Valavaara Movie Review: ಗ್ರಾಮೀಣ ಸೊಗಡಿನಲ್ಲಿ ಮೂಡಿಬಂದ ಮನಸ್ಸು ತಟ್ಟವ ಕಥನ “ವಲವಾರ”
ಚಿತ್ರ: ವಲವಾರ
ನಿರ್ದೇಶನ: ಸುತನ್ ಗೌಡ
ತಾರಾಗಣ: ಮಾ.ವೇದಿಕ್ ಕೌಶಲ್, ಮಾ.ಶಯನ್, ಮಾಲತೇಶ್, ಹರ್ಷಿತಾ ಗೌಡ ಮತ್ತು ಅಭಯ್ ಮುಖ್ಯ ಸೇರಿದಂತೆ ಮತ್ತಿತರು
ರೇಟಿಂಗ್: **** 4/5
“ನೆಮ್ದಿಯಾಗಿ ಇರಬೇಕು ಅಂದ್ರೆ.. ನೀನ್ ಸಾಯಬೇಕು.. ಇಲ್ಲ ನಾನ್ ಸಾಯಬೇಕು. ಎಂತೆಂಥೊರಿಗೇ ದೊಡ್ಡ ರೋಗ ಬರುತ್ತದೆ ನಿನಗೆ ಬರಲಿಲ್ಲ…”
ಮಗನ್ನು ಅತಿಯಾಗಿ ಪ್ರೀತಿಸಿದ ಮತ್ತು ತಂದೆಯ ದೌರ್ಜನ್ಯದಿಂದ ಸದಾ ತಡೆಯುತ್ತ ಒಂದಿಲ್ಲೊಂದು ನೆಪದಲ್ಲಿ ಮಗನನ್ನು ಬಚಾವ್ ಮಾಡುತ್ತಿದ್ದ ತಾಯಿಯ ಮಾತು ಕೇಳಿ ಕುಂಡೇಸಿಗೆ ಆಕಾಶ ಕಳಚಿ ಬಿದ್ದಂತೆ ಆಗುತ್ತದೆ.
ಇನ್ನು ಬದುಕಿದ್ದ ವ್ಯರ್ಥ ಎಂದು ಭಾವಿಸಿ ಮನೆಯಿಂದ ಓಡ್ತಾನೆ. ಸಾಯುವುದೇ ಅವನ ಮುಂದಿರುವ ಗುರಿ,,ಇಂತಹ ಸಮಯದಲ್ಲಿ ಏನೆಲ್ಲಾ ಆಗುತ್ತದೆ. ಇಷ್ಟಕ್ಕೂ ಮಗನನ್ನು ತಾಯಿ ಅದ್ಯಾಕೆ ಅಷ್ಟು ಕಟುವಾದ ಶಬ್ದಗಳಲ್ಲಿ ಬೈದು ಬಿಟ್ಟರು. ಅದು ಮಗನ ಹುಟ್ಟುಹಬ್ಬದ ದಿನ ಕಾಡಿ ಬೇಡಿ ಕೇಕ್ ತಂದು ಹುಟ್ಟು ಹಬ್ಬ ಆಚರಿಸಿದ ದಿನ. ಕೌಟಂಬಿಕ ಹಿನ್ನೆಲೆ, ಅದರ ಹಿಂದಿನ ಘಟನೆ ಏನು ಎನ್ನುವುದನ್ನು ಈ ವಾರ ತೆರೆಗೆ ಬಂದಿರುವ “ವಲವಾರ” ಚಿತ್ರದಲ್ಲಿಯೇ ನೋಡಬೇಕು.
ನೆಲಮೂಲದ ಕಥೆಗಳು ಸಿನಿಮಾ ರೂಪ ಪಡೆದು ಆಗಾಗ ತೆರೆಯ ಮೇಲೆ ಬರುತ್ತಿವೆ, ಅಂತಹ ಚಿತ್ರಗಳು ಗ್ರಾಮೀಣ ಬದುಕು, ಜೀವನ ಸೇರಿದಂತೆ ಸೊಗಡನ್ನು ಬಿಂಬಿಸುತ್ತವೆ. ಈ ಕಾರಣಕ್ಕೆ ಚಿತ್ರಗಳ ಜನರ ಮನಸ್ಸಿನಲ್ಲಿ ಅಚ್ಚೊತ್ತಿ ಬಿಡುತ್ತವೆ. ಅಂತಹ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ “ವಲವಾರ.
