“ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರಕ್ಕೆ ಕಲಾ ರಸಿಕರು ಫಿದಾ

ವಿಹಾನ್, ಅಂಕಿತ ಅಮರ್, ಮಯೂರಿ ನಟರಾಜ್ ಅಭಿನಯದ ಸುಮಧುರ ಪ್ರೇಮಕಾವ್ಯ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರ ಮೂರನೇ ವಾರದಲ್ಲಿಯೂ ಗೆಲುವಿನ ಓಟ ಮುಂದುವರಿಸಿದೆ.

ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸಿರುವ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ” ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರ ಈ ತಿಂಗಳ 5 ರಂದು ಬಿಡುಗಡೆಯಾದ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಲಿದೆ.. ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದ್ದ ಈ ಚಿತ್ರ, ಬಿಡುಗಡೆಯಾದ ಮೇಲೂ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಬಿಡುಗಡೆಯ ಸಮಯದಲ್ಲಿ ಕಡಿಮೆ ಸ್ಕ್ರೀನ್ ಗಳಲ್ಲಿ ಈ ಚಿತ್ರ ತೆರೆ ಕಂಡಿತ್ತು. ಆನಂತರ ಜನರೇ ಈ ಚಿತ್ರವನ್ನು ಹಾಡಿಹೊಗಳಿ ಹೆಚ್ಚು ಪ್ರಚಾರ ಮಾಡಲು ಆರಂಭಿಸಿದರು. ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬರಲು ಆರಂಭಿಸಿದರು. ವಾರದ ಕೊನೆಯಲಂತೂ ಚಿತ್ರಮಂದಿರಗಳು ಕೌಟುಂಬಿಕ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ.

ವಿಹಾನ್, ಅಂಕಿತ, ಮಯೂರಿ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜನರು ಚಿತ್ರಕ್ಕೆ ತೋರುತ್ತಿರುವ ಪ್ರೀತಿಗೆ ಚಿತ್ರತಂಡದ ಮನತುಂಬಿ ಬಂದಿದೆ. ಮೊದಲವಾರ ಐವತ್ತರ ಆಸುಪಾಸಿನ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಮೂರನೇ ವಾರದಲ್ಲಿ ಕರ್ನಾಟಕದಾದ್ಯಂತ ಇನ್ನೂರು ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗುತ್ತಿದೆ. ಜನರು “ಇಬ್ಬನಿಯನ್ನು ತಬ್ಬುತ್ತಿರುವ” ಪ್ರೀತಿಗೆ ಇದೊಂದು ಉತ್ತಮ ನಿದರ್ಶನವಾಗಿದೆ.

ಜನರಷ್ಟೇ ಅಲ್ಲದೇ ನಿರ್ದೇಶಕರಾದ ರಿಷಭ್ ಶೆಟ್ಟಿ, ಶಶಾಂಕ್, ಪವನ್ ಒಡೆಯರ್ ಮುಂತಾದ ಸ್ಯಾಂಡಲ್ ವುಡ್ ಗಣ್ಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕುರಿತು ಮೆಚ್ಚುಗೆ ಮಾತುಗಳನ್ನು ಬರೆದು ಸಹಕಾರ ನೀಡಿದ್ದಾರೆ.

ಚಿತ್ರಮಂದಿರಕ್ಕೆ ಜನರು ಬರುತ್ತಿಲ್ಲ ಎಂಬ ಮಾತನ್ನು “ಕೃಷ್ಣಂ ಪ್ರಣಯ ಸಖಿ” ಹಾಗೂ “ಭೀಮ” ಚಿತ್ರಗಳು ದೂರ ಮಾಡಿದ್ದವು. ಈಗ ಆ ಸಾಲಿಗೆ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರ ಸಹ ಸೇರ್ಪಡೆಯಾಗಿದೆ.