Review: ಕೊಲೆಯ ಸುತ್ತ ಸಾಗುವ ಭರಪೂರ ಆಕ್ಷನ್ ಸನ್ನಿವೇಶಗಳ ಚಿತ್ರ “ದಿ ಟಾಸ್ಕ್”
ಚಿತ್ರ ; ದಿ ಟಾಸ್ಕ್
ನಿರ್ದೇಶನ : ರಾಘು ಶಿವಮೊಗ್ಗ
ತಾರಾಗಣ ; ಜಯಸೂರ್ಯ ಆರ್ ಅಜಾದ್, ಸಾಗರ್ ರಾಮ್,ಅಚ್ಯುತ್ ಕುಮಾರ್ , ಸಂಗೀತ ಭಟ್, ಅರವಿಂದ್ ಕುಪ್ಲೀಕರ್, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್,ಶ್ರೀಲಕ್ಷ್ಮಿ, ಸಂಪತ್ ಮೈತ್ರೇಯಾ, ಅಶ್ವಿನ್ ಹಾಸನ್ ಮತ್ತಿತರರು
ರೇಟಿಂಗ್: *** 3/5
“ಮನೆಯವರು ನಂಬದಿರುವ ಸಮಯದಲ್ಲಿ ಮನಸ್ಸಿನಲ್ಲಿ ಜಾಗಕೊಟ್ಟಿದ್ದಾರೆ. ಬಾ ಗುರು ಮುನ್ನುಗ್ಗೋಣ…”
ನಿವೃತ್ತ ಪೊಲೀಸ್ ಅಧಿಕಾರಿ ನೀಡಿದ ಟಾಸ್ಕ್ ಪಡೆದ ಇಬ್ಬರು ಯುವಕರು ಅದನ್ನು ಸಾಧಿಸಲು ಹೊರಡುವ ಮುನ್ನ ಆತ್ಮ ವಿಶ್ವಾಸದ ಮಾತಿದು.
ನಟನಾಗಿ ಗುರುತಿಸಿಕೊಂಡಿರುವ ನಿರ್ದೇಶಕ ರಾಘು ಶಿವಮೊಗ್ಗ ಆಕ್ಷನ್ ಕಟ್ ಹೇಳಿರುವ ಚಿತ್ರ “ದಿ ಟಾಸ್ಕ್” ಈ ವಾರ ತೆರೆಗೆ ಬಂದಿದೆ.
ಚಿಕ್ಕವಯಸ್ಸಿನಲ್ಲಿ ಅಪರಾದ ಮಾಡಿ ಜೈಲು ಸೇರುವ ಇಬ್ಬರು ಹುಡುಗರನ್ನು ತಂದೆ ತಾಯಿ ಮನೆಯಿಂದ ಹೊರಹಾಕಿದ ವೇಳೆ ಅವರಿಗೆ ಆಶ್ರಯಕೊಟ್ಟು ಮನಪರಿವರ್ತನೆಗೆ ಕಾರಣರಾದ ನಿವೃತ್ತ ಪೊಲೀಸ್ ಅಧಿಕಾರಿ ಮೇಲೆ ಇಬ್ಬರು ಹುಡುಗರಿಗೆ ಇರುವ ವಿಶ್ವಾಸ ಮತ್ತು ಪ್ರೀತಿಯನ್ನು ಪ್ರತಿಬಿಂಬಿಸುವ ಚಿತ್ರ.
ಕೋವಿಡ್ ಕಾಲಘಟ್ಟದಲ್ಲಿ ವೈಜ್ಞಾನಿಕ ಸಂಶೋಧನೆ ಹೆಸರಲ್ಲಿ ನಡೆಯುವ ಒಂದು ಕೊಲೆಯ ಸುತ್ತಾ ಸಾಗುವ ಕಥೆಗೆ ಭರಪೂರ ಆಕ್ಷನ್ ಸನ್ನಿವೇಶಗಳನ್ನು ಮಿಶ್ರಣ ಮಾಡಿ ಆಕ್ಷನ್ಪ್ರಿಯರಿಗೆ ಇಷ್ಟವಾಗುವ ಸಿನಿಮಾವನ್ನು ಜನರ ಮುಂದಿಟ್ಟಿದ್ದಾರೆ ನಿರ್ದೇಶಕರು.
ಇದಕ್ಕಾಗಿ ಅವರು ವೈಜ್ಞಾನಿಕ ಸಂಶೋಧನೆಗಾಗಿ ಸಾಮಾಜಿಕ ಸೇವೆಯ ಹೆಸರಲ್ಲಿ ಹಿರಿಯ ನಾಗರಿಕರ ಮೇಲೆ ಪ್ರಯೋಗ, ಸಾಮಾಜಿಕ ಕಳಕಳಿಯ ಕ್ಯಾಬ್ ಚಾಲಕ, ಸಮಾಜಮುಖಿ ಮನಸ್ಸುಳ್ಳ ವಕೀಲೆ ಮತ್ತು ಅಡ್ಡ ದಾರಿಗೆ ಇಳಿದ ಹುಡುಗರನ್ನು ಸರಿದಾರಿಗೆ ತರುವ ನಿವೃತ್ತ ಪೊಲೀಸ್ ಅಧಿಕಾರಿಯ ಸುತ್ತ ಇಡಿ ಕಥನವನ್ನು ಕಟ್ಟಿಕೊಟ್ಟಿದ್ದಾರೆ.
