ಶಿವಮ್ಮನ ” ಶೇಕ್ ” ಆವಾಂತರ : ಗ್ರಾಮೀಣ ಸೊಗಡಿನ ನೈಜ ಚಿತ್ರಣ

ಚಿತ್ರ : ಶಿವಮ್ಮ
ನಿರ್ದೇಶನ : ಜೈಶಂಕರ್ ಆರ್ಯರ್
ನಿರ್ಮಾಣ : ರಿಷಬ್ ಶೆಟ್ಟಿ
ತಾರಾಗಣ: ಶರಣಮ್ಮ ಚಟ್ಟಿ,ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗರೆ,ಶೃತಿ ಕೊಂಡೇನಹಳ್ಳಿ ಮತ್ತಿತತರು
ರೇಟಿಂಗ್ : ** ** 4/5

ಬದುಕು ಕಟ್ಟಿಕೊಳ್ಳುವ ಜೊತೆಗೆ ಜವಾಬ್ದಾರಿ ನಿರ್ವಹಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಗ್ರಾಮೀಣ ಭಾಗದ ಜನರಿಗೆ ಒಂದಷ್ಟು ಹೆಚ್ಚು ತ್ರಾಸವೇ ಸರಿ.ಅದಕ್ಕಾಗಿ ತಾವು ದುಡಿದು ಜೀವನ ರೂಪಿಸಿಕೊಳ್ಳುವುದರೊಂದಿಗೆ ಮನೆ ಮಂದಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎನ್ನುವ ಧಾವಂತ ಮತ್ತು ತುಡಿತ.
ಇಂತಹುದೇ ಒಂದು ವಾಸ್ತವ ನೆಲೆಗಟ್ಟಿನ ಕಥೆ ಶಿವಮ್ಮ.ನಮ್ಮ ಮದ್ಯೆಯೇ ನಡೆಯುವ ಜೀವನದ ಕಟುವಾಸ್ತವಕ್ಕೆ ಹಿಡಿದ ಕನ್ನಡಿಯೂ ಹೌದು. ಅಂಗವಿಕಲ ಪತಿ, ಬೆಳೆದ ಮಕ್ಕಳಿಬ್ಬರಿಗೆ ಬದುಕು ರೂಪಿಸಲು ಯರೇಹಂಚಿನಾಳದ ಶಿವಮ್ಮ- ಶರಣಮ್ಮ ಚಟ್ಟಿ , ನ್ಯೂಟ್ರಿಷಿಯನ್ ಪೌಡರ್ ಮಾರಾಟ ಮಾಡಲು ಅದಕ್ಕಾಗಿ ಜನರನ್ನು ಸೇರಿಸಿ ತನ್ನೂರಿನಲ್ಲಿ ಕ್ಲಬ್ ಕೂಡ ಮಾಡಿಕೊಳ್ಳುತ್ತಾರೆ. ಮಗಳ ಮದುವೆಗೆ ಕೂಡಿಟ್ಟ ಹಣವನ್ನು ತಾನು ಮಾರಾಟ ಮಾಡುವ ಉತ್ಪನ್ನದ ಮೇಲೆ ಹಾಕುತ್ತಾರೆ. ಆರಂಭದಲ್ಲಿ ಜನರನ್ನು ನಂಬಿಸಿ ತನ್ನ ಪೆÇೀಷ್ಠಿಕಾಂಶದ ಉತ್ಪನ್ನ ಮಾರಾಟ ಮಾಡುತ್ತಾರೆ.
ನ್ಯೂಟ್ರೀಷಿಯನ್ ಜಾಲದಲ್ಲಿ ಸಿಲುಕಿದ ಮಂದಿಯ ಮರಳು ಮಾಡುವ ಮಾತಿಗೆ ಕಟ್ಟುಬಿಟ್ಟು ಇಡೀ ಜೀವನವನ್ನು ಅದರ ಮೇಲೆ ಅವಲಂಬನೆಯಾಗುತ್ತಾರೆ. ಊರಿನ ಮಂದಿಗೆ ನ್ಯೂಟ್ರಿಷಿಯನ್ ಶೇಕ್ ಕೊಟ್ಟು ಹಣ ಮಾಡುವ ಕಾಯಕ ಮಂದುವರಿಸುತ್ತಾಳೆ
ತಮ್ಮ ನೆರೆ ಮನೆಯ ವ್ಯಕ್ತಿ ಸಾವನ್ನಪ್ಪುತ್ತಾನೆ. ನ್ಯೂಟ್ರೀಷಿಯನ್ ಕುಡಿದು ಆತ ಸಾವನ್ನಪ್ಪುತ್ತಾನೆ ಎನ್ನುವ ಆರೋಪ ಎದುರಿಸುವಂತಾಗುತ್ತದೆ. ಅಲ್ಲಿಂದ ಶಿವಮ್ಮನ ಸಮಸ್ಯೆ ಎದುರಿಸುವಂತಾಗುತ್ತದೆ. ತನ್ನೂರಿನಲ್ಲಿ ಉತ್ಪನ್ನ ಮಾರಾಟ ಮಾಡಲು ಸಾದ್ಯವಾಗದೆ ಪರ ಊರುಗಳಿಗೆ ತಿರುಗಾಡುವ ಪ್ರಮೇಯ ಎದುರಾಗುತ್ತದೆ.
ಈ ನಡುವೆ ಮದುವೆ ನಿಗಧಿಯಾಗಿದ್ದ ಮಗಳ ಮದುವೆ ಶಿವಮ್ಮನ ಕೆಲಸದಿಂದಲೇ ನಿಂತುಹೋಗಿ ಮತ್ತಷ್ಟು ಜರ್ಜರಿತವಾಗುತ್ತಾರೆ. ಇಂತಹ ಸಮಯದಲ್ಲಿ ಮಗಳಿಗೆ ಮದುವೆ ಮಾಡೋದು ಹೇಗೆ ಎನ್ನುವ ಚಿಂತೆ ಒಂದೆಡೆಯಾದರೆ ಮಗ ಈಕೆಯ ಉತ್ಪನ್ನ ಮಾರಾಟಕ್ಕೆ ವಿರೋದ ವ್ಯಕ್ತಪಡಿಸುತ್ತಾನೆ. ಇಂತಹ ಸಮಯದಲ್ಲಿ ಶಿವಮ್ಮ ಬದುಕು ಒಂದು ರೀತಿ ದಿಕ್ಕು ಕಾಣದಂತಾಗುತ್ತದೆ. ಈ ಸಮಯದಲ್ಲಿ ಆಕೆ ಏನು ಮಾಡುತ್ತಾರೆ ಎನ್ನುವುದು ಚಿತ್ರದ ಕಥನ ಕುತೂಹಲ. ಶಿವಮ್ಮನ ಶೇಕ್ ಅವಾಂತರದಿಂದ ಏನೆಲ್ಲಾ ಆಗಲಿದೆ ಎನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.
ನಿರ್ದೇಶಕ ಜೈಶಂಕರ್ ಆರ್ಯರ್ ಸರಳವಾದ ಕಥೆ ಮುಂದಿಟ್ಟುಕೊಂಡು ಗ್ರಾಮೀಣ ಭಾಗದಲ್ಲಿ ಜನರ ಅವಲಂಬನೆ ಸೇರಿದಂತೆ ಒಂದಷ್ಟು ನೈಜ ಸಂಗತಿಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ತಮ್ಮೂರಿನ ಬಹುತೇಕ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ಗ್ರಾಮೀಣ ಬದುಕು, ಜೀವನವನ್ನು ತೆರೆಯ ಮೇಲೆ ಅನಾವರಣ ಮಾಡಿದ್ದಾರೆ.

