ಶಿವಣ್ಣ- ಉಪೇಂದ್ರ- ರಾಜ್ ಬಿ ಶೆಟ್ಟಿ ಕಾಂಬಿನೇಷನ್ ನ “45” ಚಿತ್ರೀಕರಣ ಪೂರ್ಣ

ಕನ್ನಡ ಚಿತ್ರರಂಗದಲ್ಲಿ ಹೊಸಬಗೆಯ ತಂತ್ರಜ್ಞಾನ ಬಳಕೆ ಮಾಡಿ ಸಿನಿಮಾ ತಯಾರಾಗುವ ಮುನ್ನವೇ ಗ್ರಾಫಿಕ್ ಮೂಲಕವೇ ಚಿತ್ರ ನಿರ್ಮಾಣ ಮಾಡಿ ಹೊಸತನಕ್ಕೆ ನಾಂದಿ ಹಾಡಿರುವ ” 45 ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರನ್ನು ಒಟ್ಟುಗೂಡಿಸಿ ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಕನ್ನಡದ ಚಿತ್ರರಂಗದ ಸಧಭಿರುಚಿಯ ಚಿತ್ರ ನಿರ್ಮಾಪಕ ಎನ್ನುವ ಶ್ರೇಯಕ್ಕೆ ಪಾತ್ರವಾಗಿರುವ ರಮೇಶ್ ರೆಡ್ಡಿ ಬಂಡವಾಳ ಹಾಕಿದ್ದಾರೆ.
ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಮಾ ರಮೇಶ್ ರೆಡ್ಡಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರ ಆರಂಭದಿಂದಲೂ ನಿರೀಕ್ಷೆ ಹುಟ್ಟುಹಾಕಿದೆ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಕುಂಬಳಕಾಯಿ ಒಡೆಯಲಾಗಿದೆ.

ಯಶಸ್ವಿಯಾಗಿ ಚಿತ್ರೀಕರಣ ಮುಗಿದಿರುವ ಹಿನ್ನೆಲೆಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ನಿರ್ದೇಶಕ ಅರ್ಜುನ್ ಜನ್ಯ ಅವರು ನಟರಾದ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರನ್ನು ಸನ್ಮಾನಿಸಿದರು.

ಈ ವೇಳೆ ಮಾತಿಗಿಳಿದ ನಟ ಶಿವರಾಜಕುಮಾರ್ , “45” ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಬಹಳ ಖುಷಿಯಾಗಿದೆ. ಈ ಚಿತ್ರದಲ್ಲಿ ಮೂವರು ನಟಿಸಿದ್ದೇವೆ. ಅವರು ಮುಂದು. ಇವರು ಮುಂದು ಅಂತ ಇಲ್ಲ. ಇಲ್ಲಿ ಎಲ್ಲರು ಒಂದೇ. ಉಪೇಂದ್ರ ಅವರ ಜೊತೆ ನಟಿಸಲು ನಾನು ಯಾವಾಗಲೂ ಸಿದ್ದ. ರಾಜ್ ಬಿ ಶೆಟ್ಟಿ ಅವರ ಜೊತೆಗೆ ನಟಿಸಿದ್ದು ಸಂತೋಷವಾಗಿದೆ ಎಂದರು
ಅರ್ಜುನ್ ಜನ್ಯ ಮೊದಲ ನಿರ್ದೇಶನದ ಚಿತ್ರ ಅಂತ ಹೇಳಲಿಕ್ಕೆ ಆಗಲ್ಲ. ಅಷ್ಟು ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅದ್ದೂರಿಯಾಗಿ ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ರವಿವರ್ಮ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿರುವ ಸಾಹಸ ಸನ್ನಿವೇಶಗಳು ಸೂಪರ್. “45” ಇಡೀ ಭಾರತೀಯರೆ ಮೆಚ್ಚುವಂತಹ ಆಕ್ಷನ್ ಚಿತ್ರವಾಗಲಿದೆ ಎಂದು ಭವಿಷ್ಯ ನುಡಿದರು

ನಟ ಉಪೇಂದ್ರ ಮಾತನಾಡಿ ಕಥೆಯನ್ನು ಅನಿಮೇಷನ್ ಮೂಲಕ ಹೇಳಿದ್ದನ್ನು ಹಾಲಿವುಡ್ ನಲ್ಲಿ ಕೇಳಿದ್ದೆ. ಆದರೆ ಅರ್ಜುನ್ ಜನ್ಯ ಕನ್ನಡದಲ್ಲೇ ಅದನ್ನು ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ಅನಿಮೇಷನ್ ಮೂಲಕ ಕಥೆ ಹೇಳಿದ ರೀತಿಯಲ್ಲೇ ಚಿತ್ರವನ್ನೂ ಮಾಡಿದ್ದಾರೆ. ಅರ್ಜುನ್ ಜನ್ಯ ಅಂದುಕೊಂಡಂತೆ ಚಿತ್ರ ಮಾಡಲು ನಿರ್ಮಾಪಕ ರಮೇಶ್ ರೆಡ್ಡಿ ಸಾಥ್ ನೀಡಿದ್ದಾರೆ. ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಅಭಿನಯಿಸಿದ್ದು ಸಂತಸವಾಗಿದೆ ಚಿತ್ರೀಕರಣ ಮುಗಿದಿದೆ. ಚಿತ್ರವನ್ನು ಅದಷ್ಟು ಬೇಗ ತೆರೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದೇನೆ . ಇನ್ನು ಮುಂದೆ ಅರ್ಜುನ್ ಜನ್ಯಗೆ ಕಾಂಪಿಟೇಷನ್ಕೊಡುವೆ ಎಂದರು.

