‘ಸಂಜು ವೆಡ್ಸ್ ಗೀತಾ -2’ ಚಿತ್ರಕ್ಕೆ 25 ರ ಸಂಭ್ರಮ: ನಟ ಉಪೇಂದ್ರ ಸೇರಿ ಹಲವರು ಭಾಗಿ
ಸಂಜು ವೆಡ್ಸ್ ಗೀತಾ -2 ಚಿತ್ರ ಅಡೆ ತಡೆ ದಾಟಿ 25 ದಿನ ಪೂರೈಸಿದೆ, ಇದು ಸಹಜವಾಗಿಯೇ ನಿರ್ಮಾಪಕ ಛಲವಾದಿ ಕುಮಾರ್ ಹಾಗೂ ನಿರ್ದೇಶಕ ನಾಗಶೇಖರ್ ಮತ್ತು ಚಿತ್ರತಂಡದ ಮುಖದಲ್ಲಿ ಖುಷಿ,ನಗು ಮಂದಹಾಸ ಮೂಡಿಸಿದೆ.

ಬಿಡುಗಡೆ ಸಮಯದಲ್ಲೇ ಹಲವಾರು ಅಡೆ ತಡೆಗಳನ್ನು ಎದುರಿಸಿದ ಸಂಜು ವೆಡ್ಸ್ ಗೀತಾ -2 ಚಿತ್ರ ನಂತರ ತರಾತುರಿಯಲ್ಲಿ ರಿಲೀಸಾಯಿತು. ಹಾಡು, ಕ್ಯಾಮೆರಾ ವರ್ಕ್ ಎಲ್ಲಾ ಅದ್ಭುತವಾಗಿ ಮೂಡಿಬಂದಿದ್ದರೂ, ಚಿತ್ರದಲ್ಲಿ ಏನೋ ಕೊರತೆಯಿದೆ ಅಂತ ನಿರ್ದೇಶಕರಿಗೆ ಅನಿಸಿದ ತಕ್ಷಣ, ಎರಡೇ ದಿನಕ್ಕೆ ಥೇಟರುಗಳಿಂದ ಸಿನಿಮಾನ ಹಿಂಪಡೆದು, ಹೊಸದಾಗಿ 21 ನಿಮಿಷಗಳ ಮನಮಿಡಿಯುವ ಸನ್ನಿವೇಶಗಳನ್ನು ಸೇರಿಸಿ, ಜೂನ್ 6ರಂದು ಚಿತ್ರವನ್ನು ರೀರಿಲೀಸ್ ಮಾಡಲಾಗಿತ್ತು.
ನಿಜಕ್ಕೂ ಸೆಕೆಂಡ್ ವರ್ಷನ್ ಸ್ಮಾರ್ಟ್ ಆಗಿತ್ತು. ಚಿತ್ರ ನೋಡಿದ ಪ್ರೇಕ್ಷಕರು, ಅಲ್ಲದೆ ಡಾ.ಶಿವರಾಜ್ ಕುಮಾರ್, ನಿರ್ದೇಶಕರಾದ ಆರ್.ಚಂದ್ರು, ನಾಗತಿಹಳ್ಳಿ ಚಂದ್ರಶೇಖರ್, ಕೆಎಂ.ಚೈತನ್ಯ, ಸುನಿ, ದಯಾಳ್, ಎಸ್.ಮಹೇಂದರ್ ಸೇರಿದಂತೆ ಹಲವಾರು ಸೆಲಬ್ರಟಿಗಳು ಚಿತ್ರನೋಡಿ ಮೆಚ್ಚಿಕೊಂಡಿದ್ದರು. ಬಹುಶಃ ಯಾವ ನಿರ್ಮಾಪರೂ ಇಂಥ ಧೈರ್ಯ ಮಾಡಲಾರರು. ಇದೀಗ ಸಂಜು ವೆಡ್ಸ್ ಗೀತಾ -2 ಚಿತ್ರ 25 ದಿನಗಳ ಯಶಸ್ವೀ ಪ್ರದರ್ಶನವನ್ನು ಪೂರೈಸಿದೆ. ಸಂಭ್ರಮದ ವೇದಿಕೆಯಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರು ಪಾಲ್ಗೊಂಡು ಯಶಸ್ಸಿಗೆ ಕಾರಣರಾದ ಇಡೀ ಸಂಜು ವೆಡ್ಸ್ ಗೀತಾ -2 ಚಿತ್ರತಂಡಕ್ಕೆ ಸ್ಮರಣ ಫಲಕಗಳನ್ನು ವಿತರಿಸಿದರು.
