ಡಿಸೆಂಬರ್ 14 ರಿಂದ “ಸರಿಗಮಪ” ಮತ್ತೆ ಆರಂಭ: ಗಾಯಕ ರಾಜೇಶ್ ಕೃಷ್ಣನ್ ಮರಳಿ ಸೇರ್ಪಡೆ
ಕನ್ನಡ ಕಿರುತೆರೆ ಇತಿಹಾಸದಲ್ಲಿ ಅನೇಕ ಹೊಸ ಮೈಲುಗಲ್ಲು ಸ್ಥಾಪಿಸಿ ಸಾವಿರಾರು ಪ್ರತಿಭೆಗಳನ್ನು ನಾಡಿಗೆ ನೀಡಿದ “ ಜೀ ಕನ್ನಡ “ ಇದೀಗ ಮತ್ತೆ “ಸರಿಗಮಪ” ಶೋ ಮೂಲಕ ಇನ್ನಷ್ಟು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದೆ.
ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದರೆ ಅದು ಸರಿಗಮಪ. ಜೀû ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ’ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ.
ಈಗಾಗಲೇ ಸರಿಗಮಪ ಶೋ ಕನ್ನಡ ಚಿತ್ರರಂಗಕ್ಕೆ ಸಂಜಿತ್ ಹೆಗ್ಡೆ, ಪೃಥ್ವಿಭಟ್ ಮತ್ತು ಜಸ್ಕರಣ್ ಸಿಂಗ್, ಐಶ್ವರ್ಯ ರಂಗರಾಜನ್, ಆಶಾಭಟ್, ಹನುಮಂತು, ದಿಯಾ ಹೆಗ್ಡೆ, ಶ್ರೀನಿಧಿಶಾಸ್ತ್ರೀ, ಚೆನ್ನಪ್ಪ, ಸುನೀಲ್ ಗುಜಗೊಂಡ, ಸುಹಾನಾ,ರಜತ್ ಹೆಗ್ಡೆ,ಹರ್ಷ, ದರ್ಶನ್, ಕಂಬದ ರಂಗಯ್ಯ, ಇಂಪನಾ ಜಯರಾಜ್, ಜ್ಞಾನಗುರುರಾಜ್, ಸುಪ್ರೀತ್, ನಿಹಾಲ್, ಅಶ್ವಿನ್ ಶರ್ಮ ರಂತಹ ಪ್ರತಿಭಾವಂತ ಗಾಯಕರನ್ನ ಕೊಡುಗೆಯಾಗಿ ನೀಡಿದೆ.
ಈ ಸೀಸನ್ನಲ್ಲಿ 6 ವರುಷದಿಂದ 60 ವರುಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಿಸಬಹುದಾಗಿದ್ದು ಸ್ಪರ್ಧೆಯ ಮತ್ತಷ್ಟು ಆಸಕ್ತಿಕರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ಬಾರಿ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಜೊತೆ ರಾಜೇಶ್ ಕೃಷ್ಣನ್ ಮತ್ತೆ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿರುವುದು ಈ ಆವೃತ್ತಿಯ ಮತ್ತೊಂದು ಹೆಗ್ಗಳಿಕೆ. ಈ ಮೂಲಕ ಮತ್ತೊಮ್ಮೆ ಕುತೂಹಲ ಮೂಡಿಸಿದೆ.
ಕನ್ನಡ ನಾಡಿನ ಪ್ರತಿಭೆಯ ಗಣಿ,ಸ್ಪೂರ್ತಿಯ ಸೆಲೆ,ಮಾತಿನ ಮೂಲಕ ಮೋಡಿ ಮಾಡುವ ಕಲೆ ಕರಗತ ಮಾಡಿಕೊಂಡ ಖ್ಯಾತ ನಿರೂಪಕಿ ಅನುಶ್ರೀ ಈ ಬಾರಿ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದು ಸ್ಪರ್ಧಿಗಳ ಜೊತೆ ತರಲೆ ತುಂಟಾಟ, ಮೋಜು ಮಸ್ತಿ ಕಟ್ಟಿಟ್ಟ ಬುತ್ತಿ.
ಈ ಶೋನಲ್ಲಿ ಸ್ಪರ್ಧಿಗಳ ನಡುವೆ ಕೇವಲ ಪೈಪೋಟಿ ಮಾತ್ರವಿರದೇ ಅವರ ಸ್ಪೂರ್ತಿದಾಯಕ ಕಥೆಗಳು ಕೂಡ ನಿಮನ್ನು ಮತ್ತಷ್ಟು ಪ್ರೇರೇಪಿಸಲಿದೆ. ಕರ್ನಾಟಕದ ಮತ್ತು ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಬಾರಿ ವೀಕ್ಷಕರು ಜೀûಕನ್ನಡ ‘ಸರಿಗಮಪ’ ಇನ್ಸ್ಟಾಗ್ರಾಂನ ಅಧಿಕೃತ ಪೇಜ್ನಲ್ಲಿ ಪೋಸ್ಟ್ ಮಾಡುವ ಆಡಿಷನ್ ವೀಡಿಯೋಗಳನ್ನು ಲೈಕ್ ಮಾಡುವ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಆಯ್ಕೆಮಾಡಿದ್ದಾರೆ ಮತ್ತು ಅತೀ ಹೆಚ್ಚು ಲೈಕ್ ಗಳಿಸಿರುವ ಸ್ಪರ್ಧಿಗಳು ಮೆಗಾ ಆಡಿಷನ್ಗೆ ಬಡ್ತಿ ಪಡೆದಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಹಲವಾರು ಹಿಟ್ ಗಾಯಕರನ್ನು ನೀಡಿರುವ ಈ ‘ಸರಿಗಮಪ’ ಸಿಂಗಿಂಗ್ ರಿಯಾಲಿಟಿ ಶೋ ಮತ್ತಷ್ಟು ಹೊಸತನದೊಂದಿಗೆ ನಿಮ್ಮನ್ನು ಮನರಂಜಿಸಲು ಇದೇ ಡಿಸೆಂಬರ್ 14 ರಿಂದ 7:30ಕ್ಕೆ ನಿಮ್ಮ ಮುಂದೆ ಬರುತ್ತಿದೆ.