ನಟ ರಾಜ್ ಬಿ ಶೆಟ್ಟಿ ಮಾತನಾಡಿ ಶಿವಣ್ಣ ಚಿತ್ರಗಳನ್ನು ನೋಡುತ್ತಾ ವಿಷಲ್ ಹೊಡೆಯುತ್ತಿದ್ದೆ. ಉಪೇಂದ್ರ ಅವರ “A” ಚಿತ್ರದ ಪೋಸ್ಟರನ್ನು ಬೆರಗಾಗಿ ನೋಡುತ್ತಿದ್ದೆ. ಅವರಿಬ್ಬರ ಅಭಿಮಾನಿ . ಅವರ ಜೊತೆಗೆ ನಟಿಸಿರುವುದು ನನ್ನ ಭಾಗ್ಯ. ಇನ್ನು “45”, ಕನ್ನಡಿಗರು ಹೆಮ್ಮೆಯ ಪಡುವ ಸಿನಿಮಾ ಅಂತ ಕನ್ನಡಿಗನಾಗಿ ಹೇಳುತ್ತೇನೆ. ಈ ಸಿನಿಮಾದಲ್ಲಿ ನಟಿಸಿದ್ದು ನನಗೂ ಹೆಮ್ಮೆಯಿದೆ ಎಂದರು

ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ “45” ಚಿತ್ರ ನನ್ನ ಪಾಲಿಗೆ ದೇವಸ್ಥಾನ. ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಈ ಮೂವರು ಬ್ರಹ್ಮ ವಿಷ್ಣು ಮಹೇಶ್ವರ ಇದ್ದ ಹಾಗೆ. ರಮೇಶ್ ರೆಡ್ಡಿ ಅವರು ಈ ದೇವಸ್ಥಾನ ಕಟ್ಟಿದವರು. ಛಾಯಾಗ್ರಾಹಕ ಸತ್ಯ ಹೆಗಡೆ ಪ್ರಧಾನ ಪುರೋಹಿತರು. ಹೀಗೆ ಇವರೆಲ್ಲರ ಸಹಕಾರದಿಂದ 106 ದಿನಗಳ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಮುಂದೆ ಸಿಜಿ ವರ್ಕ್ ಆರಂಭವಾಗಲಿದೆ ಎಂದರು.

ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ ಅರ್ಜುನ್ ಜನ್ಯ ಹೇಳಿದ ಕಥೆಯನ್ನುಬ ಆನಂತರ ಅನಿಮೇಷನ್ ನಲ್ಲಿ ಚಿತ್ರ ಮಾಡಿಕೊಂಡು ಬಂದು ತೋರಿಸುತ್ತೇನೆ ಎಂದರು. ಅನಿಮೇಷನ್ ನಲ್ಲಿ ಈ ಚಿತ್ರ ನೋಡಿದಾಗ ತುಂಬಾ ಇಷ್ಟವಾಯಿತು. ಅರ್ಜುನ್ ಜನ್ಯ ಸಂಗೀತ ನಿರ್ದೇಶಕರಾಗಿ ಗೆದ್ದಿದ್ದಾರೆ. ನಿರ್ದೇಶಕರಾಗಿ ಮೊದಲ ಚಿತ್ರ ಹೇಗೆ ಮಾಡುತ್ತಾರೆ ಎಂದು ಸಾಕಷ್ಟು ಜನ ಕೇಳಿದರು.
ನನಗೂ ಆತಂಕ ಇತ್ತು. ಆದರೆ ಚಿತ್ರೀಕರಣ ಶುರುವಾದ ಮೇಲೆ ಅವರು ಪ್ರತಿಯೊಂದು ಸನ್ನಿವೇಶಗಳನ್ನು ನನಗೆ ಕಳುಹಿಸುತ್ತಿದ್ದರು. ಅದನ್ನು ನೋಡಿ ನನಗೆ ತುಂಬಾ ಖುಷಿಯಾಯಿತು. ಇನ್ನೂ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮೂರು ಜನರು ನನ್ನ ಚಿತ್ರದಲ್ಲಿ ನಟಿಸಿರುವುದು ನನ್ನ ಭಾಗ್ಯ. ಈ ಚಿತ್ರ ಬರೀ ಕರ್ನಾಟಕದಲ್ಲಷ್ಟೇ ಅಲ್ಲ. ಇಡೀ ಭಾರತದಲ್ಲೇ ಹೆಸರು ಮಾಡುವ ನಂಬಿಕೆಯಿದೆ ಎಂದು ತಿಳಿಸಿದರು.

ಛಾಯಾಗ್ರಾಹಕ ಸತ್ಯ ಹೆಗಡೆ “45” ಚಿತ್ರದ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರೀಕರಣದ ನಂತರ ಕೆಲಸ ಪೂರ್ಣಗೊಳಿಸಿ ಸದ್ಯದಲ್ಲಿಯೇ ಚಿತ್ರವನ್ನು ತೆರೆಗೆ ಉದ್ದೇಶವನ್ನು ತಂಡ ಹೊಂದಿದೆ