ನಟ ಉಪೇಂದ್ರ ಮಾತನಾಡಿ ಇಲ್ಲಿಗೆ ಬಂದಿರೋದೇ ನಿರ್ಮಾಪಕರಿಗೆ ಪೆÇ್ರೀತ್ಸಾಹ ಕೊಡೋಕೆ. ನಾವೆಲ್ಲ ಇವರ ಧೈರ್ಯವನ್ನು ಮೆಚ್ಚಲೇಬೇಕು. ನಿಮ್ಮಿಂದಲೇ ಇಷ್ಟೆಲ್ಲಾ ಸಂಭ್ರಮ, ಸಮಾರಂಭ ನಡೀತಿರೋದು. ಇನ್ನೊಂದು ಬಾರಿ ಸಿನಿಮಾ ತೋರಿಸಿ ಹಿಟ್ ಮಾಡಲು ಗಟ್ಟಿ ಗುಂಡಿಗೆ ಇರಬೇಕು. ಹಿಂದೆಲ್ಲಾ ಒಂದು ಸಿನಿಮಾ 3 ಥೇಟರುಗಳಲ್ಲಿ 100 ದಿನ ಓಡಿ ದಾಖಲೆ ಮಾಡ್ತಿತ್ತು. ಆದರೆ ಈಗ 100 ಥೇಟರುಗಳಲ್ಲಿ ಮೂರು ದಿನ ಓಡಿದರೆ ಆ ನಿರ್ಮಾಪಕ ಗೆದ್ದಂತೆ. ಹಾಗಾಗಿ 25 ದಿನ ದೊಡ್ಡ ದಾಖಲೆಯೇ ಎಂದು ನಿರ್ಮಾಪಕ ಕುಮಾರ್ ಅವರನ್ನು ಮೆಚ್ಚಿಕೊಂಡರು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಟ ಸಾಧು ಕೋಕಿಲ ಮಾತನಾಡಿ ನಾಗಶೇಖರ್ ಉಪೇಂದ್ರ ಇಬ್ಬರೂ ಸಿನಿಮಾ ಲವರ್ಸ್, ಸಿನಿಮಾ ಎಂದ ಮೇಲೆ ಏಳು ಬೀಳುಗಳು, ಹೊಗಳಿಕೆ, ತೆಗಳಿಕೆ ಇದ್ದದ್ದೇ. ಚಿತ್ರರಂಗ ಕುಗ್ಗುತ್ತಾ ಇರುವ ಸಂದರ್ಭದಲ್ಲಿ ಇಂಥ ಸಿನಿಮಾಗಳು ಬರಬೇಕು ಎಂದು ಹೇಳಿದರು.
ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ ನಮ್ಮ ಕರೆಗೆ ಓಗೊಟ್ಟು ಬಂದಿರುವ ಉಪೇಂದ್ರ ಅವರಿಗೆ ಧನ್ಯವಾದ. ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಬೇಕು ಎಂಬ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ಈ ಸಕ್ಸಸ್ ನಿಜವಾಗಿಯೂ ನಮ್ಮ ನಿರ್ಮಾಪಕ ಛಲವಾದಿ ಕುಮಾರ್ ಹಾಗೂ ನಿರ್ದೇಶಕ ಹಠವಾದಿ ನಾಗಶೇಖರ್ ಅವರಿಗೆ ಸಲ್ಲಬೇಕು ಎಂದರು.
ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್, ಪ್ರಚಾರಕರ್ತ ನಾಗೇಂದ್ರ, ನಾಯಕನಟ ಶ್ರೀನಗರ ಕಿಟ್ಟಿ, ಸಾಹಿತಿ ಕವಿರಾಜ್, ಸಂಭಾಷಣೆಗಾರ ಡಿಕೆ ಚಕ್ರವರ್ತಿ ಇವರೆಲ್ಲ ಸ್ಮರಣಫಲಕ ಸ್ವೀಕರಿಸಿ ನಿರ್ಮಾಪಕ, ನಿರ್ದೇಶಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು

ಪೊಲೀಸ್ ಅಧಿಕಾರಿಗಳಾದ ಎಜಿಡಿಪಿ ಅರುಣ್ ಚಕ್ರವರ್ತಿ, ಎಸಿಪಿ ಪೂರ್ಣಚಂದ್ರ ತೇಜಸ್ವಿ ಹಾಗೂ ಜಯರಾಜ್, ಪೊಲೀಸ್ ಇನ್ ಸ್ಪೆಕ್ಟರ್ ಅರುಣ್ ಅಲ್ಲದೆ ಫಾರೆಸ್ಟ್ ಆಫೀಸರ್ ಡಾ.ರಾಜು, ಚಂದ್ರಶೇಖರ್,ಎಕ್ಸಿಕ್ಯೂಟಿವ್ ಡೈರೆಕ್ಟರ್ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವಾರು ಗಣ್ಯರುಗಳು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಿನಿಮಾ ಬಗ್ಗೆ ಮಾತನಾಡಿದರು.
ಆನಂದ್ ಆಡಿಯೋ ಶ್ಯಾಮ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಡಿಜಿಟಲ್ ಶ್ರೀನಾಥ್ ಹಾಗೂ ಇಡೀ ಚಿತ್ರತಂಡಕ್ಕೆ ಸ್ಮರಣ ಫಲಕ ವಿತರಿಸಲಾಯಿತು.


