‘ಬೊಂಬಾಟ್ ಭೋಜನ’ದಲ್ಲಿ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಭಾಗಿ
.
ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿರುವ ಅಡುಗೆ ಶೋ “ಬೊಂಬಾಟ್ ಭೋಜನ”ದಲ್ಲಿ ಈ ಬಾರಿ “ರಾಮನವಮಿ’ ಹಬ್ಬದ ಪ್ರಯುಕ್ತ ವಿಶೇಷ ಸಂಚಿಕೆ ಪ್ರಸಾರ ಮಾಡುತ್ತಿದೆ.
ಈ ರಾಮನವಮಿಯ ವಿಶೇಷ ಸಂಚಿಕೆಯನ್ನು ಅಯೋಧ್ಯೆಯ ರಾಮಲಲ್ಲಾ ವಿಗ್ರಹವನ್ನು ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ರವರ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ. ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಅರುಣ್ ಯೋಗಿರಾಜ್ ರವರ ತುಂಬು ಕುಟುಂಬವನ್ನು ನೀವು ಈ ವಿಶೇಷ ಸಂಚಿಕೆಯಲ್ಲಿ ಕಾಣಬಹುದು.
ರಾಮಲಲ್ಲಾ ವಿಗ್ರಹದ ಬಗ್ಗೆ, ಅದನ್ನು ಕೆತ್ತುವಾಗ ಆದ ಅನುಭವದ ಬಗ್ಗೆ ಈ ವಿಶೇಷ ಸಂಚಿಕೆಯಲ್ಲಿ ಎಳೆಎಳೆಯಾಗಿ ಹಂಚಿಕೊಂಡಿರುವ ಅರುಣ್ ಯೋಗಿರಾಜ್, ಪ್ರಭು ಶ್ರೀರಾಮನಿಗೆ ಜನರು ತೋರುವ ಪ್ರೀತಿಯಲ್ಲಿ ಕಿಂಚಿತ್ತು ನನಗೆ ತೋರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.
ಬೊಂಬಾಟ್ ಭೋಜನದ ರೂವಾರಿಯಾಗಿರುವ ಸಿಹಿ ಕಹಿ ಚಂದ್ರು ಅರುಣ್ ಯೋಗಿರಾಜ್ ರವರಿಗೆ ಗೌರವಾರ್ಪಣೆಯೊಂದಿಗೆ, ಸನ್ಮಾನಿಸಿದ್ದಾರೆ. ಜೊತೆಗೆ ಈ ವಿಶೇಷ ಸಂಚಿಕೆಯಲ್ಲಿ ಗಾಯಕರಾದ ಶ್ರೀ ಚಿನ್ಮಯಿ ಅತ್ರೇಯಸ್ ಅತಿಥಿಯಾಗಿ ಆಗಮಿಸಿದ್ದು, ರಾಮನಾಮವನ್ನು ಭಕ್ತಿಯಿಂದ ಹಾಡಿ ಮನರಂಜಿಸಿದ್ದಾರೆ.
ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆ ನಾಳೆ ಬುಧವಾರ ಅಂದರೆ ಏಪ್ರಿಲ್ 17 ರಂದು ಮಧ್ಯಾಹ್ನ 12 ಗಂಟೆಗೆ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ .