೂ ಅವಕಾಶ ಸಿಕ್ಕಿದೆಯಾ
.
ಸ್ಟಾ ಬ್ರೆರಿ ಎನ್ನುವುದು ಚಿತ್ರದ ಹೆಸರು. ಶೃತಿ ಹರಿಹರನ್ ನಾಯಕಿ. ವಿಭಿನ್ನ ಚಿತ್ರ. ಹೆಣ್ಣು ತನ್ನ ಜೀವನದಲ್ಲಿ ಮುಂದ ಸಾಗಲು ಯಾವ ಹಾದಿ ತುಳಿಯುತ್ತಾಳೆ ಎನ್ನುವ ಕಥಾ ಹಂದರವನ್ನು ಒಳಗೊಂಡಿದೆ.ಒಳ್ಳೆಯ ಕಥೆ. ಅದೇ ರೀತಿ ಗಂಡು ತನ್ನ ಆಸೆ ತೀರಿಸಿಕೊಳ್ಳಲು ಏನೆಲ್ಲಾ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ. ನನ್ನದು ನೆಗೆಟಿವ್ ಶೇಡ್ ಆದರೂ ಕೆಟ್ಟ ಪಾತ್ರ ಅಲ್ಲ. ಬೆಂಗಳೂರು.ಮಂಗಳೂರು ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ವೇಶ್ಯಾವಾಟಿಕೆ ಮತ್ತು ಅದರ ಸುತ್ತ ನಡೆಯುವ ಕಥೆಯ ತಿರುಳನ್ನು ಚಿತ್ರ ಹೊಂದಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಚಿತ್ರ ಬರುವ ಸಾಧ್ಯತೆಗಳಿವೆ .ರಕ್ಷಿತ್ ಶೆಟ್ಟಿ ಅವರ ಪರಂವಃ ನಿರ್ಮಾಣ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ.

- ಆಲ್ಬಂನಲ್ಲಿ ಮಾಡಿದ್ದೀರಂತೆ ಹೌದಾ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಸಂಜನಾ ಬುರ್ಲಿ ಅವರೊಂದಿಗೆ ಆಲ್ಬಂ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದೇನೆ. ಈ ಹಾಡನ್ನು ಡಾ.ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ
- ಬಣ್ಣದ ಬದುಕಿನಲ್ಲಿ ಮುಂದುವರೆಯುವ ಆಲೋಚನೆ ಇದೆಯಾ
ಖಂಡಿತಾ ಇದೆ. ಬಣ್ಣದ ಬದುಕಿನಲ್ಲಿ ಮುಂದುವರಿಯುವ ಆಸೆ ಇದೆ, ಇದರ ಜೊತೆಗೆ ನಾನು ಕಲಿತಿರುವ ಹಣಕಾಸಿನ ವಿಷಯದ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶವೂ ಇದೆ.