ಕ್ರೌರ್ಯದ ಅಟ್ಟಹಾಸ ವಿಜೃಂಬಿಸಿರುವ ಚಿತ್ರ ” ಥಗ್ಸ್ ಆಫ್ ರಾಮಗಡ”

ಚಿತ್ರ; ಥಗ್ಸ್ ಆಫ್ ರಾಮಘಡ
ನಿರ್ದೇಶಕ: ಕಾರ್ತಿಕ್
ತಾರಾಗಣ: ಅಶ್ವಿನ್ ಹಾಸನ್, ಚಂದನ್ ರಾಜ್ , ಮಹಾ ಲಕ್ಷ್ಮಿ, ಮತ್ತಿತರರು
ರೇಟಿಂಗ್: ** 4/5
ಗಂಡ ಹೆಂಡತಿಯ ಪ್ರೀತಿ,ಯುವ ಪ್ರೇಮಿಗಳ ಕನಸು, ಕಳ್ಳತನ ದರೋಡೆಯನ್ನು ಬದುಕಾಗಿಸಿಕೊಂಡ ಮಂದಿ, ಇದರ ಜೊತೆ ಪ್ರೀತಿಯ ಪ್ರತೀಕಾರ, ರಕ್ತಪಾತ, ಕ್ರೌರ್ಯದ ಅಟ್ಟಹಾಸ ವಿಜೃಂಬಿಸಿರುವ ಚಿತ್ರ ” ಥಗ್ಸ್ ಆಫ್ ರಾಮಗಡ”.
ದರೋಡೆಯ ಸುತ್ತ ನಡೆಯುವ ಅನಿರೀಕ್ಷಿತ ಘಟನೆಗಳು, ಕೊಲೆ,,ಅದರ ಬೆನ್ನತ್ತಿದವರ ರಕ್ತದೋಕುಳಿಯಲ್ಲಿ ಮಿಂದೆದ್ದಿರುವ ಸನ್ನಿವೇಶಗಳನ್ನು ಕಲ್ಲು ಬಂಡೆಗಳ ರಾಶಿಯ ಬರಡು ಭೂಮಿಯಲ್ಲಿ ಫಲವತ್ತಾದ ಫಸಲು ತೆಗೆಯುವ ಪ್ರಯತ್ನ ಈ ಚಿತ್ರ.
ಹಲವು ಪಾತ್ರಗಳು ಕಥೆಗೆ ತಕ್ಕಂತೆ ಬಂದು ಹೋದರೂ ಇಡೀ ಚಿತ್ರದ ಪ್ರತಿ ಪ್ರೇಮ್ ನಲ್ಲಿ ವಿಜೃಂಬಿಸಿ,ಗಮನ ಸೆಳೆದಿರುವುದು ಅಶ್ವಿನ್ ಹಾಸನ್,ಯುವ ಪ್ರತಿಭೆಗಳಾದ ಚಂದನ್ ರಾಜ್ ಮತ್ತು ಮಹಾಲಕ್ಷ್ಮಿ. ಒಬ್ಬೊಬ್ಬರ ಪಾತ್ರವೂ ಪ್ರೇಕ್ಷಕನ ಮನಸ್ಸಿಗೆ ನಾಟಿದೆ. ಸಹಜ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.ಚಂದನ್ ರಾಜ್ ಬಹುಮುಖ ಪ್ರತಿಭೆಯ ಮೂಲಕ ಭರವಸೆ ಮೂಡಿಸಿದ್ದರೆ. ಮಹಾಲಕ್ಷ್ಮಿ ಸಹಜಾಭಿನಯದಿಂದಲೇ ಇಷ್ಟವಾಗಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಉತ್ತಮ ಕಲಾವಿದರಾಗುವ ಮುನ್ಸೂಚನೆ ನೀಡಿದ್ದಾರೆ.

ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಬಂದು ಹೋಗುವ ಪಾತ್ರಗಳಿಗಷ್ಟೇ ಸೀಮಿತವಾಗಿದ್ದ ಅಶ್ವಿನ್ ಹಾಸನ್, ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ನಟನೆಯ ಮೂಲಕವೂ ಗಮನ ಸೆಳೆದಿದ್ದಾರೆ. ತಾಳಿದವನು ಬಾಳಿಯಾನು ಎನ್ನುವುದಕ್ಕೆ ತಾಜಾ ಉದಾಹರಣೆ ಎನ್ನುವಂತಿದೆ.
ಸೇನೆಯಲ್ಲಿರುವ ಸ್ಯಾಮುಯಲ್ ( ಅಶ್ವಿನ್ ಹಾಸನ್) ಮದುವೆಯಾದ ಹತ್ತು ವರ್ಷದ ನಂತರ ಹೆಂಡತಿ ಗರ್ಭಿಣಿಯಾದ ಸುದ್ದಿ ತಿಳಿದು ಆಕೆಯ ಆರೈಕೆಗೆ ರಜೆ ಹಾಕಿ ಬಂದವ. ಕಳ್ಳತನವನ್ನೇ ಕಸುಬನ್ನಾಗಿ ಮಾಡಿಕೊಂಡ ಅರವಿಂದ( ಚೇತನ್ ರಾಜ್) ಸ್ನೇಹಿತರ ಜೊತೆಗೂಡಿ ದರೋಡೆ ಮಾಡಲು ಹೋಗಿ ಆಕಸ್ಮಿಕವಾಗಿ ಸ್ಯಾಮುಯಲ್ ಹೆಂಡತಿ ಹತ್ಯೆ ಮಾಡಿಬಿಡ್ತಾರೆ.
ಇದರ ಸೇಡು ತೀರಿಸಿಕೊಳ್ಳಲು ಹೆಂಡತಿ ಕೊಂದವರ ಹುಡುಕಾಟ ನಡೆಸಿದವ. ಪೆÇಲೀಸರಿಂದ ತಲೆ ಮರೆಸಿಕೊಳ್ಳಲು ರೇಣುಕಾ ( ಮಹಾಲಕ್ಷ್ಮಿ) ಮನೆ ಅರವಿಂದ ಆಶ್ರಯವಾಗುತ್ತದೆ. ಈ ನಡುವೆ ಪ್ರೀತಿಯೂ ಚಿಗುರೊಡೆಯಲಿದೆ. ಎಲ್ಲವೂ ಸಲೀಸು ಎನ್ನುವಾಗಲೇ ಅರವಿಂದ ರಾಮಘಡದಲ್ಲಿರುವ ಸುದ್ದಿ ತಿಳಿದು ಸೇಡು ತೀರಿಸಿಕೊಳ್ಳಲು ಬರುವ ಸ್ಯಾಮುಯಲ್ .ತನ್ನ ಕೆಲಸ ಸಾಧಿಸುತ್ತಾನಾ ಮುಂದೇನು ಎನ್ನುವುದು ಚಿತ್ರದ ಕುತೂಹಲ.
ನಿರ್ದೇಶಕ ಕಾರ್ತಿಕ್ ,ಕ್ರೈಮ್ ಜಾನರಿನ ಸಿನಿಮಾ ಮಾಡುತ್ತೇವೆ ಎಂದು ರಕ್ತದ ಕೋಡಿ ಹರಿಸಿದ್ದಾರೆ .ಕೆಲವು ಕಡೆ ಅತಿರೇಕ ಎನ್ನಿಸಲಿದೆ. ಒಂದಷ್ಟು ರಕ್ತಪಾತಕ್ಕೆ ಕಡಿವಾಣ ಹಾಕಿದ್ದರೆ ಚಿತ್ರ ಇನ್ನಷ್ಟು ಆಪ್ತವಾಗುತ್ತಿತ್ತು.ಹಾಗಂತ ಚಿತ್ರ ನೋಡಲು ಅಡ್ಡಿ ಇಲ್ಲ.