ವಿಭಿನ್ನ ಕಥೆಯ ಕೆಎ -11-1977 ಚಿತ್ರಕ್ಕೆ ಮುಹೂರ್ತ
ವಿನೂತನ, ವಿಶಿಷ್ಟ ಹಾಗೂ ವಿಸ್ಮಯಗಳಿಂದ ಕೊಡಿರುವ ವಿಭಿನ್ನ ಶೀರ್ಷಿಕೆ ‘ಕೆಎ-11-1977’ ಚಿತ್ರ. ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಸೆಟ್ಟೇರಿದೆ. ಒಂಬತ್ತು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಶರಣ್ ಮೊದಲ ಬಾರಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ‘ಕಾಲೇಜ್ ಕಾಲೇಜ್’ ಮತ್ತು ‘ಥ್ಯಾಂಕ್ಸ್’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಜಗದೀಶ್ ಕೊಪ್ಪ ದೀರ್ಘ ಕಾಲದ ಗ್ಯಾಪ್ ನಂತರ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಅಲ್ಲದೆ ಸಹ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರಕಾಶ್ ಪೆÇ್ರಡಕ್ಷನ್ ಅಡಿಯಲ್ಲಿ ಬೆಂಗಳೂರು ಉದ್ಯಮಿ ಹೆಚ್.ಪ್ರಕಾಶ್ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ.
ಬಳಿಕ ಪಿ. ಶೇಷಾದ್ರಿ ಮಾತನಾಡಿ ಜಗದೀಶ್ಕೊಪ್ಪ ಗುರುಗಳೇ ಅಂತ ಕರೆಯುತ್ತಾರೆ. ಪರಸ್ಪರ ಯಾರು ಯಾರಿಗೂ ಗುರು ಅಲ್ಲ. ಯಾರಿಗೂ ಶಿಷ್ಯ ಅಲ್ಲ. ನಾವುಗಳು ಕಾಯಕದಲ್ಲಿ ಬ್ಯುಸಿಯಾಗಿರಬೇಕು. ‘ಸಮರ’ ಚಿತ್ರದಲ್ಲಿ ನನ್ನ ಜತೆಗೆ ಕೆಲಸ ಮಾಡಿದ್ದರು.

ಇತ್ತೀಚಿನ ದಿನಗಳಲ್ಲಿ ಅವರು ನಟನೆ ಮಾಡುತ್ತಿದ್ದಾರೆ. ನೀವು ಯಾವಾಗಲೂ ತಂತ್ರಜ್ಞರು. ನಿರ್ದೇಶನ ಮಾಡುತ್ತಿರಬೇಕೆಂದು ಸಲಹೆ ನೀಡಿದ್ದೆ. ಅದರಂತೆ ಗ್ಯಾಪ್ ತರುವಾಯ ಹಳೇ ದಾರಿಗೆ ಮರಳಿದ್ದಾರೆ. ಒಳ್ಳೆಯದಾಗಲಿ ಎಂದರು.
ನಿರ್ದೇಶಕ ಜಗದೀಶ್ ಕೊಪ್ಪ ಮಾತನಾಡಿ ಟೈಟಲ್ ವಾಹನದ ಸಂಖ್ಯೆ ಅಥವಾ ಕೇಸ್ ನಂಬರ್ ಅಂತ ಎಲ್ಲರೂ ಕೇಳುತ್ತಿದ್ದಾರೆ. ಮಾಧ್ಯಮದವರು ಕೇಳುತ್ತಿರುವ ಪ್ರಶ್ನೆಗಳಿಗೆ ಕುತೂಹಲ ಹಾಗೆಯೇ ಇರಲಿ. ಮುಂದಿನ ದಿನಗಳಲ್ಲಿ ಎಲ್ಲವು ಗೊತ್ತಾಗಲಿದೆ. ಮಡಕೇರಿ, ಶಿವಮೊಗ್ಗ, ಸಕಲೇಶಪುರದಲ್ಲಿ ಚಿತ್ರೀಕರಣ ನಡೆಸಲಾಗುವುದು. ಮೂವರು ನಾಯಕರು ಆಯ್ಕೆಯಾಗಿದ್ದು, ಹುಡುಗಿಯರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ ಎನ್ನುತ್ತಾ ಒಂದು ಏಳೆಯ ಗುಟ್ಟನ್ನು ಬಿಟ್ಟುಕೊಡದೆ ಗೌಪ್ಯತೆ ಕಾಪಾಡಿಕೊಂಡರು.

ನವೀನ್ ಕೃಷ್ಣ ಬಣ್ಣ ಹಚ್ಚುವ ಜತೆಗೆ ಸಂಭಾಷಣೆಗೆ ಅವರ ಪೆನ್ನು ಕೆಲಸ ಮಾಡುತ್ತಿದೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಕೆಎಎಸ್ ಅಧಿಕಾರಿ ಸಂಗಮೇಶ ಉಪಾಸೆ, ನಾಗೇಂದ್ರ ಅರಸ್ ಇವರೊಂದಿಗೆ ಶಿವಕುಮಾರ ಆರಾಧ್ಯ, ರೀಮಾ, ತಾರಾ, ಶಶಾಂಕ್, ಆಶಿತ್ ಕಾಶ್ವೀ, ಬೇಬಿ ರಚನಾ ಮುಂತಾದವರು ನಟಿಸುತ್ತಿದ್ದಾರೆ.
ಮಳವಳ್ಳಿ ಸಾಯಿಕೃಷ್ಣ, ‘ಒಳಿತು ಮಾಡೋ ಮನುಜ’ ಖ್ಯಾತಿಯ ನಮ್ ಋಷಿ ಸಾಹಿತ್ಯದ ಒಟ್ಟು ಎರಡು ಗೀತೆಗಳಿಗೆ ಪಳಿನಿ.ಡಿ.ಸೇನಾಪತಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರೇಣುಕುಮಾರ್ ಅವರದಾಗಿದೆ. ಅಕ್ಟೋಬರ್ ತಿಂಗಳಲ್ಲಿ ಜನರಿಗೆ ತೋರಿಸಲು ತಂಡ ಯೋಜನೆ ರೂಪಿಸಿಕೊಂಡಿದೆ.

