ಹಿರಿತೆರೆಗೆ ಬಡ್ತಿ ಪಡೆದ ನಟಿ ಗೌತಮಿ ಜಾಧವ್: ರಿಷಿ ಜೊತೆ ಮಂಗಳಾಪುರಂನಲ್ಲಿ ನಾಯಕಿ
ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟಿ ಗೌತಮಿ ಜಾಧವ್, ಕಿರುತೆರೆಯಲ್ಲಿ ತಮ್ಮ ನಟನೆಯಿಂದ ಮೋಡಿ ಮಾಡಿದವರು. ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಜನಪ್ರಿಯತೆ ಹೆಚ್ಚಿಸಿಕೊಂಡವರು.ಈಗ ನಟ ರಿಷಿ ಜೊತೆ “ಮಂಗಳಾಪುರಂ” ಚಿತ್ರದಲ್ಲಿ ನಾಯಕಿಯಾಗಿ ಹಿರಿತೆರೆಗೂ ಭಡ್ತಿ ಪಡೆದಿದ್ದಾರೆ.

ಆಪರೇಷನ್ ಅಲಮೇಲಮ್ಮ, ಕವಲುದಾರಿ ಖ್ಯಾತಿಯ ನಟ ರಿಷಿ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು “ಮಂಗಳಾಪುರಂ” ಚಿತ್ರದಲ್ಲಿ ವಿನೂತನ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರಲು ರಿಷಿ ಮುಂದಾಗಿದ್ದಾರೆ
ನಟ ರಿಷಿ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಟೈಟಲ್ ಮೂಲಕ ಗಮನ ಸೆಳೆದಿದ್ದ ಮಂಗಳಾಪುರಂ ಸಿನಿಮಾ ಇದೀಗ ಅದ್ದೂರಿ ಮುಹೂರ್ತ ಮಾಡಿಕೊಳ್ಳುವ ಮೂಲಕ ಚಿತ್ರೀಕರಣ ಪ್ರಾರಂಭಿಸಿದೆ.
ಮೂಡಬಿದಿರೆಯ ಅಲಂಗಾರಿನಲ್ಲಿರುವ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭದಲ್ಲಿ ಇಡೀ ಸಿನಿಮಾತಂಡದ ಜೊತೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವಾ, ಅಲಂಗಾರು ಈಶ್ವರ ಭಟ್, ಉದ್ಯಮಿ ಶ್ರೀಪತಿ ಭಟ್ ಸೇರಿದಂತೆ ಅನೇಕರು ಹಾಜರಿದ್ದು ಸಿನಿಮಾತಂಡಕ್ಕೆ ಶುಭಹಾರೈಸಿದರು.

ಮಂಗಳಾಪುರಂ ರಂಜಿತ್ ರಾಜ್ ಸುವರ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೊದಲ ಕನ್ನಡ ಸಿನಿಮಾ. ಮೊದಲು ತುಳು ಸಿನಿಮಾ ಮಾಡಿದ್ದ ರಂಜಿತ್ ರಾಜ್ ಇದೀಗ ಮಂಗಳಾಪುರಂ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.ಚಿತ್ರವನ್ನು ವಿದ್ವಾನ್ ಪ್ರಸನ್ನ ತಂತ್ರಿ, ರಾಮ್ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ.
ಮಂಗಳಾಪುರಂನಲ್ಲಿ ರಿಷಿಗೆ ಜೋಡಿಯಾಗಿ ಕಿರುತೆರೆಯಲ್ಲಿ ಖ್ಯಾತಿಗಳಿಸಿದ್ದ ನಟಿ ಗೌತಮಿ ಜಾದವ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಗೌತಮಿ ಮತ್ತು ರಿಷಿ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇನ್ನೂ ವಿಶೇಷ ಎಂದರೆ ಚಿತ್ರಕ್ಕೆ ಗೌತಮಿ ಜಜಾದವ್ ಅವರ ಪತಿ ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ.
ಪತ್ನಿಯ ನಟನೆಯನ್ನು ಪತಿಯೇ ಸೆರೆಹಿಡಿಯುತ್ತಿರುವುದು ವಿಶೇಷ.ಉಳಿದಂತೆ ಸಿವಿಮಾದಲ್ಲಿ ವಿದ್ಯನಾಥ್ ಬಿರಾದರ್, ದೀಪಕ್ ರೈ ದೇವರಾಜ್ ಕಾಪಿಕಾಡ್,ರಾಮದಾಸ್ ಸೇರಿದಂತೆ ಕರಾವಳಿಯ ಅನೇಕ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ.

ಮಂಗಳಾಪುರಂ ಸಿನಿಮಾ ಒಂದು ಊರಿನಲ್ಲಿ ನಡೆಯುವ ಮರ್ಡರ್ ಮಿಸ್ಟ್ರಿ ಕಥೆ. ನಂಬಿಕೆ – ಮೂಡನಂಬಿಕೆ ಹಾಗೂ ಪವಾಡ ವಿಚಾರದ ಮೇಲೆ ಕಥೆ ಸಾಗಲಿದೆ ..ಕಾರ್ಕಳ, ತೀರ್ಥಹಳ್ಳಿ, ಮಡಿಕೆರಿ, ಬೆಂಗಳೂರು ಸುತ್ತಾಮುತ್ತಾ ಚಿತ್ರೀಕರಣ ನಡೆಯಲಿದೆ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದೆ.