ನಿರ್ದೇಶಕ ಸುತನ್ ಗೌಡ, ಪಶ್ಚಿಮ ಘಟ್ಟದ ಸೆರಗಿನ ಗ್ರಾಮವೊಂದರ ಬಡ ಮದ್ಯಮ ವರ್ಗದ ಕುಟುಂಬದ ಕಥೆಯನ್ನು ಚಿತ್ರರೂಪಕ್ಕೆ ತಂದಿದ್ದಾರೆ. ಚಿತ್ರ ನೋಡುತ್ತಿದ್ದರೆ ಚಿತ್ರದೊಳಕ್ಕೆ ಕರೆದುಕೊಂಡು ಹೋಗಿಬಿಡುತ್ತದೆ, ನಮ್ಮ ಸುತ್ತ ಮುತ್ತಲಲ್ಲಿ ನಡೆಯುವ ಘಟನೆಯೆನೋ ಅನ್ನಿಸಿ ಬಿಡುತ್ತದೆ ಅಷ್ಟು ನೈಜತೆಗೆ ಹತ್ತಿರವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ಬಡ ರೈ ಅಪ್ಪ( ಮಾಲತೇಶ್) ಮಾಡಿದ ಆಸ್ತಿ ನೊಂದಾಯಿಸಿಕೊಳ್ಳಲು ಒದ್ದಾಡುತ್ತಿರವ ಅದಕ್ಕಾಗಿ ಕಟ್ಟಿದ ಮನೆ ಅರ್ಧ ಆಗಿದ್ದರೂ ಅದನ್ನು ಪೂರ್ಣಗೊಳಿಸಲು ಆಗದವ. ದೊಡ್ಡ ಮಗ ಕುಂಡೇಸಿ (ಮಾಸ್ಟರ್ ವೇದಿಕ್ ಕೌಶಲ್) ಗಿಂತ ಚಿಕ್ಕ ಮಗ ಕುಸುಂಡಿ ( ಮಾಸ್ಟರ್ ಶಯನ್) ಕಂಡರೆ ಎಲ್ಲಿಲ್ಲದ ಪ್ರೀತಿ, ದೊಡ್ಡಮಗನನ್ನು ಕಂಡರೆ ತಾಯಿ ( ಹರ್ಷಿತಾ ಗೌಡ) ಗೆ ಪ್ರೀತಿ. ಇಂತಹ ಕುಟುಂಬದಲ್ಲಿ ತಮ್ಮನ ಕಿತಾಪತಿ ಅಣ್ಣನ ಪೀಕಲಾಟ, ಮನೆಯಲ್ಲಿ ಪ್ರೀತಿಯಿಂದ ಸಾಕಿದ ಗೌರ – ಹಸು ಕಾಣೆಯಾದಾಗ ನಡೆಯುವ ಘಟನೆ ಚಿತ್ರದ ಕಥಾವಸ್ತು
ಇದರ ಜೊತೆಗೆ ಹಳ್ಳಿಯಲ್ಲಿನ ಹುಡುಗ-ಹುಡುಗಿಯ ಪ್ರೀತಿ, ಕುಟುಂಬದ ಒಡನಾಟ, ತಾಕಲಾಟ, ಪೀಕಲಾಟ, ಹೆತ್ತ ತಾಯಿಯ ವೇದನೆ ಸೇರಿದಂತೆ ಎಲ್ಲವೂ ನೈಜತೆಯಿಂದ ಚಿತ್ರ ಮೂಡಿಬಂದಿದೆ.
ಕುಂಡೇಸಿ ಮಾತ್ರದಲ್ಲಿ ಮಾಸ್ಟರ್ : ಮಾ.ವೇದಿಕ್ ಕೌಶಲ್ ಮನೋಜ್ಞ ಅಭಿನಯ ನೀಡಿದ್ದಾರೆ. ಅವರ ನಟನೆಯ ಮಕ್ಕಳ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಬರಬೇಕು ಅನ್ನುವಷ್ಟರ ಮಟ್ಟಿಗೆ ಸಹಜವಾಗಿ ನಟಿಸಿದ್ದಾರೆ, ಇನ್ನುಳಿದರೆ ತಮ್ಮನಾಗಿ ಮಾ.ಶಯನ್ ಕಿತಾಪತಿ, ತಂದೆ ಪಾತ್ರದಲ್ಲಿ ಮಾಲತೇಶ್ ತಾಯಿ ಪಾತ್ರದಲ್ಲಿ ಹರ್ಷಿತಾ ಗೌಡ ನಟನೆ ಗಮನ ಸೆಳೆದಿದೆ. ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿರುವ ಅಭಯ್ ಕೂಡ ಅವರ ನಟನೆ ಚಿತ್ರಕ್ಕೆ ಪೂರಕವಾಗಿದೆ.
ಗ್ರಾಮೀಣ ಪ್ರದೇಶದ ಸೊಗಡು, ಪರಿಸರ, ಊರಿನಲ್ಲಿನಡೆಯುವ ಘಟನೆಗಳು ಚಿತ್ರವನ್ನು ಕಡೆ ತನಕ ನೋಡಿಸಿಕೊಂಡು ಹೋಗುವ ಶಕ್ತಿ ಸಾಮಥ್ರ್ಯವಿದೆ. ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಮೂಡಿ ಬಂದ ಉತ್ತಮ ಮಕ್ಕಳ ಚಿತ್ರ ಎಂದರೆ ಅಡ್ಡಿಯಾಗಲಾರದು
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