ಶಿವಮ್ಮನ ಪಾತ್ರದಾರಿ ಶರಣಮ್ಮ ಚಟ್ಟಿ ನೈಜವಾಗಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಎಲ್ಲಿಯೂ ಕೂಡ ನಾಟಕೀಯ ಅಥವಾ ಸಿನಿಮೀಯ ಭಾವ ಮೂಡುವಿಲ್ಲ. ಚಿತ್ರ ನೋಡಿದ ಮಂದಿಗೆ ತಮ್ಮ ಊರಿನಲ್ಲಿ ಅಕ್ಕಪಕ್ಕದಲ್ಲಿ ಕೊನೆಗೆ ನಮಗೆ ಈ ರೀತಿಯ ಅನುಭವವಾಗಿದೆ ಎನ್ನುವ ಭಾವ ಮೂಡಿದರೆ ಆಶ್ಚರ್ಯವಾಗದು.
ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗರೆ, ಶೃತಿ ಕೊಂಡೇನಹಳ್ಳಿ ಮತ್ತಿತತರು ಪಾತ್ರಕ್ಕೆ ಸಹಜಾಭಿನಯದ ಮೂಲಕವೇ ಜೀವ ತುಂಬಿ ಚಿತ್ರಕ್ಕೆ ತೂಕ ತಂದುಕೊಟ್ಟಿದ್ದಾರೆ