ವಕೀಲೆ ಪ್ರತಿಮಾ (ಸಂಗೀತ ಭಟ್) ಹಾಗು ನಿವೃತ್ತ ಪೊಲೀಸ್ ಅಧಿಕಾರಿ ರಾಜೇಶ್ (ಅಚ್ಯುತ್ ಕುಮಾರ್) ಅವರಿಗೆ ಟಾಸ್ಕ್ ಪಡೆದ ವಿಷ್ಣು (ಸಾಗರ್ ರಾಮ್) ಹಾಗು ಕಂಠಿ ( ಜಯಸೂರ್ಯ ) ಕೊಟ್ಟ ಕೆಲಸ ಪೂರ್ಣಗೊಳಿಸಲು ಮಡಿಕೇರಿಗೆ ತೆರಳುತ್ತಾರೆ, ಅಲ್ಲಿ ಸಿರಿ ( ಶ್ರೀಲಕ್ಷ್ಮಿ)ಯನ್ನು ಅಪಹರಣ ಮಾಡಿ ಬರುವ ಮಾರ್ಗಮಧ್ಯೆ ಕ್ರೂರಿ ಭರಮಪ್ಪ ( ರಾಘು ಶಿವಮೊಗ್ಗ)ನ ಪ್ರವೇಶ.
ಈ ನಡುವೆ ಸೂರ್ಯ ಪ್ರಕಾಶ್ (ಬಾಲಾಜಿ ಮನೋಹರ್) ನಡೆಸುವ ದಂಧೆಗೆ ಹಲವು ಪೊಲೀಸ್ ಅಧಿಕಾರಿಗಳು ಸಾಥ್ ಕೊಟ್ಟವರು, ಇಷ್ಟಕ್ಕೂ ಸೂರ್ಯ ಪ್ರಕಾಶ್ ನಡೆಸುವ ಕೆಲಸ ಆದರೂ ಏನು.. ಟಾಸ್ಕ್ ಪಡೆದು ಹೊರಟ ಹುಡುಗರು ಅದನ್ನು ಸಾಧಿಸುತ್ತಾರಾ. ಈ ನಡುವೆ ಪ್ರತಿಮಾ ಮತ್ತು ರಾಜೇಶ್ ಅವರ ಕೆಲಸ ಈಡೇರುತ್ತಾ ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ನಿರ್ದೇಶಕ ರಾಘು ಶಿವಮೊಗ್ಗ, ನಿರ್ದೇಶನದ ಜೊತೆ ಭರಮಪ್ಪನ ಪಾತ್ರಕ್ಕೆ ಜೀವತುಂಬಿದ್ದಾರೆ. ಚಿತ್ರದಲ್ಲಿ ವಿಲನ್ ಗಳು ಇದ್ದರೂ ತಮ್ಮದೇ ಪಾತ್ರಕ್ಕೆ ಒಂದು ತೂಕ ಹೆಚ್ಚಿನ ಒತ್ತು ಕೊಟ್ಟು ಚಿತ್ರಿಸಿದ್ದಾರೆ.ಹೀಗಾಗಿ ಸ್ತ್ರೀಪೀಡಕನಾಗಿ ಗಮನ ಸೆಳೆದಿದ್ದಾರೆ
ಕಂಠಿಯ ಪಾತ್ರದಲ್ಲಿ ಜಯಸೂರ್ಯ ಮತ್ತು ವಿಷ್ಣು ಪಾತ್ರದಲ್ಲಿ ಸಾಗರ್ ರಾಮ್ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಜೊತೆಗೆ ಆಕ್ಷನ್ ಸನ್ನಿವೇಶದಲ್ಲಿ ಮಿಂಚಿದ್ದಾರೆ ಕನ್ನಡ ಚಿತ್ರರಂಗಕ್ಕೆ ಇನ್ನೊಂದಿಷ್ಟು ಸಿದ್ದತೆ ಮತ್ತು ತರಬೇತಿ ಪಡೆದರೆ ಆಕ್ಷನ್ ಹಿರೋ ಆಗಿ ಗುರುತಿಸಿಕೊಳ್ಳುವಲ್ಲಿ ಯಾವುದೇ ಅನುಮಾನವಿಲ್ಲ.
ಅಚ್ಯುತ್ ಕುಮಾರ್, ಸಂಗೀತ ಭಟ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹರಿಣಿ, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಬಾಲಾಜಿ ಮಮೋಹರ್, ಅರವಿಂದ್ ಕುಪ್ಲಿಕರ್, ಶ್ರೀಲಕ್ಷ್ಮಿ ಸೇರಿದಂತೆ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ
ಅರ್ಜುನ್ ರಾಮ್ ಆಕ್ಷನ್ ಸನ್ನಿವೇಶ ಚಿತ್ರದ ಹೈಲೈಟ್ಗಳಲ್ಲಿ ಒಂದು.ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

